ವಿಶ್ವ ಅಯೋಡಿನ್ ದಿನ ಮತ್ತು ಸಪ್ತಾಹ ಆಚರಣೆ
![ವಿಶ್ವ ಅಯೋಡಿನ್ ದಿನ ಮತ್ತು ಸಪ್ತಾಹ ಆಚರಣೆ ವಿಶ್ವ ಅಯೋಡಿನ್ ದಿನ ಮತ್ತು ಸಪ್ತಾಹ ಆಚರಣೆ](https://www.varthabharati.in/sites/default/files/images/articles/2020/11/11/267023-1605104017.jpg)
ಉಡುಪಿ, ನ.11: ಉಡುಪಿ ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರಾಷ್ಟ್ರೀಯ ಆರೋಗ್ಯ ಅಭಿಯಾನ, ಜಿಲ್ಲಾ ಸರ್ವೇಕ್ಷಣಾ ಘಟಕ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಉಡುಪಿ ಹಾಗೂ ನವಚೇತನಾ ಯುವಕ ಮಂಡಲ ಕುತ್ಪಾಡಿ ಇವರ ಸಂಯುಕ್ತ ಆಶ್ರಯದಲ್ಲಿ ವಿಶ್ವ ಅಯೋಡಿನ್ ದಿನ ಮತ್ತು ಸಪ್ತಾಹ ಆಚರಣೆ ಇತ್ತೀಚೆಗೆ ಉದ್ಯಾವರ ಕುತ್ಪಾಡಿ ನವಚೇತನಾ ಸಭಾಭವನದಲ್ಲಿ ನಡೆಯಿತು.
ಉಡುಪಿ ಜಿಪಂ ಅಧ್ಯಕ್ಷ ದಿನಕರ ಬಾಬು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಶೀಲಾ ಕೆ. ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿ, ಅಡುಗೆಯಲ್ಲಿ ಅಯೋಡಿನ್ಯುಕ್ತ ಉಪ್ಪು ಬಳಸುವುದರ ಮೂಲಕ ಇಡೀ ಕುಟುಂಬದ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದರು.
ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ವಾಸುದೇವ ಉಪಾಧ್ಯಾಯ ಕಾರ್ಯಕ್ರಮದ ಉದ್ದೇಶ ಬಗ್ಗೆ ಮಾತನಾಡಿ, ದಿನ ನಿತ್ಯದ ಆಹಾರದಲ್ಲಿ ಅಯೋಡಿನ್ ಯುಕ್ತ ಉಪ್ಪನ್ನೇ ಬಳಸಿ. ಅಯೋಡಿನ್ ಕೊರತೆಯ ನ್ಯೂನ್ಯತೆಗಳನ್ನು ತಡೆಗಟ್ಟಿ ಎಂದರು. ಅಯೋಡಿನ್ ಕೊರತೆಯಿಂದ ಮಕ್ಕಳಲ್ಲಿ, ವಯಸ್ಕರಲ್ಲಿ ಹಾಗೂ ಗರ್ಭಿಣಿಯರಲ್ಲಿ ಉಂಟಾಗುವ ಸಮಸ್ಯೆಗಳ ಕುರಿತು ವಿವರಿಸಿ, ಎಲ್ಲರೂ ತಪ್ಪದೇ ಅಯೋಡಿನ್ ಯುಕ್ತ ಉಪ್ಪು ಬಳಸುವಂತೆ ಸೂಚಿಸಿದರು.
ಉಪ್ಪಿನಲ್ಲಿ ಅಯೋಡಿನ್ ಪರೀಕ್ಷೆ ಬಗ್ಗೆ ಪ್ರಾತ್ಯಕ್ಷಿಕೆ ನೀಡಲಾಯಿತು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ರೋಹಿತ್ ಎಚ್. ಅಯೋಡಿನ್ ಬಗ್ಗೆ ಮಾಹಿತಿಯುಳ್ಳ ಕರಪತ್ರವನ್ನು ಅನಾವರಣಗೊಳಿಸಿದರು.
ಕಾರ್ಯಕ್ರಮದಲ್ಲಿ ಕಡೆಕಾರು ಗ್ರಾಪಂ ಆಡಳಿತಾಧಿಕಾರಿ ಡಾ. ಸಂದೀಪ ಶೆಟ್ಟಿ, ಎಸ್ಕೆಆರ್ಡಿಪಿಯ ಕೋಶಾಧಿಕಾರಿ ಆಶಾ, ನವಚೇತನಾ ಯುವಕ ಮಂಡಲದ ಅಧ್ಯಕ್ಷ ಕಿಶೋರ್ ಮತ್ತಿತರರು ಉಪಸ್ಥಿತರಿದ್ದರು.
ಜಿಲ್ಲಾ ಆಸ್ಪತ್ರೆಯ ಆಪ್ತ ಸಮಾಲೋಚಕ ಮನು ಎಸ್.ಬಿ ಸ್ವಾಗತಿಸಿದರು, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಜಯ ಬಾಯಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.