ನಾಯಕತ್ವ ಬದಲಾವಣೆ ಬಗ್ಗೆ ಬಿಜೆಪಿಯಲ್ಲಿ ಚರ್ಚೆಯೇ ಆಗಿಲ್ಲ: ಸಂಸದ ನಳಿನ್
![ನಾಯಕತ್ವ ಬದಲಾವಣೆ ಬಗ್ಗೆ ಬಿಜೆಪಿಯಲ್ಲಿ ಚರ್ಚೆಯೇ ಆಗಿಲ್ಲ: ಸಂಸದ ನಳಿನ್ ನಾಯಕತ್ವ ಬದಲಾವಣೆ ಬಗ್ಗೆ ಬಿಜೆಪಿಯಲ್ಲಿ ಚರ್ಚೆಯೇ ಆಗಿಲ್ಲ: ಸಂಸದ ನಳಿನ್](https://www.varthabharati.in/sites/default/files/images/articles/2020/11/12/267125-1605184243.jpg)
ಉಡುಪಿ, ನ.12: ಬಿಜೆಪಿ ನಾಯಕತ್ವದ ಬಗ್ಗೆ ಕಾಂಗ್ರೆಸ್ ಜನರಲ್ಲಿ ಗೊಂದಲ ಸೃಷ್ಟಿಸುವ ಕೆಲಸ ಮಾಡುತ್ತಿದೆ. ಆದರೆ ಬಿಜೆಪಿಯಲ್ಲಿ ಯಡಿಯೂರಪ್ಪ ನಾಯಕತ್ವ ಬದಲಾವಣೆಯ ಚರ್ಚೆಯೇ ನಡೆದಿಲ್ಲ. ಮುಂದಿನ ಎರಡುವರೆ ವರ್ಷಗಳ ಕಾಲ ಯಡಿಯೂರಪ್ಪನೇ ಮುಖ್ಯ ಮಂತ್ರಿಯಾಗಿ ನಮ್ಮ ಸರ್ವಸಮ್ಮತ ನಾಯಕ ಆಗಿರುತ್ತಾರೆಂದು ಬಿಜೆಪಿ ರಾಜಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಉಡುಪಿ ಕರಾವಳಿ ಬೈಪಾಸ್ನಲ್ಲಿರುವ ಹೋಟೆಲ್ ಶಾರದಾ ಇಂಟರ್ ನ್ಯಾಷನಲ್ನ ಸಭಾಂಗಣದಲ್ಲಿ ಗುರುವಾರ ಆಯೋಜಿಸಲಾದ ಬಿಜೆಪಿ ಪ್ರಶಿಕ್ಷಣ ಪ್ರಕೋಷ್ಠ ಮಂಗಳೂರು ವಿಭಾಗ ಮಟ್ಟದ ‘ವಿಷಯ ಪ್ರಮುಖರ ಪ್ರಶಿಕ್ಷಣ ವರ್ಗ’ವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಕಾಂಗ್ರೆಸ್ನಲ್ಲಿ ಈಗಲೇ ಯಾರು ಮುಖ್ಯಮಂತ್ರಿ ಎಂಬ ಚರ್ಚೆಗಳು ಆರಂಭವಾಗಿವೆ. ಝಮೀರ್ ಅಹ್ಮದ್ ಸಿದ್ದರಾಮಯ್ಯನೇ ಮುಖ್ಯಮಂತ್ರಿ ಆಗುತ್ತಾರೆ ಎಂದು ಹೇಳಿದರೆ, ಸೌಮ್ಯಾ ರೆಡ್ಡಿ, ಡಿಕೆ ಶಿವಕುಮಾರ್ ಮುಖ್ಯ ಮಂತ್ರಿ ಎಂದು ಹೇಳುತ್ತಿದ್ದಾರೆ. ಇಂದು ನಾಯಕತ್ವದ ಗೊಂದಲ ಇರುವುದು ಕಾಂಗ್ರೆಸ್ನಲ್ಲಿಯೇ ಹೊರತು ಬಿಜೆಪಿಯಲ್ಲಿ ಅಲ್ಲ. ಈ ಮೂಲಕ ಕಾಂಗ್ರೆಸ್ನಲ್ಲಿ ಸಂಗೀತ ಕುರ್ಚಿ ಸ್ಪರ್ಧೆ ಆರಂಭವಾಗಿದೆ ಎಂದು ಅವರು ದೂರಿದರು.
ಕಾಂಗ್ರೆಸ್ ಈಗ ಮುಳುಗುವ ಹಡಗು ಆಗುತ್ತಿದೆ. ಮುಂದೆ ಬರುವ ಪಂಚಾಯತ್ ಚುನಾವಣೆಗಳಲ್ಲಿ ಬಿಜೆಪಿ ಶೇ.80ರಷ್ಟು ಸ್ಥಾನಗಳನ್ನು ಗೆಲ್ಲು ತ್ತದೆ. ಸದ್ಯದಲ್ಲೇ ಬರುವ ಎರಡು ವಿಧಾನಸಭೆ, ಒಂದು ಲೋಕಸಭಾ ಉಪ ಚುನಾವಣೆಯಲ್ಲಿ ಬಿಜೆಪಿ ನೂರಕ್ಕೆ ನೂರು ಗೆಲ್ಲುತ್ತದೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 30 ಸ್ಥಾನಕ್ಕಿಂತ ಹೆಚ್ಚು ಸ್ಥಾನ ಗೆಲ್ಲದಂತೆ ನಾವು ನೋಡಿಕೊಳ್ಳುತ್ತೇವೆ ಎಂದು ಅವರು ಹೇಳಿದರು.
ಕಾಂಗ್ರೆಸ್ನಲ್ಲಿ ಸ್ವಯಂಘೋಷಿತ ನಾಯಕರೇ ಹೆಚ್ಚಾಗಿದ್ದಾರೆ. ನಾನು ಬಂಡೆ -ನಾನು ಹುಲಿಯ ಅಂತ ಹೆಸರು ಇಟ್ಟುಕೊಂಡಿದ್ದಾರೆ. ತಾಲಿಬಾನಿಗಳು ಕೂಡಾ ಇದೇ ರೀತಿ ಹೆಸರು ಇಟ್ಟುಕೊಳ್ಳುತ್ತಾರೆ. ಬಂಡೆಯನ್ನು ಹುಲಿ ದೂಡಿ ಹಾಕಿದೆ. ಹುಲಿಯಾನನ್ನ ಬಂಡೆ ದೂಡಿ ಹಾಕಿದೆ. ಇವತ್ತು ಹುಲಿಯೂ ಇಲ್ಲ, ಬಂಡೆಯೂ ಇಲ್ಲ ಎಂದು ಅವರು ಲೇವಡಿ ಮಾಡಿದರು.
ವೇದಿಕೆಯಲ್ಲಿ ಬಿಜೆಪಿ ಮಂಗಳೂರು ವಿಭಾಗೀಯ ಸಹ ಪ್ರಭಾರಿ ಗೋಪಾಲಕೃಷ್ಣ ಹೇರ್ಳೆ, ಪ್ರಶಿಕ್ಷಣ ವರ್ಗದ ರಾಜ್ಯ ತಂಡದ ಸದಸ್ಯೆ ಮಂಜುಳಾ, ಬಿಜೆಪಿ ದ.ಕ. ಜಿಲ್ಲಾಧ್ಯಕ್ಷ ಸುದರ್ಶನ್ ಉಪಸ್ಥಿತರಿದ್ದರು.
ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಸ್ವಾಗತಿಸಿ ದರು. ಬಿಜೆಪಿ ಮಂಗಳೂರು ವಿಭಾಗೀಯ ಪ್ರಭಾರಿ ಉದಯ ಕುಮಾರ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮನೋಹರ್ ಕಲ್ಮಾಡಿ ವಂದಿಸಿದರು. ರಘುವೀರ್ ಶೆಣೈ ಕಾರ್ಯಕ್ರಮ ನಿರೂಪಿಸಿದರು