ಸುಪ್ರೀಂ ಕೋರ್ಟ್ ನಲ್ಲಿ ಬಾಕಿಯಿರುವ ಜಾಮೀನು ಅಪೀಲುಗಳ ಕುರಿತು ಆರ್ ಟಿ ಐ ಅರ್ಜಿ ಸಲ್ಲಿಸಿದ ಸಾಕೇತ್ ಗೋಖಲೆ
ಹೊಸದಿಲ್ಲಿ: ಮಧ್ಯಂತರ ಜಾಮೀನು ಕೋರಿ ಸಲ್ಲಿಸಲಾದ ಎಷ್ಟು ಅಪೀಲುಗಳು ಬಾಕಿಯಿವೆ ಹಾಗೂ ಇಂತಹ ಅಪೀಲುಗಳನ್ನು ವಿಚಾರಣೆಗೆ ಕೈಗೆತ್ತಿಕೊಳ್ಳಲು ಸರಾಸರಿ ಎಷ್ಟು ಸಮಯ ತೆಗೆದುಕೊಳ್ಳಲಾಗುತ್ತಿದೆ ಎಂಬುದರ ಕುರಿತು ಮಾಹಿತಿ ಕೋರಿ ಆರ್ ಟಿ ಐ ಕಾರ್ಯಕರ್ತ ಸಾಕೇತ್ ಗೋಖಲೆ ಅವರು ಸುಪ್ರೀಂ ಕೋರ್ಟ್ ನಲ್ಲಿ ಆರ್ ಟಿ ಐ ಅರ್ಜಿ ಸಲ್ಲಿಸಿದ್ದಾರೆ.
ರಿಪಬ್ಲಿಕ್ ಟಿವಿಯ ಮುಖ್ಯ ಸಂಪಾದಕ ಅರ್ನಬ್ ಗೋಸ್ವಾಮಿ ತಮ್ಮ ಬಂಧನ ಪ್ರಶ್ನಿಸಿ ಹಾಗೂ ಮಧ್ಯಂತರ ಜಾಮೀನು ಕೋರಿ ನವೆಂಬರ್ 9ರಂದು ಸಲ್ಲಿಸಿದ ಅಪೀಲಿನ ಮೇಲಿನ ವಿಚಾರಣೆಯನ್ನು ನವೆಂಬರ್ 11ರಂದು ನಡೆಸಿ ಅವರಿಗೆ ಸುಪ್ರೀಂ ಕೋರ್ಟ್ ಜಾಮೀನು ನೀಡಿದ ನಂತರದ ಬೆಳವಣಿಗೆ ಇದಾಗಿದೆ.
ಗೋಸ್ವಾಮಿಯ ಅಪೀಲನ್ನು ತುರ್ತು ವಿಚಾರಣೆಗೆ ಕೈಗೆತ್ತಿಕೊಂಡ ಸುಪ್ರೀಂ ಕೋರ್ಟ್ ಕ್ರಮವನ್ನು ಖಂಡಿಸಿ ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಶನ್ನ ಅಧ್ಯಕ್ಷ ದುಷ್ಯಂತ್ ದವೆ ಕೂಡ ಸುಪ್ರೀಂ ಕೋರ್ಟ್ ಸೆಕ್ರಟರಿ ಜನರಲ್ ಅವರಿಗೆ ಪತ್ರ ಬರೆದಿದ್ದರು. ಇದಕ್ಕೆ ಆಕ್ಷೇಪ ಸೂಚಿಸಿ ಅರ್ನಬ್ ಅವರ ಪತ್ನಿ ಸಮ್ಯಬ್ರತಾ ರೇ ಗೋಸ್ವಾಮಿ ಸುಪ್ರೀಂ ಕೋರ್ಟ್ ಸೆಕ್ರಟರಿ ಜನರಲ್ ಅವರಿಗೆ ಪತ್ರ ಬರೆದಿದ್ದರು.