ಹಮೀದ್ ಷಾ ಕಾಂಪ್ಲೆಕ್ಸ್ ಗೆ ಮುಸ್ಲಿಂ ಜಮಾಅತ್ ಮುಖಂಡರ ಭೇಟಿ
ಬೆಂಗಳೂರು, ನ.13: ಮುಸ್ಲಿಂ ಜಮಾಅತ್ನ ಮಂಗಳೂರು ತಾಲೂಕು ಅಧ್ಯಕ್ಷ ಅಬ್ದುಲ್ ನಾಸಿರ್ ಲಕ್ಕಿಸ್ಟಾರ್ ಇಂದು ಜಿ.ಎ.ಬಾವಾ ನೇತೃತ್ವದಲ್ಲಿ ಹಮೀದ್ ಷಾ ಕಾಂಪ್ಲೆಕ್ಸ್ ನಲ್ಲಿ ಆಗಿರುವಂತ ಸಮಾಜ ಕಲ್ಯಾಣ ಕಾರ್ಯಗಳನ್ನು ವೀಕ್ಷಿಸಿದರು.
ವಕ್ಫ್ ಆಸ್ತಿಯನ್ನು ಸಮುದಾಯದ ಆರ್ಥಿಕ, ಶೈಕ್ಷಣಿಕ, ಆರೋಗ್ಯ ಮತ್ತು ಉದ್ಯೋಗ ಅವಕಾಶದ ಅಭಿವೃದ್ದಿಗೆ ವಿನಿಯೋಗಿಸಿದ ಜಿ.ಎ.ಬಾವಾರವರ ದೂರದೃಷ್ಟಿಯ ನಿರ್ಮಾಣಗಳ ಬಗ್ಗೆ ಮೆಚ್ಚುಗೆ ನುಡಿದರು. ಹತ್ತು ಡಯಾಲಿಸೀಸ್ ಮೆಷಿನ್ಗಳ ಮೂಲಕ ಉಚಿತ ಚಿಕಿತ್ಸೆ, ಉಚಿತ ಕ್ಲೀನಿಕ್ ಮತ್ತು ಮೆಡಿಸಿನ್, ಐಟಿಐ, ಮಹಿಳಾ ಹಾಸ್ಟೇಲ್, ಸಾವಿರಾರು ಮಕ್ಕಳ ಹೈಸ್ಕೂಲ್ ಸೇರಿದಂತೆ ಸ್ಕಿಲ್ ಡೆವಲಪ್ಮೆಂಟ್ ಸೆಂಟರ್ ನ ಕಾರ್ಯ ಯೋಜನೆಯು ಎಲ್ಲರಿಗೂ ಮಾದರಿ ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಹೈಕೋರ್ಟ್ ವಕೀಲ ಅಬ್ದುಲ್ ಮಜೀದ್ ಖಾನ್ ಮಾತನಾಡಿ, ಇಂತಹ ಕಾರ್ಯ ಯೋಜನೆಯು ಪ್ರತಿ ಜಿಲ್ಲೆಯಲ್ಲೂ ನಿರ್ಮಾಣ ಆಗಬೇಕು. ಅದಕ್ಕಾಗಿ ಅತ್ಯುತ್ತಮ ನಾಯಕತ್ವದ ಜೊತೆ, ರಚನಾತ್ಮಕ ಕಾರ್ಯ ವಿಧಾನಗಳು ಬೇಕು ಎಂದರು.
ಜಮಾಅತ್ ಡೆವಲಪ್ಮೆಂಟ್ ಸೆಂಟರ್ ಯೋಜನೆಯ ಚಿಂತನೆಯನ್ನು ಶ್ಲಾಘಿಸಿದ ಅವರು, ವಾಸ್ತವ ಪರಿಸ್ಥಿತಿಯನ್ನು ಅರ್ಥ ಮಾಡದೆ ಪರಿವರ್ತನೆಯ ಕನಸು ಕಾಣುವುದು ಹಾಸ್ಯಾಸ್ಪದ. ತಳಮಟ್ಟದ ಜನರ ಸ್ಥಿತಿಗತಿಗಳ ಬಗ್ಗೆ ನಮಗೆ ಸರಿಯಾದ ಅರಿವು ಇರಬೇಕು. ಹಾಗೇ ಅಂಕಿ ಅಂಶಗಳ ಆಧಾರದ ಮೂಲಕ ಪ್ರಗತಿಯ ಮಾರ್ಗಸೂಚಿಗಳನ್ನು ರೂಪಿಸಬೇಕು. ವಿಧ್ಯಾರ್ಥಿಗಳು ನಮ್ಮ ಮುಖ್ಯ ಗುರಿ ಆಗಿರಬೇಕು ಎಂದು ಅವರು ಹೇಳಿದರು.