ರಾಜ್ಯದ ಆಯ್ದ 5 ಕಡೆಗಳಲ್ಲಿ ಮೀನುಗಾರಿಕಾ ಕಾಲೇಜು ಸ್ಥಾಪನೆಗೆ ತೀರ್ಮಾನ: ಸಚಿವ ಕೋಟ
![ರಾಜ್ಯದ ಆಯ್ದ 5 ಕಡೆಗಳಲ್ಲಿ ಮೀನುಗಾರಿಕಾ ಕಾಲೇಜು ಸ್ಥಾಪನೆಗೆ ತೀರ್ಮಾನ: ಸಚಿವ ಕೋಟ ರಾಜ್ಯದ ಆಯ್ದ 5 ಕಡೆಗಳಲ್ಲಿ ಮೀನುಗಾರಿಕಾ ಕಾಲೇಜು ಸ್ಥಾಪನೆಗೆ ತೀರ್ಮಾನ: ಸಚಿವ ಕೋಟ](https://www.varthabharati.in/sites/default/files/images/articles/2020/11/13/267256-1605275159.jpg)
ಉಡುಪಿ, ನ.13: ಮಂಗಳೂರಿನಲ್ಲಿರುವ ಮೀನುಗಾರಿಕಾ ಕಾಲೇಜನ್ನು ವಿಶ್ವವಿದ್ಯಾನಿಲಯ ಆಗಿ ಪರಿವರ್ತಿಸಿ, ರಾಜ್ಯದ ಆಯ್ದ ಐದು ಕಡೆಗಳಲ್ಲಿ ಮೀನುಗಾರಿಕಾ ಕಾಲೇಜು ಗಳನ್ನು ಆರಂಭಿಸಲು ತೀರ್ಮಾನ ಮಾಡಲಾಗಿದೆ. ಈ ಮೂಲಕ ರಾಜ್ಯದಲ್ಲಿ ಮೀನುಗಾರಿಕೆಗೆ ಹೆಚ್ಚಿನ ಒತ್ತು ನೀಡುವ ಕಾರ್ಯ ಮಾಡಲಾಗುವುದು ಎಂದು ರಾಜ್ಯ ಮೀನುಗಾರಿಕೆ, ಬಂದರು ಮತ್ತು ಒಳ ಕಾಡು ಜಲಸಾರಿಗೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.
ಕಕ್ಕೆತೋಟ ಮೂಡುಕುದ್ರು ದುರ್ಗಾಪರಮೇಶ್ವರಿ ಭಜನಾ ಮಂದಿರದ ಸಮೀಪ ಶುಕ್ರವಾರ ಆಯೋಜಿಸಲಾದ ಪಂಜರ ಮೀನು ಕೃಷಿಯ ಬಗ್ಗೆ ಮಾಹಿತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಕಡಲು ಮೀನುಗಾರಿಕೆಯಲ್ಲಿ ಕರ್ನಾಟಕ ರಾಜ್ಯವು ಇಡೀ ದೇಶದಲ್ಲಿ ನಾಲ್ಕನೆ ಸ್ಥಾನದಲ್ಲಿದೆ. ಮೀನುಗಾರಿಕಾ ಕ್ಷೇತ್ರದ ಆಧುನೀಕರಣ, ಮೀನುಗಾ ರಿಕೆಗೆ ಬೇಕಾದ ಸೌಲಭ್ಯಗಳು, ಸಮಸ್ಯೆಗಳ ಪರಿಹಾರ, ಮೀನಿನ ಸಂರಕ್ಷಣೆ ಮತ್ತು ಸಾಗಾಟಕ್ಕೆ ಗಮನ, ಮೀನುಗಾರಿಕಾ ಉತ್ಪನ್ನ ತಯಾರಿಕೆಗೆ ಆದ್ಯತೆ ನೀಡುವ ಮೂಲಕ ಇಲಾಖೆ, ಮೀನುಗಾರರು ಮತ್ತು ಸರಕಾರ ಒಟ್ಟಾಗಿ ಶ್ರಮಿಸಿದರೆ ಮುಂದಿನ ಮೂರು ವರ್ಷಗಳಲ್ಲಿ ಕರ್ನಾಟಕ ಒಂದನೆ ಸ್ಥಾನಕ್ಕೆ ತಲುಪಬಹುದು ಎಂದರು.
ದೇಶದಲ್ಲಿ ಕರ್ನಾಟಕ ರಾಜ್ಯವು ಒಳನಾಡು ಮೀನುಗಾರಿಕೆಯಲ್ಲಿ 9ನೆ ಸ್ಥಾನ ದಲ್ಲಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ನೂತನವಾದ ಅಕ್ವೇರಿಯಂ ನಿರ್ಮಿಸಲು ಕೇಂದ್ರ ಮತ್ತು ರಾಜ್ಯ ಸರಕಾರ ಬಹು ದೊಡ್ಡ ಯೋಜನೆಯನ್ನು ರೂಪಿಸಿದೆ. ಮತ್ಸ ಖಾದ್ಯಗಳನ್ನು ರೈಲಿನಲ್ಲಿ ವಿತರಣೆ ಮಾಡುವ ಬಗ್ಗೆ ರೈಲ್ವೆ ಇಲಾಖೆ ಯೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಇದರಿಂದ ನೂರಾರು ಕೋಟಿ ರೂ. ವ್ಯವಹಾರ ಮಾಡಬಹುದು ಎಂಬುದು ನಮ್ಮ ಆಶಯ ಆಗಿದೆ ಎಂದು ಅವರು ಹೇಳಿದರು.
ಸಿಂಗಾಪುರದಲ್ಲಿ ವರ್ಷಕ್ಕೆ 40-50ದಶಲಕ್ಷ ಡಾಲರ್ನಷ್ಟು ಅಲಂಕಾರಿಕ ಮೀನುಗಳನ್ನು ರಫ್ತು ಮಾಡಲಾಗುತ್ತಿದೆ. ನಿಸರ್ಗವಾಗಿ ಬಹಳ ದೊಡ್ಡ ಸಂಪತ್ತು ಹೊಂದಿರುವ ಭಾರತವು ಇದರಲ್ಲಿ ಶೇ.1ರಷ್ಟು ಕೂಡ ತಲುಪಿಲ್ಲ. ಅದಕ್ಕಾಗಿ ನಮ್ಮಲ್ಲಿಯೂ ಅಲಂಕಾರಿಕಾ ಮೀನುಗಳ ಸಾಕಾಣಿಕೆ ಮತ್ತು ಯುವಕರಿಗೆ ಉದ್ಯೋಗಾವಕಾಶಗಳನ್ನು ಕಲ್ಪಿಸುವ ಯೋಜನೆಗಳು ಇಲಾಖೆ ಮುಂದೆ ಇದೆ ಎಂದು ಅವರು ತಿಳಿಸಿದರು.
ಮಲ್ಪೆ ಕರಾವಳಿ ಕಾವಲು ಪೊಲೀಸ್ ಅಧೀಕ್ಷಕ ಚೇತನ್ ಆರ್., ಮೀನು ಗಾರಿಕಾ ಇಲಾಖೆಯ ಉಪನಿರ್ದೇಶಕ ಗಣೇಶ್ ಕೆ., ಮಣಿಪಾಲ ಎಂಐಟಿಯ ಪ್ರೊಫೆಸರ್ ಡಾ.ಮನೋಹರ್ ಪೈ ಎಂ.ಎಂ., ಕಲ್ಯಾಣಪುರ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಯೋಗಿತಾ ಬಿ., ನಗರಸಭೆ ಸದಸ್ಯ ವಿಜಯ ಕೊಡವೂರು, ಗ್ರಾಪಂ ಮಾಜಿ ಸದಸ್ಯ ವಿಶು ಕುಮಾರ್ ಕಲ್ಯಾಣಪುರ, ನಿತ್ಯಾನಂದ ಕರ್ಕೇರ ಉಪಸ್ಥಿತರಿದ್ದರು.
‘ಕಡಲು ಆ್ಯಪ್’ ಬಿಡುಗಡೆ
ಕರಾವಳಿ ಕಾವಲು ಪೊಲೀಸ್ ಹಾಗೂ ಮೀನುಗಾರಿಕಾ ಇಲಾಖೆಯ ಸಹ ಯೋಗದಲ್ಲಿ ‘ಕಡಲು ಆ್ಯಪ್’ನ್ನು ಸಚಿವ ಕೋಟ ಶ್ರೀನಿವಾಸ ಪೂಜಾರಿ ಇದೇ ಸಂದರ್ಭದಲ್ಲಿ ಬಿಡುಗಡೆಗೊಳಿಸಿದರು.
ಮೀನುಗಾರರು ಮತ್ತು ಅವರ ದೋಣಿಗಳ ಚಲನವಲನಗಳ ಮೇಲೆ ನಿಗಾ ಇಡುವ ಕಲ್ಪನೆಯೊಂದಿಗೆ ಈ ಆ್ಯಪ್ನ್ನು ತಯಾರಿಸಲಾಗಿದೆ. ಅದೇ ರೀತಿ ಮೀನುಗಾರರಿಗೆ ಸಮಸ್ಯೆಗಳಾದರೆ ತಕ್ಷಣ ಸ್ಪಂದಿಸಲು, ಕರಾವಳಿಯ ರಕ್ಷಣೆ ಮತ್ತು ಭದ್ರತೆ ಹಾಗೂ ಯಾವುದೇ ಅನಾಹುತಗಳು ಸಂಭವಿಸದಂತೆ ನೋಡಿ ಕೊಳ್ಳಲು ಈ ಆ್ಯಪ್ ಸಹಕಾರಿಯಾಗಿದೆ. ಆದುದರಿಂದ ಮೀನುಗಾರರ ಮುಖಂಡರು ಈ ಆ್ಯಪ್ನ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಚಿವ ಕೋಟ ತಿಳಿಸಿದರು.