ನೈಸರ್ಗಿಕ ವಿಪತ್ತು: ಕೇಂದ್ರದಿಂದ ಕರ್ನಾಟಕಕ್ಕೆ 577.84 ಕೋ. ರೂ. ನೆರವು
ಒಟ್ಟು ಆರು ರಾಜ್ಯಗಳಿಗೆ 4,382 ಕೋ. ರೂ. ಬಿಡುಗಡೆ
ಹೊಸದಿಲ್ಲಿ, ನ. 13: ಪ್ರವಾಹದಿಂದ ಸಂತ್ರಸ್ತವಾಗಿರುವ ಕರ್ನಾಟಕಕ್ಕೆ ಕೇಂದ್ರ ಸರಕಾರ ರಾಷ್ಟ್ರೀಯ ನೈಸರ್ಗಿಕ ವಿಪತ್ತು ಪರಿಹಾರ ನಿಧಿ (ಎನ್ಡಿಆರ್ಎಫ್)ಯಿಂದ 577.84 ಕೋಟಿ ರೂಪಾಯಿ ಮುಂಗಡ ನೆರವು ಮಂಜೂರು ಮಾಡಿದೆ. ಈ ವರ್ಷ ಪ್ರಾಕೃತಿಕ ವಿಕೋಪ ಎದುರಿಸಿದ ಕರ್ನಾಟಕ ಸೇರಿದಂತೆ 6 ರಾಜ್ಯಗಳಿಗೆ ಕೇಂದ್ರದಿಂದ 4,382 ಕೋಟಿ ರೂಪಾಯಿ ನೆರವು ಬಿಡುಗಡೆ ಮಾಡಲು ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದ ಉನ್ನತ ಮಟ್ಟದ ಸಮಿತಿ ಶುಕ್ರವಾರ ಅನುಮೋದನೆ ನೀಡಿದೆ.
ಈ ವರ್ಷ ಚಂಡಮಾರುತ, ನೆರೆ, ಭೂಕುಸಿತದಿಂದ ಹಾನಿ ಎದುರಿಸಿರುವ ಪಶ್ಚಿಮಬಂಗಾಳ, ಒಡಿಶಾ, ಕರ್ನಾಟಕ, ಮಧ್ಯಪ್ರದೇಶ, ಮಹಾರಾಷ್ಟ್ರ ಹಾಗೂ ಸಿಕ್ಕಿಂಗಳಿಗೆ ಕೇಂದ್ರದ ನೆರವು ಬಿಡುಗಡೆಯಾಗಲಿದೆ. ಆರು ರಾಜ್ಯಗಳಿಗೆ ಎನ್ಡಿಆರ್ಎಫ್ನಿಂದ 4,381.88 ಕೋಟಿ ರೂಪಾಯಿ ಕೇಂದ್ರದ ಹೆಚ್ಚುವರಿ ನೆರವು ಬಿಡುಗಡೆಗೆ ಉನ್ನತ ಮಟ್ಟದ ಸಮಿತಿ ಅನುಮೋದನೆ ನೀಡಿದೆ ಎಂದು ಗೃಹ ಸಚಿವಾಲಯದ ಹೇಳಿಕೆ ತಿಳಿಸಿದೆ. ‘ಅಂಫಾನ್’ ಚಂಡ ಮಾರುತದಿಂದ ತತ್ತರಿಸಿರುವ ಪಶ್ಚಿಮಬಂಗಾಳಕ್ಕೆ 2,707.77 ಕೋಟಿ ರೂಪಾಯಿ, ಒಡಿಶಾಕ್ಕೆ 128.23 ಕೋಟಿ ರೂಪಾಯಿ; ‘ನಿಸರ್ಗ’ ಚಂಡಮಾರುತದಿಂದ ತತ್ತರಿಸಿರುವ ಮಹಾರಾಷ್ಟ್ರಕ್ಕೆ 268.59 ಕೋಟಿ ರೂಪಾಯಿ ನೆರವು ಬಿಡುಗಡೆ ಮಾಡಲು ಸಮಿತಿ ಅನುಮೋದನೆ ನೀಡಿದೆ.
ನೈಋತ್ಯ ಮಾನ್ಸೂನ್ ಸಂದರ್ಭ ಸಂಭವಿಸಿದ ನೆರೆ ಹಾಗೂ ಭೂಕುಸಿತದಿಂದ ಉಂಟಾದ ಹಾನಿಯ ಹಿನ್ನೆಲೆಯಲ್ಲಿ ಕರ್ನಾಟಕಕ್ಕೆ 577.84 ಕೋಟಿ ರೂಪಾಯಿ, ಮಧ್ಯಪ್ರದೇಶಕ್ಕೆ 611.61 ಕೋಟಿ ರೂಪಾಯಿ, ಸಿಕ್ಕಿಂಗೆ 87.84 ಕೋಟಿ ರೂಪಾಯಿ ನೆರವು ಬಿಡುಗಡೆ ಗೆ ಸಮಿತಿ ಅನುಮತಿ ನೀಡಿದೆ. ‘ಅಂಫಾನ್’ ಚಂಡಮಾರುತ ಅಪ್ಪಳಿಸಿದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ಮೇ 22ರಂದು ಸಂತ್ರಸ್ತ ರಾಜ್ಯಗಳಾದ ಪಶ್ಚಿಮಬಂಗಾಳ ಹಾಗೂ ಒಡಿಶಾಕ್ಕೆ ಭೇಟಿ ನೀಡಿದ್ದರು. ತತ್ಕ್ಷಣದ ಪರಿಹಾರವಾಗಿ ಮೇ 31ರಂದು ಪಶ್ಚಿಮಬಂಗಾಳಕ್ಕೆ 1,000 ಕೋಟಿ ರೂಪಾಯಿ ಹಾಗೂ ಒಡಿಶಾಕ್ಕೆ 500 ಕೋಟಿ ರೂಪಾಯಿ ನೆರವನ್ನು ಬಿಡುಗಡೆ ಮಾಡುವುದಾಗಿ ಪ್ರಕಟಿಸಿದ್ದರು.