ಪಂಚಾಯತ್ ಕಾರ್ಯದರ್ಶಿಯ ಮೇಲೆ ಹಲ್ಲೆ: ಕಂಪ್ಯೂಟರ್ ಬಾಬಾ ವಿರುದ್ಧ ಪ್ರಕರಣ ದಾಖಲು
ಇಂದೋರ್ (ಮ.ಪ್ರ),ನ.13: ಇಲ್ಲಿಗೆ ಸಮೀಪದ ಜಂಬುರ್ಡಿ ಹಾಪ್ಸಿ ಗ್ರಾಮದಲ್ಲಿರುವ ತನ್ನ ಆಶ್ರಮದಲ್ಲಿಯ ಅಕ್ರಮ ನಿರ್ಮಾಣಗಳ ನೆಲಸಮಕ್ಕೆ ಮುನ್ನ ಪಂಚಾಯತ್ ಕಾರ್ಯದರ್ಶಿಯ ಮೇಲೆ ಹಲ್ಲೆ ನಡೆಸಿದ್ದಕ್ಕಾಗಿ ಸ್ವಘೋಷಿತ ದೇವಮಾನವ ನಾಮದೇವ ದಾಸ ತ್ಯಾಗಿ ಅಲಿಯಾಸ್ ಕಂಪ್ಯೂಟರ್ ಬಾಬಾ (54) ವಿರುದ್ಧ ಹೊಸ ಪ್ರಕರಣವನ್ನು ಪೊಲೀಸರು ದಾಖಲಿಸಿದ್ದಾರೆ. ಆಶ್ರಮದ ಬಳಿಯ ಸರಕಾರಿ ಜಮೀನಿನಲ್ಲಿಯ ಅಕ್ರಮ ನಿರ್ಮಾಣಗಳನ್ನು ನೆಲಸಮಗೊಳಿಸಿದ ಸಂದರ್ಭ ಮುಂಜಾಗ್ರತೆ ಕ್ರಮವಾಗಿ ಬಂಧಿಸಲ್ಪಟ್ಟಿದ್ದ ತ್ಯಾಗಿ ಸದ್ಯ ಜೈಲಿನಲ್ಲಿದ್ದಾರೆ. ಗ್ರಾಮ ಪಂಚಾಯತ್ ಕಾರ್ಯದರ್ಶಿಯ ದೂರಿನ ಮೇರೆಗೆ ತ್ಯಾಗಿ ವಿರುದ್ಧ ಹೊಸ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದ್ದು, ಜೈಲಿನಲ್ಲಿ ವಿಧ್ಯುಕ್ತವಾಗಿ ಮರು ಬಂಧಿಸಲಾಗಿದೆ ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದರು.
ಅತಿಕ್ರಮಿಸಲಾಗಿದ್ದ ಸರಕಾರಿ ಭೂಮಿಯನ್ನು ತೆರವುಗೊಳಿಸಲು ಪಂಚಾಯತ್ ಕಾರ್ಯದರ್ಶಿ ರವಿವಾರ ಆಶ್ರಮಕ್ಕೆ ತೆರಳಿದ್ದಾಗ ತ್ಯಾಗಿ ಮತ್ತು ಅವರ ಸಹವರ್ತಿಗಳು ಅವಾಚ್ಯವಾಗಿ ನಿಂದಿಸಿ ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಉಪವಿಭಾಗೀಯ ದಂಡಾಧಿಕಾರಿಗಳ ನ್ಯಾಯಾಲಯವು ತ್ಯಾಗಿ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ ಬಳಿಕ ಅವರು ಹೆಚ್ಚುವರಿ ಸೆಷನ್ಸ್ ನ್ಯಾಯಾಲಯದಲ್ಲಿ ಸಲ್ಲಿಸಿದ್ದ ಮರುಪರಿಶೀಲನಾ ಅರ್ಜಿಯೂ ತಿರಸ್ಕೃತಗೊಂಡಿದೆ.
ಮಧ್ಯಪ್ರದೇಶದ ಹಿಂದಿನ ಕಾಂಗ್ರೆಸ್ ಸರಕಾರದಲ್ಲಿ ರಾಜ್ಯ ಸಚಿವ ಸ್ಥಾನಮಾನವನ್ನು ಪಡೆದಿದ್ದ ತ್ಯಾಗಿ ನದಿ ಸಂರಕ್ಷಣೆ ಟ್ರಸ್ಟ್ನ ಅಧ್ಯಕ್ಷರಾಗಿದ್ದರು.
ತ್ಯಾಗಿ ಅತಿಕ್ರಮಿಸಿಕೊಂಡಿದ್ದ 13 ಕೋ.ರೂ.ಮೌಲ್ಯದ 40,000 ಚದರಡಿ ಸರಕಾರಿ ಭೂಮಿಯನ್ನು ಮುಕ್ತಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.