ಗುಡಿಸಲುಗಳಿಗೆ ಬೆಂಕಿ ಹಚ್ಚಿದ ಪ್ರಕರಣ: ಪರಿಹಾರ ಕಲ್ಪಿಸುವ ಕುರಿತು ವಾರದೊಳಗೆ ವರದಿ ನೀಡಲು ಹೈಕೋರ್ಟ್ ನಿರ್ದೇಶನ

ಬೆಂಗಳೂರು, ನ.13: ನಗರದ ಕಾಚರಕನಹಳ್ಳಿ ಬಳಿಯ ಕೊಳೆಗೇರಿಯಲ್ಲಿ ವಲಸೆ ಕಾರ್ಮಿಕರಿಗೆ ಸೇರಿದ 90ಕ್ಕೂ ಹೆಚ್ಚು ಗುಡಿಸಲುಗಳಿಗೆ ಬೆಂಕಿ ಹಚ್ಚಿ ನಾಶಪಡಿಸಿರುವುದರಿಂದ ಸಂತ್ರಸ್ತ ಕಾರ್ಮಿಕರಿಗೆ ಪುನವರ್ಸಸತಿ ಹಾಗೂ ಪರಿಹಾರ ಕಲ್ಪಿಸುವ ಕುರಿತು ಮುಂದಿನ ಒಂದು ವಾರದಲ್ಲಿ ಸ್ಪಷ್ಟ ವರದಿ ನೀಡುವಂತೆ ಹೈಕೋರ್ಟ್ ರಾಜ್ಯ ಸರಕಾರಕ್ಕೆ ನಿರ್ದೇಶನ ನೀಡಿದೆ.
ಘಟನೆ ಕುರಿತು ವಕೀಲೆ ವೈಶಾಲಿ ಹೆಗ್ಡೆ ಬರೆದಿದ್ದ ಪತ್ರ ಆಧರಿಸಿ ದಾಖಲಿಸಿಕೊಂಡ ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಈ ವೇಳೆ ಸರಕಾರದ ಪರ ವಕೀಲ ವಿಕ್ರಂ ಹುಯಿಲ್ಗೋಳ ಪೀಠಕ್ಕೆ ಮಾಹಿತಿ ನೀಡಿ, ಗುಡಿಸಲು ಕಳೆದುಕೊಂಡಿರುವ ಕಾರ್ಮಿಕರಿಗೆ ಬದಲಿ ಜಾಗದಲ್ಲಿ ಸೂರು ಕಲ್ಪಸಿಕೊಡಲು ಪ್ರಯತ್ನಿಸುತ್ತಿದೆ ಎಂದರು. ಇದಕ್ಕೆ ಆಕ್ಷೇಪಿಸಿದ ಕಾರ್ಮಿಕರ ಪರ ವಕೀಲ ಕ್ಲಿಪ್ಟನ್ ರೋಜಾರಿಯೊ ಅವರು, ಕರ್ನಾಟಕ ಕೊಳಗೆರಿ ಪ್ರದೇಶಗಳ ಅಭಿವೃದ್ಧಿ ಕಾಯ್ದೆ 1973ರ ಕಾಯ್ದೆ ಸೆಕ್ಷನ್ 27(3)ರ ಪ್ರಕಾರ ಅವರಿರುವ ಸ್ಥಳದಲ್ಲಿಯೇ ಪುನರ್ವಸತಿ ಕಲ್ಪಿಸಿಕೊಡಬೇಕು. ಈಗಾಗಲೇ ಅದೇ ಜಾಗದಲ್ಲಿ ನಿವೇಶನಗಳನ್ನು ನಿರ್ಮಿಸಿ ಕೊಡಲಾಗಿದೆ. ಆದರೆ, ಕಾರ್ಮಿಕರ ವಿಚಾರಕ್ಕೆ ಬಂದರೆ ಅದು ಕೆರೆಗೆ ಸೇರಿದ ಜಾಗ ಎನ್ನುತ್ತಿದ್ದಾರೆ. ಸರಕಾರದ ಈ ಧೋರಣೆಯಿಂದಾಗಿ ಕಳೆದ ಆಗಸ್ಟ್ ನಿಂದ ಕಾರ್ಮಿಕರು ಟಾರ್ಪಲಿನ್ ಗುಡಿಸಲುಗಳಲ್ಲಿ ವಾಸಿಸುವಂತಾಗಿದೆ ಎಂದು ವಿವರಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ಸರಕಾರ ಮೊದಲು ಎಲ್ಲಿ ಪುನರ್ವಸತಿ ಕಲ್ಪಿಸಲಿದೆ ಎಂಬುದನ್ನು ಸ್ಪಷ್ಟಪಡಿಸಲಿ, ನಂತರ ಈ ಕುರಿತು ವಿಚಾರಿಸೋಣ ಎಂದಿತಲ್ಲದೇ, ಈ ವಿಚಾರದಲ್ಲಿ ಮತ್ತಷ್ಟು ಕಾಲ ಎಳೆದಾಡುವುದು ಸೂಕ್ತವಲ್ಲ. ಎಲ್ಲಿ ಪುನರ್ವಸತಿ ಕಲ್ಪಿಸಬೇಕು ಎಂಬ ಪ್ರಶ್ನೆಯನ್ನು ಇಟ್ಟುಕೊಂಡು ಕೂರುವುದು ಸರಿಯಲ್ಲ. ಹೀಗಾಗಿ ಸರಕಾರ ಮುಂದಿನ ಒಂದು ವಾರದೊಳಗೆ ಈ ಸಂಬಂಧ ಸ್ಪಷ್ಟನೆ ನೀಡಬೇಕು ಎಂದು ತಾಕೀತು ಮಾಡಿತು.
ಇನ್ನು ವಿಚಾರಣೆ ಸಂದರ್ಭದಲ್ಲಿ ಕಾರ್ಮಿಕರ ಪರ ವಾದಿಸಿದ ಹಿರಿಯ ನ್ಯಾಯವಾದಿ, ಮಾಜಿ ಅಡ್ವೊಕೇಟ್ ಜನರಲ್ ಪ್ರೊ. ರವಿವರ್ಮ ಕುಮಾರ್ ಅವರು, ಎನ್ಜಿಒ ಸಂಸ್ಥೆಯೊಂದು ಕಾರ್ಮಿಕರಲ್ಲಿ 33 ಮಂದಿಗೆ ಶೆಡ್ ನಿರ್ಮಿಸಿಕೊಡಲು ಸಿದ್ದವಿದೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ಬರೀ 33 ಮಂದಿಗೆ ನೀಡಿದರೆ ಅದು ಸರಿಹೋಗದು. ಘಟನೆಯಲ್ಲಿ 170 ಗುಡಿಸಲುಗಳು ನಾಶವಾಗಿವೆ. ಹೀಗಾಗಿ ಎಲ್ಲರಿಗೂ ಒಂದೇ ಮಾದರಿಯ ಪರಿಹಾರ ಅಗತ್ಯವಿದೆ ಎಂದಿತು. ಇದಕ್ಕೆ ಉತ್ತರಿಸಿದ ಪ್ರೊ. ರವಿವರ್ಮ ಕುಮಾರ್, ಈ ಕುರಿತು ಎಲ್ಲರಿಗೂ ಶೆಡ್ ನಿರ್ಮಿಸಿಕೊಡಲು ಸಾಧ್ಯವೇ ಎಂಬುದನ್ನು ಎನ್.ಜಿ.ಓ ಬಳಿ ವಿಚಾರಿಸಿ ಮಾಹಿತಿ ನೀಡುವುದಾಗಿ ತಿಳಿಸಿದರು.







