ಪತ್ರಕರ್ತ ಸಿದ್ದೀಕ್ ಕಪ್ಪನ್ ಜೊತೆಗಿದ್ದ ಮೂವರಿಗೆ ಜಾಮೀನು ನಿರಾಕರಿಸಿದ ಮಥುರಾ ನ್ಯಾಯಾಲಯ
ಮಥುರಾ: ಹತ್ರಸ್ ನಲ್ಲಿ ನಡೆದ ದಲಿತ ಯುವತಿಯ ಸಾಮೂಹಿಕ ಅತ್ಯಾಚಾರ, ಹತ್ಯೆ ಪ್ರಕರಣದ ಬಗ್ಗೆ ವರದಿ ಮಾಡಲು ತೆರಳುತ್ತಿದ್ದಾಗ ಮಾರ್ಗ ಮಧ್ಯ ಉತ್ತರ ಪ್ರದೇಶ ಪೊಲೀಸರು ಬಂಧಿಸಿದ್ದ ಕೇರಳದ ಪತ್ರಕರ್ತ ಸಿದ್ದಿಕ್ ಕಪ್ಪನ್ ಅವರ ಜತೆ ಪಿಎಫ್ಐ ಜತೆ ನಂಟು ಹೊಂದಿದ ಆರೋಪದಲ್ಲಿ ಬಂಧಿತರಾದ ಮೂವರು ಆರೋಪಿಗಳಿಗೆ ಜಾಮೀನು ನೀಡಲು ಮಥುರಾ ನ್ಯಾಯಾಲಯ ನಿರಾಕರಿಸಿದೆ.
ಹತ್ರಸ್ ನಲ್ಲಿ ಅತ್ಯಾಚಾರಕ್ಕೊಳಗಾದ 19 ವರ್ಷದ ದಲಿತ ಯುವತಿಯ ಕುಟುಂಬದವರನ್ನು ಭೇಟಿ ಮಾಡಲು ತೆರಳುತ್ತಿದ್ದ ಅತೀಫುರ್ರಹ್ಮಾನ್, ಮಸೂದ್ ಅಹ್ಮದ್ ಮತ್ತು ಮುಹಮ್ಮದ್ ಆಲಂ ಅವರನ್ನು ಪತ್ರಕರ್ತ ಕಪ್ಪನ್ ಜತೆ ಅಕ್ಟೋಬರ್ 5ರಂದು ಬಂಧಿಸಲಾಗಿತ್ತು. ಮರುದಿನ ನಾಲ್ಕು ಮಂದಿಯ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯ್ದೆ ಮತ್ತು ದೇಶದ್ರೋಹ ಸೇರಿದಂತೆ ಭಾರತೀಯ ದಂಡಸಂಹಿತೆಯ ವಿವಿಧ ಕಲಂಗಳ ಅನ್ವಯ ಪ್ರಕರಣ ದಾಖಲಿಸಲಾಗಿತ್ತು.
ರಹ್ಮಾನ್ ವಿದ್ಯಾರ್ಥಿಯಾಗಿದ್ದರೆ, ಅಹ್ಮದ್ ಪಿಎಚ್ಡಿ ಮಾಡುತ್ತಿದ್ದು, ಸಾಮಾಜಿಕ ಹೋರಾಟಗಾರರು. ಮೂರನೇ ಆರೋಪಿ ಆಲಂ ಕಾರು ಚಾಲಕ.
Next Story