ಸರಕಾರದ ಗೊಂದಲದ ನಿರ್ಣಯ: ಹಾಕಿದ ಬಂಡವಾಳ ನಿರೀಕ್ಷೆಯಲ್ಲಿ ಪಟಾಕಿ ಮಾರಾಟಗಾರರು

ಬೆಂಗಳೂರು, ನ. 15: ಈ ಬಾರಿಯ ಬೆಳಕಿನ ಹಬ್ಬ ದೀಪಾವಳಿಗೆ ರಾಜ್ಯ ಸರಕಾರ ಹಸಿರು ಪಟಾಕಿ ಮಾರಾಟಕ್ಕೆ ಮಾತ್ರ ಅನುಮತಿ ನೀಡಿದ್ದರಿಂದ ಪಟಾಕಿ ಮಾರಾಟಗಾರರು ಹಾಕಿದ ಬಂಡವಾಳ ಬಂದರೆ ಸಾಕು ಎಂಬ ಪರಿಸ್ಥಿತಿಗೆ ಬಂದಿದ್ದಾರೆ.
ರಾಜ್ಯ ಸರಕಾರದ ಗೊಂದಲದ ನಿರ್ಣಯಗಳಿಂದಾಗಿ ಪಟಾಕಿ ವ್ಯಾಪಾರಿಗಳು ಸಂಕಷ್ಟಕ್ಕೆ ಸಿಲುಕುವಂತಾಗಿದ್ದು, ರಾಜ್ಯದಲ್ಲಿ ಈ ಬಾರಿ ಪಟಾಕಿ ವಹಿವಾಟು ಶೇ.50ರಷ್ಟು ಕುಸಿದಿದೆ ಎನ್ನಲಾಗುತ್ತಿದೆ. ಪಟಾಕಿ ಮಾರಾಟದ ಲೈಸೆನ್ಸ್ ರಿನೆವಲ್ ಮಾಡಿಸಿರುವ ಪರಿಣಾಮ ಅನಿವಾರ್ಯವಾಗಿ ಪಟಾಕಿ ಮಾರಾಟ ಮಾಡುವಂತಾಗಿದೆ. ಮಾರಾಟದಿಂದ ಲಾಭ ಬರುವುದಿರಲಿ, ಹಾಕಿದ ಬಂಡವಾಳ ಕೈ ಸೇರುವುದು ಅನುಮಾನ ಎಂಬಂತಾಗಿದೆ.
ಸಾಂಪ್ರದಾಯಿಕ ಪಟಾಕಿ ಸಿಡಿಸಿದರೆ ಕೇಸು ದಾಖಲಾಗುವುದು ಎಂದು ಸರಕಾರ ಎಚ್ಚರಿಕೆ ನೀಡಿದ್ದರಿಂದ ಗ್ರಾಹಕರು ಪಟಾಕಿ ಖರೀದಿಗೆ ಹಿಂದೇಟು ಹಾಕುತ್ತಿದ್ದಾರೆ. ಪ್ರತಿ ವರ್ಷ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪಟಾಕಿ ಮಾರಾಟ ಮಾಡಲು ಲೈಸೆನ್ಸ್ ರಿನೆವಲ್ ಮಾಡಿಸಬೇಕು. ಅದರಂತೆ ಈ ಬಾರಿ ರಿನೆವಲ್ಗೆ ಹಣ ಪವಾತಿಸಲಾಯಿತು. ನಂತರ ಸರಕಾರ ಈ ಬಾರಿ ಪಟಾಕಿ ಬ್ಯಾನ್ ಮಾಡುವುದಾಗಿ ಹೇಳಿತು. ಬಳಿಕ ಹಸಿರು ಪಟಾಕಿ ಮಾರಾಟಕ್ಕೆ ಅನುಮತಿ ನೀಡಲಾಯಿತು. ಇದರಿಂದ ವ್ಯಾಪಾರಸ್ಥರು ಗೊಂದಲಕ್ಕೆ ಸಿಲುಕುವಂತಾಯಿತು. ಹಾಗಾಗಿ ಈ ಬಾರಿಯ ವ್ಯಾಪಾರದಲ್ಲಿ ಕೈ ಸುಟ್ಟುಕೊಳ್ಳುವಂತಾಗಿದೆ ಎನ್ನುತ್ತಾರೆ ರಾಜಾಜಿನಗರದ ಪಟಾಕಿ ವ್ಯಾಪಾರಿ ಸಂಗಮೇಶ್.
ಅಲ್ಲದೇ ಈ ಬಾರಿ ಸಿಡಿದು ಸದ್ದು ಮಾಡುವ ಪಟಾಕಿಗಳ ಮಾರಾಟವಿಲ್ಲ. ಕೇವಲ ಫ್ಲವರ್ ಪಾಟ್, ಭೂಚಕ್ರ, ಹನುಮನ ಬಾಲ, ಹೂವಿನ ಕಟ್ಟಿ, ಸುರ್ಸುರ್ ಬತ್ತಿ, ರಾಕೇಟ್, ಹಾವಿನ ಗುಳಿಗೆಯಂತಹ ಸಾಮಾನ್ಯ ಪಟಾಕಿಗಳನ್ನು ಮಾತ್ರ ಮಾರಾಟ ಮಾಡಲಾಗುತ್ತಿದೆ. ಇದರಿಂದಾಗಿ ಜನರು ಪಟಾಕಿ ಅಂಗಡಿಗೆ ಬಂದು ನೋಡಿ ಹೋಗುತ್ತಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ ಪಟಾಕಿ ಖರೀದಿಸುವವರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಇಳಕೆಯಾಗಿದೆ ಎನ್ನುತ್ತಾರೆ ಪಟಾಕಿ ವ್ಯಾಪಾರಿಗಳು.
ಈ ಹಿಂದೆ ಸುಮಾರು ಏಳೆಂಟು ದಿನಗಳ ಕಾಲ ವ್ಯಾಪಾರಕ್ಕೆ ಅನುಮತಿ ನೀಡಲಾಗುತ್ತಿತ್ತು. ಈ ಬಾರಿ ಕೇವಲ ಮೂರು ದಿನ ಮಾತ್ರ ಅವಕಾಶ ನೀಡಲಾಗಿದೆ. ಮೂರು ದಿನಕ್ಕೆ 10 ಸಾವಿರ ರೂ. ಬಾಡಿಗೆ ನಿಗದಿ ಮಾಡಲಾಗಿದೆ. ಅಲ್ಲದೇ ಅಗ್ನಿಶಾಮಕ ಠಾಣೆ, ಜಿಲ್ಲಾಧಿಕಾರಿ ಕಚೇರಿ, ಮಾಲಿನ್ಯ ನಿಯಂತ್ರಣ ಮಂಡಳಿ ಇಲಾಖೆ ಅಧಿಕಾರಿಗಳ ಅನುಮತಿ ಪಡೆಯಲು ಶುಲ್ಕ ಪಾವತಿಸಬೇಕು. ಇದರಿಂದಾಗಿ ಈ ಬಾರಿ ಮಾರಾಟಕ್ಕೆ ತಂದಿರುವ ಪಟಾಕಿ ದಾಸ್ತಾನು ಖರ್ಚಾಗುವುದು ಅನುಮಾನ ಎಂಬ ಆತಂಕ ವ್ಯಾಪಾರಿಗಳದ್ದು. ಒಟ್ಟಿನಲ್ಲಿ ಈ ಬಾರಿ ದೀಪಾವಳಿ ಹಬ್ಬದ ಪಟಾಕಿ ವ್ಯಾಪಾರಕ್ಕೆ ಗ್ರಾಹಕರು ಆಸಕ್ತಿ ವಹಿಸುತ್ತಿಲ್ಲ. ಪಟಾಕಿ ಖರೀದಿಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.
ವ್ಯಾಪಾರಕ್ಕೆ ಪೆಟ್ಟು: ಕಳೆದ ವರ್ಷವೇ ಶೇ.30ರಷ್ಟು ಪಟಾಕಿ ವಹಿವಾಟು ಕುಸಿತಗೊಂಡಿತ್ತು. ಇದೀಗ ಕೊರೋನ ಹಿನ್ನೆಲೆಯಲ್ಲಿ ಹೆಚ್ಚಾದ ಆರೋಗ್ಯ ಕಾಳಜಿ, ಪಟಾಕಿ ನಿಷೇಧ ಮತ್ತಿತರ ಕಾರಣಗಳಿಂದಾಗಿ ಶೇ.50ರಷ್ಟು ಖೋತಾ ಉಂಟಾಗಲಿದೆ ಎಂದು ಪಟಾಕಿ ಮಾರಾಟಗಾರರು ಅಂದಾಜಿಸಿದ್ದಾರೆ.
20 ಕೋಟಿ ರೂ. ಮಾತ್ರ ವಹಿವಾಟು
ಕಳೆದ ಮೂರ್ನಾಲ್ಕು ವರ್ಷಗಳ ಹಿಂದೆ ಬೆಂಗಳೂರು ನಗರವೊಂದರಲ್ಲೇ 100 ಕೋಟಿ ರೂ.ಗೂ ಮೀರಿದ ಪಟಾಕಿ ವಹಿವಾಟು ವಾರ್ಷಿಕವಾಗಿ ನಡೆಯುತ್ತಿತ್ತು. ಕಳೆದ ಎರಡು ವರ್ಷಗಳಿಂದ ಈ ಮೊತ್ತ 70 ರಿಂದ 80 ಕೋಟಿ ರೂ. ಕುಸಿದಿತ್ತು. ಈ ವರ್ಷ ಇದುವರೆಗೂ ಕೇವಲ 20 ಕೋಟಿ ರೂ.ವಹಿವಾಟು ಮಾತ್ರ ನಡೆದಿದೆ.
-ರಮೇಶ್ ಕುಮಾರ್, ಹೋಲ್ ಸೇಲ್ ಪಟಾಕಿ ಡೀಲರ್.
ಪಟಾಕಿ ಖರೀದಿಸಲು ಗ್ರಾಹಕರ ಹಿಂದೇಟು
ಮಾಲಿನ್ಯಕಾರಕ ಪಟಾಕಿಯನ್ನು ಸರಕಾರ ನಿಷೇಧಿಸಿರುವುದು, ಹಸಿರು ಪಟಾಕಿಗೆ ಅವಕಾಶ ನೀಡಿದರೂ ಅದು ದುಬಾರಿ ಹಾಗೂ ಅಷ್ಟಾಗಿ ಲಭ್ಯವಿಲ್ಲದೇ ಇರುವುದು ಮತ್ತು ಪಟಾಕಿ ಸಿಡಿಸಲು ರಾತ್ರಿ 8ರಿಂದ 10 ಗಂಟೆಯವರೆಗೆ ಮಾತ್ರ ಸಮಯ ನಿಗದಿ ಮಾಡಿರುವುದು ಗ್ರಾಹಕರು ಪಟಾಕಿ ಖರೀದಿಸದೇ ಇರಲು ಪ್ರಮುಖ ಕಾರಣ ಎನ್ನಲಾಗುತ್ತಿದೆ.







