ಅಲ್ಪಸಂಖ್ಯಾತ ವಿದ್ಯಾರ್ಥಿಗಳ ಫೆಲೋಶಿಪ್ ಮೊತ್ತ ಕಡಿತಕ್ಕೆ ಪಿಎಫ್ಐ ಆಕ್ಷೇಪ
ಮಂಗಳೂರು, ನ.15: ಪಿಎಚ್ಡಿ ಮತ್ತು ಎಂಫಿಲ್ ವ್ಯಾಸಂಗ ಮಾಡುತ್ತಿರುವ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ನೀಡುತ್ತಿದ್ದ ಫೆಲೋಶಿಪ್ ಮೊತ್ತ ವನ್ನು ಕಡಿತಗೊಳಿಸಿರುವ ರಾಜ್ಯ ಸರಕಾರದ ಕ್ರಮಕ್ಕೆ ಪಿಎಫ್ಐ ರಾಜ್ಯ ಉಪಾಧ್ಯಕ್ಷ ಅಯ್ಯೂಬ್ ಕೆ. ಅಗ್ನಾಡಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಪಿಎಚ್ಡಿ ಮತ್ತು ಎಂಫಿಲ್ ವ್ಯಾಸಂಗ ಮಾಡುತ್ತಿರುವ ಅರ್ಹ ವಿದ್ಯಾರ್ಥಿಗಳಿಗೆ ರಾಜ್ಯ ಸರಕಾರವು ವರ್ಷಕ್ಕೆ 3 ಲ.ರೂ. ಫೆಲೋಶಿಪ್ ನೀಡುತ್ತಿದ್ದು, ಇದೀಗ ಕೋವಿಡ್ ನೆಪವೊಡ್ಡಿ ಈ ಮೊತ್ತವನ್ನು 1 ಲಕ್ಷ ರೂ.ಗೆ ಇಳಿಸಿದೆ ಎಂದು ವರದಿಯಾಗಿದೆ. ಅದೇ ರೀತಿ ತಿಂಗಳಿಗೆ 25 ಸಾವಿರದಂತೆ ನೀಡಲಾಗುತ್ತಿದ್ದ ಮೊತ್ತವನ್ನು ಹತ್ತು ತಿಂಗಳಿನಿಂದ ಪಾವತಿಸಲಾಗಿಲ್ಲ ಎಂಬ ಆರೋಪವೂ ವಿದ್ಯಾರ್ಥಿಗಳಿಂದ ಕೇಳಿ ಬಂದಿದೆ. ಮುಸ್ಲಿಮರಲ್ಲಿ ಪಿಎಚ್ಡಿ, ಎಂಫಿಲ್ನಂತಹ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುವವರ ಪ್ರಮಾಣ ಶೇ.1ರಷ್ಟು ಮಾತ್ರವಿದೆ. ವಸ್ತುಸ್ಥಿತಿ ಹೀಗಿದ್ದರೂ ರಾಜ್ಯ ಸರಕಾರವು ಫೆಲೋಶಿಪ್ ಮೊತ್ತವನ್ನು ಕಡಿತಗೊಳಿಸಿರುವುದು ಖಂಡನೀಯವಾಗಿದೆ.
ರಾಜ್ಯದ ಬಿಜೆಪಿ ಸರಕಾರವು ಅಲ್ಪಸಂಖ್ಯಾತ ವಿರೋಧಿ ನೀತಿಗಳನ್ನು ಅನುಸರಿಸುತ್ತಾ ಬರುತ್ತಿದೆ. ಅಲ್ಪಸಂಖ್ಯಾತರ ಕಲ್ಯಾಣ ಅಭಿವೃದ್ಧಿ ಯೋಜನೆಗಳಿಗೆ ನೀಡಲಾಗುವ ಅನುದಾನದ ಪೈಕಿ 2020-21ನೆ ಆರ್ಥಿಕ ವರ್ಷದಲ್ಲಿ 468 ಕೋ.ರೂ.ಮೊತ್ತವನ್ನು ಕಡಿತಗೊಳಿಸಲು ಈಗಾಗಲೇ ತೀರ್ಮಾನಿಸಿದೆ. ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ನೀಡಲಾಗುವ ಸ್ಕಾಲರ್ ಶಿಪ್ ಮೊತ್ತವೂ ಎಲ್ಲಾ ಅರ್ಹ ವಿದ್ಯಾರ್ಥಿಗಳಿಗೆ ಸಮರ್ಪಕವಾಗಿ ತಲುಪುತ್ತಿಲ್ಲ. ಇದೀಗ ಕೊರೋನದ ನೆಪವೊಡ್ಡಿ ಫೆಲೋಶಿಪ್ ಮೊತ್ತವನ್ನು ಕಡಿತಗೊಳಿಸಿರುವುದು ರಾಜ್ಯ ಸರಕಾರದ ತಾರತಮ್ಯ ಧೋರಣೆಗೆ ಹಿಡಿದ ಕೈಗನ್ನಡಿಯಾಗಿದೆ ಎಂದರು.
ಮುಸ್ಲಿಮರ ಹಿಂದುಳಿಯುವಿಕೆಯ ಬಗ್ಗೆ ವಿಸ್ತೃತ ವರದಿ ನೀಡಿರುವ ಜಸ್ಟಿಸ್ ರಾಜೀಂದರ್ ಸಾಚಾರ್ ನೇತೃತ್ವದ ಆಯೋಗವು ಅವರನ್ನು ಶೈಕ್ಷಣಿಕ ವಾಗಿ ಮೇಲೆತ್ತಬೇಕು ಎನ್ನುವ ಬಗ್ಗೆ ಸಲಹೆಗಳನ್ನು ನೀಡಿತ್ತು. ಎಲ್ಲಾ ವರ್ಗಗಳಿಗೆ ಸಮಾನ ನ್ಯಾಯ ಕಲ್ಪಿಸಬೇಕು ಎಂಬುದು ಸಂವಿಧಾನದ ಆಶಯವಾಗಿದೆ ಮತ್ತು ಮುಸ್ಲಿಮರ ಹಿಂದುಳಿಯುವಿಕೆಯನ್ನು ನಿರ್ಮೂಲನೆಗೊಳಿಸಲು ಕ್ರಮ ಕೈಗೊಳ್ಳಬೇಕಾಗಿರುವುದು ಆಯಾ ಸರಕಾರಗಳ ಜವಾಬ್ದಾರಿಯಾಗಿದೆ. ಈ ನಿಟ್ಟಿನಲ್ಲಿ ರಾಜ್ಯ ಸರಕಾರವು ತನ್ನ ಪಕ್ಷಪಾತಿ ಧೋರಣೆಯಿಂದ ಹಿಂದೆ ಸರಿದು ಅಲ್ಪಸಂಖ್ಯಾತರ ಶೈಕ್ಷಣಿಕ ಸಬಲೀಕ ರಣವನ್ನು ಖಾತರಿಪಡಿಸಬೇಕು. ಅದೇ ರೀತಿ ಅಲ್ಪಸಂಖ್ಯಾತ ಸಮುದಾಯವೂ ತಮ್ಮ ಹಕ್ಕುಗಳಿಗಾಗಿ ಧ್ವನಿ ಎತ್ತಲು ಮುಂದೆ ಬರಬೇಕಾಗಿದೆ ಎಂದು ಅಯ್ಯೂಬ್ ಅಗ್ನಾಡಿ ತಿಳಿಸಿದ್ದಾರೆ.







