ದಕ್ಷಿಣ ಚೀನಾ ಸಮುದ್ರದ ಪರಿಸ್ಥಿತಿ ಬಗ್ಗೆ ಭಾರತದ ಕಳವಳ
ಹೊಸದಿಲ್ಲಿ, ನ.15: ದಕ್ಷಿಣ ಚೀನಾ ಸಮುದ್ರದಲ್ಲಿ ವಿಶ್ವಾಸವನ್ನು ನಾಶಗೊಳಿಸುವ ಹಲವು ಉಪಕ್ರಮ ಹಾಗೂ ಘಟನೆಗಳು ನಡೆಯುತ್ತಿರುವುದು ತೀವ್ರ ಕಳವಳದ ವಿಷಯವಾಗಿದೆ. ಪ್ರಾದೇಶಿಕ ಸಮಗ್ರತೆ ಮತ್ತು ಸಾರ್ವಭೌಮತೆಯನ್ನು ಗೌರವಿಸುವ ಅಂತರಾಷ್ಟ್ರೀಯ ಒಪ್ಪಂದಕ್ಕೆ ಬದ್ಧರಾಗಿರಬೇಕು ಎಂದು ಭಾರತ ಶನಿವಾರ ಹೇಳಿದೆ.
15ನೇ ಪೂರ್ವ ಏಶ್ಯಾ ಶೃಂಗಸಭೆಯನ್ನುದ್ದೇಶಿಸಿ ಮಾತನಾಡಿದ ಭಾರತದ ವಿದೇಶ ವ್ಯವಹಾರ ಸಚಿವ ಎಸ್ ಜೈಶಂಕರ್, ಇಂಡೊ-ಪೆಸಿಫಿಕ್ ವಲಯದ ಕುರಿತಂತೆ ಕೆಲವು ದೇಶಗಳ ಕಾರ್ಯನೀತಿಯನ್ನು ಉಲ್ಲೇಖಿಸಿದರು ಮತ್ತು ಅಂತರಾಷ್ಟ್ರೀಯ ಸಹಕಾರಕ್ಕೆ ಬದ್ಧತೆ ಇದ್ದಲ್ಲಿ ವಿವಿಧ ದೃಷ್ಟಿಕೋನ, ನಿಲುವುಗಳನ್ನು ಸಮನ್ವಯಗೊಳಿಸುವುದು ಎಂದಿಗೂ ಸವಾಲಾಗಿರುವುದಿಲ್ಲ ಎಂದರು.
ಹೆಚ್ಚಿನ ಅಂತರಾಷ್ಟ್ರೀಯ ಸಹಕಾರವಿದ್ದರೆ ಕೊರೋನೋತ್ತರ ಕಾಲದಲ್ಲಿ ಭಯೋತ್ಪಾದನೆ, ಹವಾಮಾನ ಬದಲಾವಣೆ ಮತ್ತು ಕೊರೋನ ಸೋಂಕಿನಂತಹ ಸಾಂಕ್ರಾಮಿಕದ ಸಮಸ್ಯೆಯನ್ನು ಸೂಕ್ತವಾಗಿ ನಿರ್ವಹಿಸಬಹುದು. ತಂತ್ರಕುಶಲತೆಯ ವಿಷಯದಲ್ಲಿ ಅನಿಸಿಕೆಗಳನ್ನು ಹಂಚಿಕೊಳ್ಳಲು ಪೂರ್ವ ಏಶ್ಯಾ ಶೃಂಗಸಭೆಯಂತಹ ವೇದಿಕೆಯ ಅಗತ್ಯವಿದೆ ಎಂದವರು ಅಭಿಪ್ರಾಯಪಟ್ಟರು.
ಪ್ರಾದೇಶಿಕ ಸಮಗ್ರತೆ ಮತ್ತು ಸಾರ್ವಭೌಮತೆಯನ್ನು ಗೌರವಿಸುವ ಅಗತ್ಯವಿದೆ ಎಂದು ಹೇಳುವ ಮೂಲಕ ಲಡಾಖ್ನ ವಾಸ್ತವಿಕ ನಿಯಂತ್ರಣ ರೇಖೆಯ ಬಳಿ ಮತ್ತು ದಕ್ಷಿಣ ಚೀನಾ ಸಮುದ್ರದಲ್ಲಿ ಚೀನಾ ಅನುಸರಿಸುತ್ತಿರುವ ವಿಸ್ತರಣಾ ವಾದವನ್ನು ಭಾರತ ಖಂಡಿಸಿದೆ ಎಂದು ವಿದೇಶ ವ್ಯವಹಾರ ಇಲಾಖೆಯ ಅಧಿಕಾರಿಗಳು ಹೇಳಿದ್ದಾರೆ. ಇಎಎಸ್ (ಪೂರ್ವ ಏಶ್ಯ ಶೃಂಗಸಭೆ) ಏಶ್ಯ-ಪೆಸಿಫಿಕ್ ಪ್ರದೇಶದಲ್ಲಿ ಭದ್ರತೆ ಮತ್ತು ರಕ್ಷಣೆಯ ಕುರಿತ ವಿವಾದ, ಸಮಸ್ಯೆಯ ಬಗ್ಗೆ ಗಮನ ಹರಿಸುವ ಪ್ರಮುಖ ವೇದಿಕೆಯಾಗಿದ್ದು, 2005ರಲ್ಲಿ ಸ್ಥಾಪನೆಗೊಂಡಂದಿನಿಂದ ಪೂರ್ವ ಏಶ್ಯಾಕ್ಕೆ ಸಂಬಂಧಿಸಿದ ವ್ಯೆಹಾತ್ಮಕ, ಭೌಗೋಳಿಕ ರಾಜಕೀಯ ಮತ್ತು ಆರ್ಥಿಕ ಬೆಳವಣಿಗೆಯ ವಿಷಯಗಳಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದೆ. ಕೊರೋನ ಸೋಂಕಿನ ಹಿನ್ನೆಲೆಯಲ್ಲಿ ಈ ಬಾರಿಯ ಶೃಂಗಸಭೆ ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ನಡೆಯುತ್ತಿದೆ.