ಸಾರಿಗೆ ನಿಗಮದ ನೌಕರರಿಗೆ ತಕ್ಷಣ ವೇತನ ಪಾವತಿಸಲು ಎಸ್ಡಿಪಿಐ ಆಗ್ರಹ
ಮಂಗಳೂರು, ನ.16: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಾಲ್ಕು ನಿಗಮಗಳ ಸುಮಾರು 1.30 ಲಕ್ಷ ನೌಕರರಿಗೆ ನಿಗದಿತ ಸಮಯಕ್ಕೆ ಸರಿಯಾಗಿ ವೇತನ ನೀಡದಿರುವುದರಿಂದ ಹೆಚ್ಚಿನ ನೌಕರರ ಸಂಸಾರ ಬೆಳಕಿನ ಹಬ್ಬದ ವಾತಾವರಣದಲ್ಲಿ ಕತ್ತಲೆ ಕಂಡಿದೆ ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್ಡಿಪಿಐ) ಪಕ್ಷದ ರಾಜ್ಯಾಧ್ಯಕ್ಷ ಅಬ್ದುಲ್ ಹನ್ನಾನ್ ಅಭಿಪ್ರಾಯಿಸಿದ್ದಾರೆ.
ಸರಕಾರಕ್ಕೆ ನೌಕರರ ಹಿತಾಸಕ್ತಿ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲದಿರುವುದು ಮೇಲ್ನೋಟಕ್ಕೆ ಕಾಣುತ್ತಿದೆ. ಲಾಕ್ಡೌನ್ ಪರಿಸ್ಥಿತಿ ದಿನದಿಂದ ದಿನಕ್ಕೆ ಸಾಮಾನ್ಯವಾಗುತ್ತಿದೆ. ಹೀಗಿದ್ದರೂ ಸಹ ಸಾರಿಗೆ ಸಚಿವರು ಮಾತ್ರ ನಿಗಮ ನಷ್ಟದಲ್ಲಿ ನಡೆಯುತ್ತಿದೆ ಎಂದು ನೆಪವೊಡ್ಡಿ ನೌಕರರಿಗೆ ಸಂಬಳ ನೀಡದೆ ಅಸಹಾಯಕತೆ ಪ್ರದರ್ಶಿಸಿರುವುದನ್ನು ಗಮನಿಸಿದರೆ, ಸರಕಾರ ಸುಭದ್ರ ಆಡಳಿತ ನೀಡುವುದರಲ್ಲಿ ವಿಫಲವಾಗಿದೆ ಎಂದು ತಿಳಿಯತ್ತಿದೆ. ಸರಕಾರ ಎಲ್ಲದಕ್ಕೂ ಕೋವಿಡ್ ನೆಪ ಹೇಳುವುದನ್ನು ಬಿಟ್ಟು ಸಾರಿಗೆ ಇಲಾಖೆಯಲ್ಲಿರುವ ಸಂಪನ್ಮೂಲ ಕ್ರೋಡೀಕರಣಕ್ಕೆ ವೈಜ್ಞಾನಿಕವಾಗಿ ಯೋಚಿಸುವ ಅವಶ್ಯಕತೆ ಇದೆ. ನಿಗಮದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ಮತ್ತು ಅನಗತ್ಯ ಪೋಲು ತಡೆದು ಆದಾಯ ಹೆಚ್ಚಿಸುವ ನಿಟ್ಟಿನಲ್ಲಿ ಸಚಿವರು ಯೋಚನೆ ಮಾಡುವುದನ್ನು ಬಿಟ್ಟು ಹಣಕಾಸು ಇಲಾಖೆಯಿಂದ ಬರುವ ಮೊತ್ತದಲ್ಲಿ ನೌಕರರಿಗೆ ಸಂಬಳ ನೀಡುವ ಲೆಕ್ಕಾಚಾರದಲ್ಲಿ ರುವುದು ಹಾಸ್ಯಾಸ್ಪದ. ಸಚಿವರ ಬೇಜವಾಬ್ದಾರಿತನದಿಂದ ನೌಕರರಿಗೆ ಇಲ್ಲಿಯವರೆಗೂ ಸಂಬಳ ಸಿಕ್ಕಿಲ್ಲ ಎಂದು ಹನ್ನಾನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮುಖ್ಯಮಂತ್ರಿ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ತಕ್ಷಣ ಸಾರಿಗೆ ನಿಗಮದ ಎಲ್ಲಾ ನೌಕರರಿಗೂ ಸಂಬಳ ಪಾವತಿಸುವ ಕುರಿತು ಸೂಕ್ತ ಕ್ರಮ ಜರುಗಿಸಬೇಕು ಹಾಗೂ ಭವಿಷ್ಯದಲ್ಲಿ ನಿರ್ದಿಷ್ಟ ಸಮಯದೊಳಗೆ ನೌಕರರಿಗೆ ಸಂಬಳ ಸಿಗುವಂತೆ ನಿಗಾ ವಹಿಸಬೇಕು ಎಂದು ಆಗ್ರಹಿಸಿದ್ದಾರೆ.





