ಠೇವಣಿದಾರರ ಹಣ ಸುರಕ್ಷಿತ: ಲಕ್ಷ್ಮಿ ವಿಲಾಸ್ ಬ್ಯಾಂಕ್ ಆಡಳಿತಾಧಿಕಾರಿ ಮನೋಹರನ್

ಬೆಂಗಳೂರು, ನ.18: ಠೇವಣಿದಾರರು ಇಟ್ಟಿರುವ ಹಣವೆಲ್ಲವೂ ಬ್ಯಾಂಕ್ನಲ್ಲಿ ಸುರಕ್ಷಿತವಾಗಿದ್ದು, ಠೇವಣಿದಾರರಿಗೆ ಹಿಂದಿರುಗಿಸಲು ಬೇಕಾದ ಹಣವಿದೆ. ಯಾರೂ ಆತಂಕ ಪಡಬೇಕಾದ ಅಗತ್ಯವಿಲ್ಲ ಎಂದು ಲಕ್ಷ್ಮಿ ವಿಲಾಸ್ ಬ್ಯಾಂಕ್(ಎಲ್ವಿಬಿ)ನ ಆಡಳಿತಾಧಿಕಾರಿ ಟಿ.ಎನ್.ಮನೋಹರನ್ ಹೇಳಿದ್ದಾರೆ.
ಬುಧವಾರ ಆನ್ಲೈನ್ ಮೂಲಕ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ವಹಿವಾಟಿನ ಮೇಲೆ ನಿರ್ಬಂಧ ವಿಧಿಸಿದ ಕ್ರಮವು ಮಂಗಳವಾರ ತಡರಾತ್ರಿ ನಡೆದಿರುವುದರಿಂದ ಎಟಿಎಂಗಳಲ್ಲಿ ಹಾಗೂ ಬ್ಯಾಂಕ್ ಶಾಖೆಗಳು ಸಿದ್ಧತೆಯಲ್ಲಿ ತೊಡಗಿವೆ. ಗುರುವಾರದ ವೇಳೆಗೆ ಎಲ್ಲವೂ ಸರಿಯಾಗಲಿದ್ದು, ಹಣವನ್ನು ಹಿಂಪಡೆಯುವ ಸಂದರ್ಭದಲ್ಲಿ ಠೇವಣಿದಾರರಿಗೆ ಯಾವುದೇ ಸಮಸ್ಯೆಯಾಗದಂತೆ ನೋಡಿಕೊಳ್ಳಲು ಸೂಚಿಸಲಾಗಿದೆ ಎಂದು ತಿಳಿಸಿದರು.
ನಮ್ಮ ಬಳಿಕ 20 ಸಾವಿರ ಕೋಟಿ ಠೇವಣಿ ಹಾಗೂ 17 ಸಾವಿರ ಕೋಟಿ ಮುಂಗಡವಿದೆ. ಬ್ಯಾಂಕಿನಲ್ಲಿ ಠೇವಣಿ ಇರಿಸಿರುವವರು ಒಂದು ತಿಂಗಳ ನಿರ್ಬಂಧದ ಅವಧಿಯಲ್ಲಿ ಗರಿಷ್ಠ 25 ಸಾವಿರ ಹಿಂಪಡೆಯಬಹುದು. ಉನ್ನತ ಶಿಕ್ಷಣ, ಮದುವೆ, ವೈದ್ಯಕೀಯ ವೆಚ್ಚದಂತಹ ತುರ್ತು ಅಗತ್ಯಗಳಿಗಾಗಿ 5 ಲಕ್ಷದವರೆಗೂ ಹಣ ಹಿಂಪಡೆಯಬಹುದು. ಆದರೆ ಇದಕ್ಕೆ ಅಗತ್ಯವಾದ ಸಾಮಾನ್ಯ ದಾಖಲೆಗಳನ್ನು ನೀಡಬೇಕಾಗುತ್ತದೆ ಎಂದು ಅವರು ಮಾಹಿತಿ ನೀಡಿದರು.
ಕಳೆದ ಕೆಲವು ವರ್ಷಗಳಿಂದ ರಿಟೇಲ್ ಸಾಲ ನೀಡುವುದರಿಂದ ಕಾರ್ಪೋರೇಟ್ ಸಾಲ ನೀಡುವುದರತ್ತ ಹೆಚ್ಚಿನ ಗಮನ ಹರಿಸಲಾಗಿದೆ. ಆದರೆ, ಕೆಲವು ಕಾರ್ಪೋರೇಟ್ ಸಾಲಗಳು ಮರುಪಾವತಿ ಆಗಲಿಲ್ಲ. ಇದರಿಂದಾಗಿ ಬ್ಯಾಂಕ್ನ ಆಸ್ತಿ ಮೌಲ್ಯದಲ್ಲಿ ಇಳಿಕೆ ಆಯಿತು. ವಸೂಲಾಗದ ಸಾಲದ (ಎನ್ಪಿಎ) ಸರಾಸರಿ ಪ್ರಮಾಣ ಶೇ 10ರ ಮಟ್ಟದಲ್ಲಿ ಇದ್ದಿದ್ದು, ಶೇ 15ಕ್ಕೆ ಏರಿಕೆಯಾಗಿ ಸದ್ಯ ಶೇ 25ಕ್ಕೆ ಏರಿದೆ. ಪುನಶ್ಚೇತನಕ್ಕಾಗಿ ಬಂಡವಾಳ ಹೂಡಿಕೆಯ ಪ್ರಸ್ತಾಪವೂ ಸೂಕ್ತವಾಗಿರಲಿಲ್ಲ. ಹೀಗಾಗಿ, ವಿಲೀನ ಪ್ರಕ್ರಿಯೆ ಸುಲಭವಾಗಿ ನಡೆಯುವಂತೆ ಮಾಡಲು ನಿಯಂತ್ರಕರು ಅಲ್ಪಾವಧಿಯ ನಿರ್ಬಂಧ ಹೇರಿದ್ದಾರೆ ಎಂದು ತಿಳಿಸಿದರು.
ಗಡುವಿನೊಳಗೆ ವಿಲೀನ: ಡಿಸೆಂಬರ್ 16 ರೊಳಗೆ ಎಲ್ವಿಬಿ, ಡಿಬಿಎಸ್ ಬ್ಯಾಂಕ್ ಇಂಡಿಯಾದ ಜತೆಗೆ ವಿಲೀನಗೊಳ್ಳುವ ವಿಶ್ವಾಸವಿದೆ. ಅದರಿಂದ ಯಾರೂ ಕೆಲಸ ಕಳೆದುಕೊಳ್ಳುವ ಆತಂಕ ಪಡಬೇಡಿ. ನಾವು ನಿಮ್ಮ ಉದ್ಯೋಗ ಭದ್ರತೆಗೆ ಆದ್ಯತೆ ನೀಡಲಾಗಿದೆ ಎಂದ ಅವರು, ವಿಲೀನಕ್ಕೆ ಸಂಬಂಧಿಸಿದಂತೆ ಸಲಹೆ, ಅಭಿಪ್ರಾಯ, ಆಕ್ಷೇಪಗಳನ್ನು ಸಲ್ಲಿಸಲು ನವೆಂಬರ್ 20ರ ಸಂಜೆ 5 ಗಂಟೆಯವರೆಗೆ ಅವಕಾಶ ಇದೆ. ಆ ಬಳಿಕ ಆರ್ಬಿಐ ಅಂತಿಮ ಕರಡು ಪ್ರಕಟಿಸಲಿದೆ ಎಂದರು.







