ಹಿರಿಯ ರಂಗಕರ್ಮಿ ಡಾ.ಟಿ.ಬಿ.ಸೊಲಬಕ್ಕನವರ ನಿಧನ

ಹುಬ್ಬಳ್ಳಿ, ನ.19: ಗೊಟಗೋಡಿಯ ರಾಕ್ ಗಾರ್ಡನ್ ರೂವಾರಿ, ಹಿರಿಯ ರಂಗಕರ್ಮಿ, ಕರ್ನಾಟಕ ಬಯಲಾಟ ಅಕಾಡಮಿಯ ಅಧ್ಯಕ್ಷ ಡಾ.ಟಿ.ಬಿ.ಸೊಲಬಕ್ಕನವರ(73) ಗುರುವಾರ ಮುಂಜಾವ 2:45ರ ಸುಮಾರಿಗೆ ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಇತ್ತೀಚೆಗೆ ಅನಾರೋಗ್ಯಕ್ಕೆ ಒಳಗಾಗಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಮೃತರು ಪತ್ನಿ, ಪುತ್ರಿ, ಪುತ್ರ ಸಹಿತ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.
1947ರಲ್ಲಿ ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲ್ಲೂಕಿನ ಹುಲಸೋಗಿ ಗ್ರಾಮದಲ್ಲಿ ಜನಿಸಿದ ಸೊಲಬಕ್ಕನವರ ಆಗಿನ ಅವಿಭಜಿತ ಧಾರವಾಡ ಜಿಲ್ಲೆಯ ಡಿ.ವಿ.ಹಾಲಭಾವಿ ಕಲಾ ಶಾಲೆಯಲ್ಲಿ ಕಲಾಶಿಕ್ಷಣ ಪಡೆದರು. ದಾವಣಗೆರೆಯಲ್ಲಿ ಡಿಪ್ಲೊಮಾ ಫೈನ್ ಆರ್ಟ್ ಮಾಡಿದರು. ಮೂರು ವರ್ಷಗಳ ಕಾಲ ಚಲನಚಿತ್ರಗಳಲ್ಲಿ ಸಹಾಯಕ ಕಲಾ ನಿರ್ದೇಶಕರಾಗಿ, ಜ್ಞಾನ ಗಂಗೋತ್ರಿ, ಪ್ರಜಾಮತದಲ್ಲಿ ಪ್ರಧಾನ ಪುಟ ವಿನ್ಯಾಸಕರಾಗಿ ಕಾರ್ಯನಿರ್ವಹಿಸಿದ್ದರು. 1972ರಿಂದ 1990ರವರೆಗೆ ದಾವಣಗೆರೆಯ ಕಲಾ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕೆಲಸ ಮಾಡಿದ್ದರು. 2019ರಿಂದ ಬಯಲಾಟ ಅಕಾಡಮಿ ಅಧ್ಯಕ್ಷರಾಗಿದ್ದರು.
ಅವರ ಸಾಧನೆಗೆ ಹಲವು ಪ್ರಶಸ್ತಿ, ಪುರಸ್ಕಾರಗಳು ಸಂದಿವೆ. 2001ರಲ್ಲಿ ಜಾನಪದ ಜ್ಞಾನ ವಿಜ್ಞಾನ, 2002ರಲ್ಲಿ ಸಂಘಟನೆ, 2005ರಲ್ಲಿ ರಾಜ್ಯೋತ್ಸವ, 2006ರಲ್ಲಿ ಲಲಿತಾ ಕಲಾ ಅಕಾಡಮಿ ಪ್ರಶಸ್ತಿಗಳು ಬಂದಿವೆ. 2018ರಲ್ಲಿ ಜಾನಪದ ವಿಶ್ವವಿದ್ಯಾನಿಲಯ ಅವರಿಗೆ ಗೌರವ ಡಾಕ್ಟರೇಟ್ ನೀಡಿದೆ.
1986ರಲ್ಲಿ ‘ನೂರು ಅಡಿಗಳ ಬಣ್ಣದ ನಡೆ ಅಣುಸಮರಕ್ಕೆ ಜನತೆಯ ತಡೆ’ ಶೀರ್ಷಿಕೆ ಅಡಿ ಪ್ರದರ್ಶಿತವಾದ 120 ಅಡಿ ಉದ್ದದ ತೈಲವರ್ಣ ಚಿತ್ರ ರಚಿಸಿದ್ದು ಅವರ ವಿಶೇಷ ಸಾಧನೆ. ಸೊಲಬಕ್ಕನವರ ನೇತೃತ್ವದಲ್ಲಿ ನಿರ್ಮಿಸಿದ ಶಿಗ್ಗಾವಿ ಸಮೀಪದ ಗೊಟಗೋಡಿಯ ರಾಕ್ ಗಾರ್ಡನ್ ಇವರ ಕಲಾ ಸಾಧನೆಗೆ ಸಾಕ್ಷಿಯಂತಿದೆ.
ಡಾ.ಟಿ.ಬಿ.ಸೊಲಬಕ್ಕನವರ ಬೆಂಗಳೂರಿನ ಜಕ್ಕೂರಿನಲ್ಲಿ ಗ್ರಾಮೀಣಾಭಿವೃದ್ಧಿ ಇಲಾಖೆ ವತಿಯಿಂದ ನಿರ್ಮಿಸಲಾಗಿರುವ ಮಾದರಿ ಗ್ರಾಮದ ಪರಿಕಲ್ಪನೆ ಮತ್ತು ಅದನ್ನು ಸಾಕಾರಗೊಳಿಸಿದ ಸಾಧಕರಾಗಿದ್ದಾರೆ. ಇತ್ತೀಚಿಗೆ ಈ ಮಾದರಿ ಗ್ರಾಮವನ್ನು ಉದ್ಘಾಟಿಸಿದ ಮುಖ್ಯಮಂತ್ರಿ ಸೊಲಬಕ್ಕನವರ ಕಲೆ ಮತ್ತು ಕಾರ್ಯವನ್ನು ಶ್ಲಾಘಿಸಿದ್ದರು.
ಮುಖ್ಯಮಂತ್ರಿ ಸಂತಾಪ
ನಾಡಿನ ಹಿರಿಯ ಕಲಾವಿದ ಡಾ.ಟಿ.ಬಿ. ಸೊಲಬಕ್ಕನವರ ಅವರ ನಿಧನಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಬಹುಮುಖ ಪ್ರತಿಭೆಯ ಟಿ.ಬಿ. ಸೊಲಬಕ್ಕನವರ ಅವರು ಕರ್ನಾಟಕ ಬಯಲಾಟ ಅಕಾಡಮಿ ಅಧ್ಯಕ್ಷರಾಗಿ, ಕರ್ನಾಟಕ ದೊಡ್ಡಾಟ ಟ್ರಸ್ಟ್ ನ ಸಂಸ್ಥಾಪಕ ರಾಗಿ ಸಲ್ಲಿಸಿದ ಸೇವೆ ಅವಿಸ್ಮರಣೀಯ.
ಹಾವೇರಿ ಜಿಲ್ಲೆಯಲ್ಲಿರುವ ರಾಕ್ ಗಾರ್ಡನ್, ಆಲಮಟ್ಟಿ ಮತ್ತಿತರ ಕಡೆಗಳಲ್ಲಿ ನಿರ್ಮಿಸಿರುವ ರಾಕ್ ಗಾರ್ಡನ್ ಗಳಲ್ಲಿ ಸೊಲಬಕ್ಕನವರ ತಮ್ಮ ಅಪೂರ್ವ ಕಲಾ ಕೌಶಲ್ಯವನ್ನು ಮೆರೆದಿದ್ದಾರೆ. ಇವರ ನಿಧನದಿಂದ ಕಲಾ ಜಗತ್ತಿನ ಅದ್ಭುತ ಪ್ರತಿಭೆಯನ್ನು ನಾಡು ಕಳೆದುಕೊಂಡಂತಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.
ಮೃತರ ಆತ್ಮಕ್ಕೆ ಸದ್ಗತಿ ದೊರೆಯಲಿ ಹಾಗೂ ಅವರ ಕುಟುಂಬ ಮತ್ತು ಅಪಾರ ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಮುಖ್ಯಮಂತ್ರಿ ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.







