ಕೂಡ್ಲು ಫಾಲ್ಸ್ ಪ್ರವೇಶ ಶುಲ್ಕ ಮೂರು ಪಟ್ಟು ಹೆಚ್ಚಳ: ಸ್ಥಳೀಯರು ಸೇರಿದಂತೆ ಪ್ರವಾಸಿಗರಿಂದ ತೀವ್ರ ವಿರೋಧ
![ಕೂಡ್ಲು ಫಾಲ್ಸ್ ಪ್ರವೇಶ ಶುಲ್ಕ ಮೂರು ಪಟ್ಟು ಹೆಚ್ಚಳ: ಸ್ಥಳೀಯರು ಸೇರಿದಂತೆ ಪ್ರವಾಸಿಗರಿಂದ ತೀವ್ರ ವಿರೋಧ ಕೂಡ್ಲು ಫಾಲ್ಸ್ ಪ್ರವೇಶ ಶುಲ್ಕ ಮೂರು ಪಟ್ಟು ಹೆಚ್ಚಳ: ಸ್ಥಳೀಯರು ಸೇರಿದಂತೆ ಪ್ರವಾಸಿಗರಿಂದ ತೀವ್ರ ವಿರೋಧ](https://www.varthabharati.in/sites/default/files/images/articles/2020/11/20/268124-1605892631.jpg)
ಉಡುಪಿ, ನ.20: ಉಡುಪಿ ಜಿಲ್ಲೆಯ ಪ್ರಮುಖ ಪ್ರವಾಸಿ ತಾಣವಾಗಿರುವ ಹೆಬ್ರಿ ಸೋಮೇಶ್ವರ ವನ್ಯಜೀವಿ ವಲಯ ವ್ಯಾಪ್ತಿಯ ಅಭಯಾರಣ್ಯದಲ್ಲಿರುವ ಕೂಡ್ಲು ಫಾಲ್ಸ್ಗೆ ಪ್ರವೇಶ ಶುಲ್ಕವನ್ನು ಮೂರು ಪಟ್ಟು ಹೆಚ್ಚಿಸಿರುವ ಬಗ್ಗೆ ಸ್ಥಳೀಯರು ಹಾಗೂ ಪ್ರವಾಸಿಗರಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ.
ಕೊರೋನ ಲಾಕ್ಡೌನ್ಗೆ ಮೊದಲು ಪ್ರವಾಸಿಗರಿಂದ ಕೂಡ್ಲು ಫಾಲ್ಸ್ಗೆ ಒಬ್ಬರಿಗೆ 50ರೂ. ಮತ್ತು ಮಕ್ಕಳಿಗೆ 25ರೂ. ಪ್ರವೇಶ ಶುಲ್ಕ ಪಡೆದು, ಪಾರ್ಕಿಂಗ್ ಶುಲ್ಕವನ್ನು ಪ್ರತ್ಯೇಕವಾಗಿ ಪಡೆಯಲಾಗುತ್ತಿತ್ತು. ನಂತರ ಕೊರೋನ ಭೀತಿಯಿಂದ ಈ ಪ್ರವಾಸಿ ತಾಣಕ್ಕೆ ಪ್ರವಾಸಿಗರ ಪ್ರವೇಶವನ್ನು ನಿರ್ಬಂಧಿಸಲಾಗಿತ್ತು. ಇದೀಗ ನವೆಂಬರ್ ಮೊದಲ ವಾರದಲ್ಲಿ ಈ ಜಲಪಾತ ವೀಕ್ಷಣೆಗೆ ಮತ್ತೆ ಸಾರ್ವಜನಿಕರಿಗೆ ಪ್ರವೇಶ ಕಲ್ಪಿಸಲಾಗಿದೆ.
ಈ ಪ್ರವಾಸಿ ತಾಣ ಪುನಾರಂಭಗೊಳ್ಳುತ್ತಿದ್ದಂತೆ ಇಲಾಖೆ ಪ್ರವಾಸಿಗರಿಗೆ ಶಾಕಿಂಗ್ ಸುದ್ದಿಯನ್ನು ನೀಡಿದೆ. ಪ್ರವೇಶ ಶುಲ್ಕ 50ರೂ. ಬದಲು ಮೂರು ಪಟ್ಟು ಅಂದರೆ 200ರೂ.ಗೆ ಹೆಚ್ಚಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ. ಈ ಆದೇಶದಂತೆ ಭಾರತೀಯರು ಒಬ್ಬರಿಗೆ 200ರೂ., ಮಕ್ಕಳಿಗೆ ಒಬ್ಬರಿಗೆ 175ರೂ., ವಿದೇಶಿಗರಿಗೆ ಒಬ್ಬರಿಗೆ 250ರೂ. ಏರಿಕೆ ಮಾಡಲಾಗಿದೆ.
ಹೀಗೆ ಏಕಾಏಕಿ ಶುಲ್ಕ ಏರಿಕೆ ಬಗ್ಗೆ ನಾಡ್ಪಾಲು ಗ್ರಾಮ ಅರಣ್ಯ ಸಮಿತಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಈ ಪ್ರವಾಸಿ ತಾಣ ಆರಂಭ ಮಾಡುವ ಒಂದೆರಡು ದಿನಗಳ ಹಿಂದೆ ಸಮಿತಿಯ ಸಭೆ ಕರೆಯಲಾಗಿತ್ತು. ಕೇವಲ ಒಂದು ದಿನ ಇರುವಾಗ ಸಮಿತಿಯ ಒಪ್ಪಿಗೆ ಪಡೆಯದೆ ಮೂರು ಪಟ್ಟು ಶುಲ್ಕ ಏರಿಕೆ ಮಾಡಿರುವ ತೀರ್ಮಾನದ ಬಗ್ಗೆ ಸಭೆಯಲ್ಲಿ ಆಕ್ಷೇಪ ವ್ಯಕ್ತವಾಗಿತ್ತು. ಅದೇ ರೀತಿ ನಾಡ್ಪಾಲು ಗ್ರಾಪಂನಿಂದ ನಡೆದ ಗ್ರಾಮ ಸಭೆಯಲ್ಲಿಯೂ ಈ ಕುರಿತು ಚರ್ಚೆ ನಡೆದಿತ್ತು.
‘ಆರಂಭದಲ್ಲಿ ಕೂಡ್ಲು, ಮೇಗದ್ದೆ ಸೇರಿದಂತೆ ಎಲ್ಲರೂ 200ರೂ. ಶುಲ್ಕವನ್ನು ಪಾವತಿಸಬೇಕು ಎಂಬ ನಿಯಮ ಮಾಡಲಾಗಿತ್ತು. ಬಳಿಕ ಸ್ಥಳೀಯರಿಂದ ವಿರೋಧ ಬಂದ ಕಾರಣ ಸ್ಥಳೀಯರು ಮತ್ತು ಹೆಬ್ರಿ ತಾಲೂಕು ವ್ಯಾಪ್ತಿಯವರಿಗೆ ಈ ಹಿಂದಿನ ಶುಲ್ಕ 50ರೂ. ಮಾತ್ರ ಪಾವತಿಸಲು ಅವಕಾಶ ಕಲ್ಪಿಸಲಾಯಿತು. ಸದ್ಯ ಹೊರಗಿನವರಿಗೆ ಮಾತ್ರ 200ರೂ. ಶುಲ್ಕ ನಿಗದಿಪಡಿಸಲಾಗಿದೆ. ನಾವು ಇದಕ್ಕೂ ವಿರೋಧ ಸೂಚಿಸಿದ್ದೇವೆ’ ಎಂದು ಸಾಮಾಜಿಕ ಕಾರ್ಯಕರ್ತ ಸ್ಥಳೀಯ ರಾದ ರಮೇಶ್ ಶೆಟ್ಟಿ ತಿಳಿಸಿದ್ದಾರೆ.
ಕೂಡ್ಲು ಫಾಲ್ಸ್ಗೆ ಪ್ರವೇಶ ಶುಲ್ಕ ಮೂರು ಪಟ್ಟು ಏರಿಕೆ ಮಾಡಿದರೂ ಅದರ ಪಾಲು ಸಮಿತಿಗೆ ನೀಡಲಾಗುವುದಿಲ್ಲ ಎಂಬ ಇಲಾಖೆಯ ತೀರ್ಮಾನ ಸರಿಯಲ್ಲ. ಯಾವುದೇ ಅಭಿವೃದ್ಧಿ ಮತ್ತು ಸುರಕ್ಷತಾ ಕ್ರಮ ತೆಗೆದುಕೊಳ್ಳದೆ ಶುಲ್ಕ ಏರಿಕೆ ಮಾಡುತ್ತಿದ್ದರೆ ಯಾವುದೇ ಸಮಸ್ಯೆ ಇರುತ್ತಿಲ್ಲ. ಪ್ರವಾಸಿಗರಿಗೆ ಸರಿಯಾದ ಸವಲತ್ತು ಕೊಡದೆ ಏಕಾಏಕಿ ಜಾಸ್ತಿ ಮಾಡಿರುವುದು ಸರಿಯಲ್ಲ. ಮಹಿಳೆಯರಿಗೆ ಪ್ರತ್ಯೇಕ ಕೋಣೆಯ ವ್ಯವಸ್ಥೆ ಕೂಡ ಇಲ್ಲಿ ಇಲ್ಲ. ಕಾಡು ದಾರಿಯಲ್ಲಿ ಒಂದೂವರೆ ಕಿ.ಮೀ. ದೂರದವರೆಗೆ ನಡೆದುಕೊಂಡು ಹೋಗುವಾಗ ಯಾವುದೇ ಸುರಕ್ಷತಾ ಕ್ರಮಗಳು ಇಲ್ಲ. ಅದೇ ರೀತಿ ಜಲಪಾತದ ಬಳಿ ಕೂಡ ಯಾವುದೇ ಸೆಕ್ಯುರಿಟಿ ಗಾರ್ಡ್ಗಳು ಇಲ್ಲ.
-ರಮೇಶ್ ಶೆಟ್ಟಿ, ಸಾಮಾಜಿಕ ಕಾರ್ಯಕರ್ತರು
ಕೂಡ್ಲು ಫಾಲ್ಸ್ಗೆ ಪ್ರವೇಶ ಶುಲ್ಕ ಹೆಚ್ಚಳ ಮಾಡಿರುವುದಕ್ಕೆ ವಿರೋಧಗಳು ವ್ಯಕ್ತವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಇಲಾಖೆಯು 200ರೂ. ಬದಲು ಈ ಹಿಂದಿನ 50ರೂ. ಪ್ರವೇಶ ಶುಲ್ಕವನ್ನೇ ಮುಂದುವರೆಸುವಂತೆ ಸರಕಾರಕ್ಕೆ ಪ್ರಸ್ತಾಪ ಕಳುಹಿಸಲಾಗುತ್ತದೆ.
-ಅನಿಲ್ ಕುಮಾರ್, ವಲಯ ಅರಣ್ಯಾಧಿಕಾರಿ, ವನ್ಯಜೀವಿ ವಲಯ, ಹೆಬ್ರಿ