ಮತದಾರರ ಪಟ್ಟಿಯಲ್ಲಿ 30,000ದಷ್ಟು ರೋಹಿಂಗ್ಯನ್ನರಿದ್ದರೆ ಅಮಿತ್ ಶಾ ಏನು ಮಾಡುತ್ತಿದ್ದಾರೆ? : ಉವೈಸಿ ಪ್ರಶ್ನೆ
ಹೈದರಾಬಾದ್: ತನ್ನನ್ನು ಪಾಕಿಸ್ತಾನದ ಸ್ಥಾಪಕ ಮುಹಮ್ಮದ್ ಅಲಿ ಜಿನ್ನಾಗೆ ಹೋಲಿಸಿರುವ ಬಿಜೆಪಿಯ ನಾಯಕ ತೇಜಸ್ವಿ ಸೂರ್ಯಗೆ ತಿರುಗೇಟು ನೀಡಿರುವ ಎಐಎಂಐಎಂ ಮುಖ್ಯಸ್ಥ ಅಸದುದ್ದೀನ್ ಉವೈಸಿ, ದ್ವೇಷವನ್ನು ಹುಟ್ಟುಹಾಕುವುದೇ ಬಿಜೆಪಿಯ ಉದ್ದೇಶ ಎಂದು ಹೇಳಿದ್ದಾರೆ ಎಂದು ಎಎನ್ಐ ವರದಿ ಮಾಡಿದೆ.
ಡಿಸೆಂಬರ್ 1 ರಂದು ನಡೆಯಲಿರುವ ಗ್ರೇಟರ್ ಹೈದರಾಬಾದ್ ಮಹಾನಗರ ಪಾಲಿಕೆ ಚುನಾವಣೆ ಪ್ರಚಾರದಲ್ಲಿ ಭಾಗವಹಿಸಿದ್ದ ತೇಜಸ್ವಿ ಸೂರ್ಯ, ಉವೈಸಿ ನೇತೃತ್ವದ ಪಕ್ಷವು ರೋಹಿಂಗ್ಯಾ ಮುಸ್ಲಿಮರಿಗೆ ಅವಕಾಶ ಕಲ್ಪಿಸಿರುವುದು ಮಾತ್ರವೇ ಹೊರತು ಹೈದರಾಬಾದ್ ನಗರವನ್ನು ಅಭಿವೃದ್ಧಿಪಡಿಸಿಲ್ಲ ಎಂದು ಆರೋಪಿಸಿದ್ದರು.
"ಮತದಾರರ ಪಟ್ಟಿಯಲ್ಲಿ ಒಂದು ವೇಳೆ 30,000ದಷ್ಟು ರೋಹಿಂಗ್ಯನ್ನರಿದ್ದರೆ, ಕೇಂದ್ರ ಗೃಹ ಸಚಿವ ಅಮಿತ್ ಶಾ ಏನು ಮಾಡುತ್ತಿದ್ದಾರೆ? 30ರಿಂದ 40,000 ರೋಹಿಂಗ್ಯನ್ನರು ಮತದಾರರ ಪಟ್ಟಿಯಲ್ಲಿ ಹೇಗೆ ಸೇರಿದ್ದಾರೆ ಎಂದು ನೋಡುವುದು ಅವರ ಕರ್ತವ್ಯವಲ್ಲವೇ? ಬಿಜೆಪಿ ಪ್ರಾಮಾಣಿಕವಾಗಿದ್ದರೆ, ನಾಳೆಯೇ ಅಂತಹ 1,000 ಹೆಸರುಗಳನ್ನು ತೋರಿಸಬೇಕು'' ಎಂದು ಉವೈಸಿ ಸವಾಲೆಸೆದರು.
"ಮಹಾನಗರ ಪಾಲಿಕೆ ಚುನಾವಣೆಯು ಹೈದರಾಬಾದ್ ಹಾಗೂ ಭಾಗ್ಯನಗರ ನಡುವಿನ ಹೋರಾಟವಾಗಿದೆ. ಯಾರು ಗೆಲ್ಲುತ್ತಾರೆಂದು ನಿರ್ಧರಿಸುವುದು ನಿಮ್ಮ ಜವಾಬ್ದಾರಿಯಾಗಿದೆ'' ಎಂದು ಹೈದರಾಬಾದ್ನ್ನು ಭಾಗ್ಯ ನಗರವೆಂದು ಕರೆದಿದ್ದ ಸೂರ್ಯ ಅವರ ಟ್ವೀಟ್ನ್ನು ಉಲ್ಲೇಖಿಸಿ ಉವೈಸಿ ತಿಳಿಸಿದ್ದಾರೆ.