ಮೈಸೂರು ಕಮಿಷನರ್ ಕಚೇರಿಗೆ ಶಂಕು ಸ್ಥಾಪನೆ ಮಾಡಿದ್ದು ಸಿದ್ದರಾಮಯ್ಯ ಸಾಹೇಬರು : ಪ್ರತಾಪ್ ಸಿಂಹ
ಮೈಸೂರು : ಮೈಸೂರಿನ ಕಮಿಷನರ್ ಕಚೇರಿಗೆ ಶಂಕು ಸ್ಥಾಪನೆ ಮಾಡಿದ್ದು ಸಿದ್ದರಾಮಯ್ಯ ಸಾಹೇಬರು ಎಂದು ಸಂಸದ ಪ್ರತಾಪ್ ಸಿಂಹ ಅವರು ನೆನಪು ಮಾಡಿಕೊಂಡು ತಮ್ಮ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ಮೈಸೂರಿನ ಹೊಸ ಕಮಿಷನರ್ ಕಚೇರಿಯನ್ನು ಮಂಗಳವಾರ ಮುಖ್ಯಮಂತ್ರಿ ಯಡಿಯೂರಪ್ಪನವರು ಉದ್ಘಾಟಿಸಿದರು. ಈ ಕಚೇರಿಗೆ ಶಂಕುಸ್ಥಾಪನೆ ನೆರವೇರಸಿದ್ದು ಸಿದ್ದರಾಮಯ್ಯ. ಅವರ ಕೊಡುಗೆ ಇದು ಎಂದು ಕಾಂಗ್ರೆಸ್ ಕಾರ್ಯಕರ್ತರು, ಸಿದ್ದರಾಮಯ್ಯ ಅಭಿಮಾನಿಗಳು ಮುಂತಾದವರು ಸಾಮಾಜಿಕ ಜಾಲತಾಣದಲ್ಲಿ ಹೇಳಿದ್ದರು.
ಇದಕ್ಕೆ ಪ್ರತಿಕ್ರಿಯಿಸಿರುವ ಪ್ರತಾಪ್ ಸಿಂಹ ಬುಧವಾರ ತಮ್ಮ ಫೇಸ್ ಬುಕ್ ಪೋಸ್ಟ್ ನಲ್ಲಿ, ''ಅಧಿಕಾರದ ಸ್ಥಾನದಲ್ಲಿ ಪಲ್ಲಟ ಸಹಜ, ಆದರೆ ಆಡಳಿತ ನಿರಂತರ. ಹೌದು ನಿನ್ನೆ ಮೈಸೂರಿನಲ್ಲಿ ಉದ್ಘಾಟನೆ ಮಾಡಿದ ಕಮಿಷನರ್ ಕಚೇರಿಯನ್ನು ಮಂಜೂರು ಮಾಡಿ, ಶಂಕು ಸ್ಥಾಪನೆ ಮಾಡಿದ್ದು ಸಿದ್ದರಾಮಯ್ಯ ಸಾಹೇಬರು. ಸಂಸದನಾಗಿ ನಾನು ಪಾಲ್ಗೊಂಡ ಮೊದಲ ಸರ್ಕಾರಿ ಕಾರ್ಯಕ್ರಮವೂ ಅದಾಗಿತ್ತು. ಖಂಡಿತ ನೆನಪು ಮಾಡಿಕೊಳ್ಳುತ್ತಿದ್ದೆ, ಭಾಷಣ ಮಾಡುವ ಅವಕಾಶ ನನಗೆ ಸಿಗಲಿಲ್ಲ. ಉಸ್ತುವಾರಿ ಸಚಿವರಿಗೆ ಸಿದ್ದರಾಮಯ್ಯ ಸಾಹೇಬರ ಹೆಸರು ಹೇಳಿ ಅಂದಿದ್ದೆ, ವಿಳಂಬದಿಂದಾಗಿ ಅವರೂ ಭಾಷಣ ಮಾಡಲಿಲ್ಲ. ಅನ್ಯಥಾ ಭಾವಿಸಬೇಡಿ'' ಎಂದು ತಿಳಿಸಿದ್ದಾರೆ.