ಆಸ್ಟ್ರೇಲಿಯಾ ಸರಣಿಯಿಂದ ಗಾಯಾಳು ಇಶಾಂತ್ ಶರ್ಮಾ ಔಟ್
ಹೊಸದಿಲ್ಲಿ : ಗಾಯದಿಂದ ಬಳಲುತ್ತಿರುವ ಭಾರತದ ವೇಗದ ಬೌಲರ್ ಇಶಾಂತ್ ಶರ್ಮಾ ಆಸ್ಟ್ರೇಲಿಯಾ ಪ್ರವಾಸದಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಭಾರತದ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಸ್ಪಷ್ಟಪಡಿಸಿದೆ.
ಐಪಿಎಲ್ ಆಡುವ ಸಂದರ್ಭದಲ್ಲಿ ಗಾಯಾಳುವಾಗಿದ್ದ ರೋಹಿತ್ ಶರ್ಮಾ ಅವರ ದೈಹಿಕ ಸಾಮರ್ಥ್ಯದ ಮೌಲ್ಯಮಾಪನ ಡಿಸೆಂಬರ್ 11ರಂದು ನಡೆಯಲಿದೆ ಎಂದು ಹೇಳಿದೆ. ರೋಹಿತ್ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ.
ರೋಹಿತ್ ಅವರು ಟೆಸ್ಟ್ ಸರಣಿಯಲ್ಲಿ ಪಾಲ್ಗೊಳ್ಳುತ್ತಾರೆಯೇ ಎನ್ನುವುದನ್ನು ಆ ಬಳಿಕ ದೃಢಪಡಿಸಲಾಗುವುದು ಎಂದು ಹೇಳಿದೆ. ಭಾರತದ ಟಿ-ಟ್ವೆಂಟಿ ತಂಡದಲ್ಲಿರುವ ಟಿ.ನಟರಾಜನ್ ಅವರನ್ನು ಏಕದಿನ ತಂಡಕ್ಕೂ ಸೇರಿಸಿಕೊಳ್ಳಲಾಗಿದೆ. ನವದೀಪ್ ಸೈನಿ ಬೆನ್ನು ಸ್ನಾಯುಸೆಳೆತಕ್ಕೆ ಒಳಗಾಗಿರುವ ಹಿನ್ನೆಲೆಯಲ್ಲಿ ನಟರಾಜನ್ ಅವರನ್ನು ಸೇರಿಸಿಕೊಳ್ಳಲಾಗಿದೆ.
"ಇಶಾಂತ್ ಶರ್ಮಾ ಐಪಿಎಲ್-2020 ಅವಧಿಯಲ್ಲಿ ಆಗಿರುವ ಗಾಯದಿಂದ ಸಂಪೂರ್ಣ ಚೇತರಿಸಿಕೊಂಡಿದ್ದಾರೆ. ಅವರು ಟೆಸ್ಟ್ ಪಂದ್ಯದ ದೈಹಿಕ ಸಾಮರ್ಥ್ಯ ಸಾಧಿಸುವ ನಿಟ್ಟಿನಲ್ಲಿ ಸಜ್ಜುಗೊಳ್ಳುತ್ತಿದ್ದಾರೆ. ಅವರು ಬಾರ್ಡರ್- ಗಾವಸ್ಕರ್ ಟ್ರೋಫಿ ಸರಣಿಯಲ್ಲಿ ಪಾಲ್ಗೊಳ್ಳುವುದಿಲ್ಲ" ಎಂದು ಬಿಸಿಸಿಐ ಹೇಳಿಕೆ ನೀಡಿದೆ.
ರೋಹಿತ್ ಶರ್ಮಾ ಅವರ ತಂದೆ ಅಸ್ವಸ್ಥರಾಗಿರುವ ಹಿನ್ನೆಲೆಯಲ್ಲಿ ಯುಎಇನಲ್ಲಿ ಐಪಿಎಲ್ ಮುಗಿದ ಬಳಿಕ ರೋಹಿತ್ ಶರ್ಮಾ ಭಾರತಕ್ಕೆ ವಾಪಸ್ಸಾಗಿದ್ದಾರೆ ಎಂದೂ ಬಹಿರಂಗಪಡಿಸಿದೆ.