ಮಕ್ಕಳಲ್ಲಿ ಕನ್ನಡ ಸಾಹಿತ್ಯದ ಸ್ಪೂರ್ತಿ ತುಂಬುವುದು ಅಗತ್ಯ: ಆರೂರು ತಿಮ್ಮಪ್ಪಶೆಟ್ಟಿ
ಉಡುಪಿ, ನ. 28: ಆಂಗ್ಲ ಮಾಧ್ಯಮದ ಎದುರು ಕನ್ನಡ ಮಾಧ್ಯಮ ಆಕರ್ಷಣೆಯನ್ನು ಕಳೆದುಕೊಳ್ಳುತ್ತಿದೆ. ಬಾಲ್ಯದಲ್ಲಿಯೇ ಮಕ್ಕಳಲ್ಲಿ ಸಾಹಿತ್ಯಾಭಿ ರುಚಿ ಹುಟ್ಟಿಸುವ ಕೆಲಸವನ್ನು ಮಾಡಬೇಕು. ಮೊಬೈಲ್, ಟಿವಿಗಳ ಆಕರ್ಷಣೆ ಒಳಗೆ ಪುಸ್ತಕಗಳಿಗೆ ಕಣ್ಣು ಹಾಯಿಸುವ ಅವಕಾಶ ಕಲ್ಪಿಸಬೇಕಾಗಿದೆ. ಮಕ್ಕಳಲ್ಲಿ ಕನ್ನಡ ಸಾಹಿತ್ಯದ ಸ್ಪೂರ್ತಿ ತುಂಬುವುದು ಇಂದಿನ ಅಗತ್ಯ ಎಂದು ಉಡುಪಿ ಜಿಲ್ಲಾ ಕಸಾಪ ಸಂಘಟನಾ ಕಾರ್ಯದರ್ಶಿ ಆರೂರು ತಿಮ್ಮಪ್ಪಶೆಟ್ಟಿ ಹೇಳಿದ್ದಾರೆ.
ಕಾಪು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಕನ್ನಡ ರಾಜ್ಯೋತ್ಸವ ಮಾಸಾಚರಣೆಯ ಪ್ರಯುಕ್ತ ಶನಿವಾರ ಉದ್ಯಾವರ ಹಿಂದೂ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಲಾದ ಶಾಲಾ ವಿದ್ಯಾರ್ಥಿಗಳಿಗೆ ಆನ್ ಲೈನ್ ಮೂಲಕ ಕನ್ನಡ ಹಾಡುಗಳು, ಕವಿಗಳ ಬಗ್ಗೆ ಭಾಷಣ, ಪ್ರಬಂಧ ಸ್ಪರ್ಧೆ ಗಳಲ್ಲಿ ವಿಜೇತ ಮಕ್ಕಳಿಗೆ ಬಹುಮಾನ ವಿತರಣಾ ಸಮಾರಂದಲ್ಲಿ ಅವರು ಮಾತನಾಡುತಿದ್ದರು.
ಮುಖ್ಯ ಅತಿಥಿಗಳಾಗಿ ಶಾಲಾ ಸಂಚಾಲಕ ಸುರೇಶ ಶೆಣ್ಯೆ, ಶಾಲಾ ಮುಖ್ಯ ಶಿಕ್ಷಕಿ ಹೇಮಲತಾ ಶುಭ ಹಾರ್ಯಸಿದರು. ಅಧ್ಯಕ್ಷತೆ ಯನ್ನು ಕಾಪು ತಾಲೂಕು ಕಸಾಪ ಅಧ್ಯಕ್ಷ ಬಿ.ಪುಂಡಲೀಕ ಮರಠೆ ವಹಿಸಿದ್ದರು. ಸಂಘಟಕ ಶಿಕ್ಷಕ ವಿಕ್ರಮ್ ಆಚಾರ್ಯ, ನಿವೃತ್ತ ಶಿಕ್ಷಕ ಹಾಗೂ ಕಸಾಪ ಸಮಿತಿ ಸದಸ್ಯ ಕೃಷ್ಣ ಕುಮಾರ್ ಮಟ್ಟು ಅವರನ್ನು ಅಭಿನಂದಿಸಿದರು. ಕಸಾಪ ತಾಲೂಕು ಕಾರ್ಯದರ್ಶಿ ವಿದ್ಯಾಧರ್ ಪುರಾಣಿಕ್ ಸ್ವಾಗತಿಸಿದರು. ಸದಸ್ಯೆ ಸುದಕ್ಷಿಣೆ ವಂದಿಸಿದರು. ಕೃಷ್ಣಕುಮಾರ್ ಕಾರ್ಯಕ್ರಮ ನಿರೂಪಿಸಿದರು.