ಹೊಸ ಕಾನೂನುಗಳು ಹಳೆಯ ಪದ್ಧತಿಯನ್ನು ನಿಲ್ಲಿಸುವುದಿಲ್ಲ: ಪ್ರಧಾನಿ ಮೋದಿ
ಹೊಸದಿಲ್ಲಿ: ರಾಷ್ಟ ರಾಜಧಾನಿಯಲ್ಲಿ ಕೇಂದ್ರ ಸರಕಾರದ ಕೃಷಿ ಕಾನೂನುಗಳ ವಿರುದ್ಧ ರೈತರು ತಮ್ಮ ಪ್ರತಿಭಟನೆಯನ್ನು ತೀವ್ರಗೊಳಿಸಿರುವ ನಡುವೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತೊಮ್ಮೆ ಕೃಷಿ ಕಾನೂನುಗಳ ಕುರಿತು ಮಾತನಾಡಿದ್ದು,ಅದರ ಸಕಾರಾತ್ಮಕ ಅಂಶವನ್ನು ಬೆಟ್ಟು ಮಾಡಿದರು.
ದಿಲ್ಲಿ ಗಡಿಭಾಗಗಳಲ್ಲಿ ಬೀಡುಬಿಟ್ಟಿರುವ ರೈತರುಗಳು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಷರತ್ತುಬದ್ದ ಆರಂಭಿಕ ಮಾತುಕತೆಯ ಪ್ರಸ್ತಾಪಕ್ಕೆ ಆಕ್ರೋಶಿತರಾಗಿದ್ದಾರೆ. ದಿಲ್ಲಿಯನ್ನು ಘೇರಾವ್ ಮಾಡುವುದಾಗಿ ರೈತರು ಎಚ್ಚರಿಕೆ ನೀಡಿದ್ದಾರೆ.
ಕಾರ್ಪೋರೇಟ್ ಗಳ ಅನುಕೂಲಕ್ಕಾಗಿ ಸರಕಾರ ಹೊಸ ಕಾನೂನುಗಳನ್ನು ರೂಪಿಸುತ್ತಿದೆ ಎಂದು ಆರೋಪಿರುವ ರೈತರಿಗೆ ಮನವರಿಕೆ ಮಾಡಲು ಯತ್ನಿಸಿದ ಮೋದಿ, ದಶಕಗಳ ಸುಳ್ಳು ಕೃಷಿಕರ ಮನಸ್ಸಿನಲ್ಲಿ ಆತಂಕವನ್ನುಂಟು ಮಾಡುತ್ತದೆ ಎಂದು ನನಗೆ ತಿಳಿದಿದೆ. ನಾವು ಮೋಸಗೊಳಿಸುವ ಉದ್ದೇಶದಿಂದ ಕೆಲಸ ಮಾಡುತ್ತಿಲ್ಲ. ನಮ್ಮ ಉದ್ದೇಶಗಳು ಗಂಗಾ ನದಿಯ ನೀರಿನಂತೆ ಪವಿತ್ರವಾಗಿವೆ ಎಂದು ತಾಯಿ ಗಂಗಾ ನದಿ ದಂಡೆಯಲ್ಲಿ ನಿಂತು ಹೇಳುತ್ತಿದ್ದೇನೆ ಎಂದರು.
ಹೊಸ ಮುಕ್ತ ಮಾರುಕಟ್ಟೆ ವ್ಯವಸ್ಥೆಯು ಸರಕಾರವು ನಿಗದಿಪಡಿಸಿದ ಸಾಂಪ್ರದಾಯಿಕ ಮಂಡಿಗಳು ಹಾಗೂ ಕನಿಷ್ಠ ಬೆಂಬಲ ಬೆಲೆಯನ್ನು ನಾಶಗೊಳಿಸುವುದಿಲ್ಲ ಎಂದು ಮೋದಿ ಭರವಸೆ ನೀಡಿದರು.