ಯುವತಿಯ ಚಿತ್ರದ ಪ್ರಕಟಣೆ ಪ್ರಶ್ನಿಸಿದ್ದ ಅರ್ಜಿಯ ಅಂಗೀಕಾರಕ್ಕೆ ಸುಪ್ರೀಂ ನಕಾರ
ಹಥ್ರಸ್ ಸಾಮೂಹಿಕ ಅತ್ಯಾಚಾರ-ಹತ್ಯೆ ಪ್ರಕರಣ

ಹೊಸದಿಲ್ಲಿ,ಡಿ.2: ಮಾಧ್ಯಮಗಳಲ್ಲಿ ಹಥ್ರಸ್ ಸಾಮೂಹಿಕ ಅತ್ಯಾಚಾರದ ಬಲಿಪಶು ಯುವತಿಯ ಚಿತ್ರವನ್ನು ಪ್ರಕಟಿಸಿದ್ದನ್ನು ಪ್ರಶ್ನಿಸಿದ್ದ ಅರ್ಜಿಯನ್ನು ವಿಚಾರಣೆಗೆ ಅಂಗೀಕರಿಸಲು ಸರ್ವೋಚ್ಚ ನ್ಯಾಯಾಲಯವು ಬುಧವಾರ ನಿರಾಕರಿಸಿದೆ. ನ್ಯಾಯಾಲಯವು ಈ ವಿಷಯದಲ್ಲಿ ಕಾನೂನು ರೂಪಿಸುವಂತಿಲ್ಲ ಮತ್ತು ಅರ್ಜಿದಾರರು ಸರಕಾರಕ್ಕೆ ಅಹವಾಲು ಸಲ್ಲಿಸಬಹುದು ಎಂದು ಅದು ತಿಳಿಸಿದೆ.
ಸೆ.14ರಂದು ಉತ್ತರ ಪ್ರದೇಶದ ಹಥರಾಸ್ನಲ್ಲಿ 19ರ ಹರೆಯದ ದಲಿತ ಯುವತಿಯ ಮೇಲೆ ನಾಲ್ವರು ದುಷ್ಕರ್ಮಿಗಳು ಸಾಮೂಹಿಕ ಅತ್ಯಾಚಾರ ನಡೆಸಿದ್ದು,ಸೆ.29ರಂದು ದಿಲ್ಲಿಯ ಸಫ್ದರ್ಜಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಳು.
ಲೈಂಗಿಕ ಹಿಂಸಾಚಾರದ ಪ್ರಕರಣಗಳ ವಿಚಾರಣೆಯಲ್ಲಿ ವಿಳಂಬಗಳನ್ನೂ ಪ್ರಸ್ತಾಪಿಸಿದ್ದ ಅರ್ಜಿಯು ನ್ಯಾ.ಎನ್.ವಿ.ರಮಣ ನೇತೃತ್ವದ ಪೀಠದೆದುರು ವಿಚಾರಣೆಗೆ ಬಂದಿತ್ತು.
ಈ ವಿಷಯಗಳಿಗೂ ಕಾನೂನಿಗೂ ಯಾವುದೇ ಸಂಬಂಧವಿಲ್ಲ. ಅಭಿವ್ಯಕ್ತಿ ಸ್ವಾತಂತ್ರ್ಯವು ಅಸ್ತಿತ್ವದಲ್ಲಿದ್ದು,ಇದಕ್ಕಾಗಿ ಸಾಕಷ್ಟು ಕಾನೂನುಗಳಿವೆ. ಇಂತಹ ಘಟನೆಗಳು ನಡೆಯುತ್ತಿರುವುದು ದುರದೃಷ್ಟಕರವಾಗಿದೆ ಎಂದು ಪೀಠವು ತಿಳಿಸಿತು.





