ಪ್ರಿಯಕರನ ಜತೆ ಸೇರಿ ಪತಿಯ ಕೊಲೆಗೈದ ಪತ್ನಿ: ಇಬ್ಬರ ಬಂಧನ
15 ದಿನಗಳ ನಂತರ ಪ್ರಕರಣ ಬೆಳಕಿಗೆ
1. ಪ್ರದೀಪ್ ಕುಮಾರ್ 2. ಪ್ರಿಯಕರನ ಜೊತೆ ಶಿಲ್ಪಾ
ಮಂಡ್ಯ, ಡಿ.4: ಪತ್ನಿಯೊಬ್ಬಳು ತನ್ನ ಅನೈತಿಕ ಸಂಬಂಧಕ್ಕಾಗಿ ಗಂಡನನ್ನೇ ಕೊಲೆಗೈದಿದ್ದಾರೆನ್ನಲಾದ ಘಟನೆ ತಾಲೂಕಿನ ಹನಕೆರೆ ಗ್ರಾಮದಲ್ಲಿ ನಡೆದಿದ್ದು, 15 ದಿನಗಳ ನಂತರ ಬೆಳಕಿಗೆ ಬಂದಿದೆ.
ಪ್ರದೀಪ್ ಕುಮಾರ್ ಕೊಲೆಯಾದವರು. ಈತನ ಪತ್ನಿ ಶಿಲ್ಪಾ ಹಾಗೂ ಪ್ರಿಯಕರ ಮಧುಸೂದನ್ ಕೊಲೆ ಆರೋಪಿಗಳು. ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಪತ್ನಿ ಶಿಲ್ಪಾ ಮಹಿಳಾ ಸಂಘದ ಹಣ ಕಲೆಕ್ಷನ್ ಮಾಡುವ ಪ್ರಿಯಕರ ಮಧುನಾಯಕ್ ಜೊತೆ ಸೇರಿ ಗಂಡನನ್ನೇ ಉಸಿರುಗಟ್ಟಿಸಿ ಕೊಲೆಗೈದು ಹೃದಯಾಘಾತವೆಂದು ಬಿಂಬಿಸಿದ್ದಾರೆ ಎನ್ನಲಾಗಿದೆ. ಘಟನೆ ನಡೆದು 15 ದಿನಗಳ ಬಳಿಕ ಮೃತ ಗಂಡನ ಸಂಬಂಧಿಕರು ಇದು ಪೂರ್ವ ನಿರ್ಧರಿತ ಕೊಲೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.
ಸಂಬಂಧಿಕರ ದೂರಿನ ಮೇರೆಗೆ ಶಿಲ್ಪಾಳನ್ನು ವಿಚಾರಣೆ ಮಾಡಿದಾಗ ಗಂಡನ ಕೊಲೆ ರಹಸ್ಯ ಬೆಳಕಿಗೆ ಬಂದಿದೆ. ಗಂಡನಿಗೆ ನಿದ್ರೆ ಮಾತ್ರೆ ತಿನ್ನಿಸಿ ಪ್ರಿಯಕರನ ಜೊತೆ ಈ ಸೇರಿ ಕೃತ್ಯ ಎಸಗಿರುವುದಾಗಿ ಪೊಲೀಸರ ವಿಚಾರಣೆ ವೇಳೆ ಸತ್ಯ ಬಾಯ್ಬಿಟ್ಟಿದ್ದಾಳೆ ಎನ್ನಲಾಗಿದೆ.
ನ.17ರಂದು ಹನಕೆರೆ ಗ್ರಾಮದ ಹೊರವಲಯದಲ್ಲಿರುವ ತನ್ನ ಗಂಡನ ಒಂಟಿ ಮನೆಯಲ್ಲಿ ಸಂಜೆ ಗಂಡನಿಗೆ ನಿದ್ರೆ ಮಾತ್ರೆ ಹಾಕಿ ತನ್ನ ಪ್ರಿಯಕರ ಮಧುನಾಯಕ್ ಜೊತೆ ಸೇರಿ ಗಂಡನನ್ನು ಉಸಿರುಗಟ್ಟಿಸಿ ಕೊಲೆಗೈದು, ಬಳಿಕ ಹೃದಯಾಘಾತವೆಂದು ಹೇಳಿ ಆಸ್ಪತ್ರೆಗೆ ಕರೆದೊಯ್ದಿದ್ದಾಳೆ. ಆಸ್ಪತ್ರೆಯಲ್ಲಿ ಸಾವು ಖಚಿತ ಪಡಿಸಿಕೊಂಡು ಗಂಡನ ಅಂತ್ಯಸಂಸ್ಕಾರದ ಕಾರ್ಯವೆಲ್ಲ ಮುಗಿಸಿದ್ದಾಳೆ. ಮೃತ ಪ್ರದೀಪ್ ಕುಮಾರ್ನ ಅಂತ್ಯಸಂಸ್ಕಾರದ ವೇಳೆ ಸಂಬಂಧಿಕರಿಗೆ ಕೊಲೆಯ ಅನುಮಾನ ಬಂದಿತ್ತಾದರೂ ಸಾವಿನ ಮನೆಯಲ್ಲಿ ಜಗಳ ಬೇಡವೆಂದು ಗಾಯದ ಗುರುತಿನ ಫೋಟೋ ತೆಗೆದುಕೊಂಡು ಮೃತ ಪ್ರದೀಪನ ಅಂತ್ಯ ಸಂಸ್ಕಾರ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಈ ಅವಧಿಯಲ್ಲಿ ಪತ್ನಿ ಶಿಲ್ಪಾಳ ಮೊಬೈಲ್ನಲ್ಲಿ ಪ್ರಿಯಕರ ಮಧುನಾಯಕ್ ಜೊತೆಗಿರುವ ಫೋಟೋ ಹಾಗೂ ಮನೆಯಲ್ಲಿ ಸಿಕ್ಕ ಟೀ ಗ್ಲಾಸ್ನಲ್ಲಿ ಪ್ರಿಯಕರನ ಫೋಟೋ ನೋಡಿದ್ದಾರೆ. ಕೊನೆಗೆ ತಿಥಿ ಕಾರ್ಯ ಮುಗಿದ ಬಳಿಕ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಆ ದೂರಿನ ಮೇರೆಗೆ ಪತ್ನಿಯನ್ನು ವಿಚಾರಣೆ ಮಾಡಿದಾಗ ಗಂಡನ ಕೊಲೆ ಪ್ರಕರಣ ಬಯಲಾಗಿದೆ.
ಈ ಸಂಬಂಧ, ಪ್ರಕರಣ ದಾಖಲಿಸಿಕೊಂಡಿರುವ ಮಂಡ್ಯ ಗ್ರಾಮಾಂತರ ಠಾಣೆಯ ಪೊಲೀಸರು ಆರೋಪಿಗಳಾದ ಶಿಲ್ಪಾ ಹಾಗೂ ಆಕೆಯ ಪ್ರಿಯಕರ ಮಧುನಾಯಕ್ನನ್ನು ಬಂಧಿಸಿದ್ದು, ನ್ಯಾಯಾಲಯ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.