ಯಕ್ಷಗಾನದಲ್ಲಿ ಕನ್ನಡ ಭಾಷೆ ಕಲಬೆರೆಕೆ ಆಗಿಲ್ಲ: ಪ್ರಸಾದ್ ಮೊಗೆಬೆಟ್ಟು
ಕೋಟದಲ್ಲಿ ‘ಹಾಂಪರಿ’ ಸಾಹಿತ್ಯಿಕ-ಸಾಂಸ್ಕೃತಿಕ ಸಮ್ಮೇಳನ

ಕೋಟ, ಡಿ.6: ಪುರಾತನ ಕಲೆಯಾಗಿರುವ ಯಕ್ಷಗಾನವು ಕನ್ನಡ ಭಾಷೆಯನ್ನು ಉಳಿಸಿ ಬೆಳೆಸಿದೆ. ಇಂದು ಸಂಪೂರ್ಣ ಸಿರಿಗನ್ನಡ ಉಳಿದು ಕೊಂಡಿರುವುದು ಯಕ್ಷಗಾನ ರಂಗಭೂಮಿಯಲ್ಲಿ ಮಾತ್ರ. ಬೇರೆ ಎಲ್ಲ ರಂಗಗಳಲ್ಲೂ ಕನ್ನಡ ಭಾಷೆ ಎಂಬುದು ಕಲಬೆರೆಕೆಯಾಗಿದ್ದರೂ ಯಕ್ಷಗಾನ ದಲ್ಲಿ ಕನ್ನಡ ಭಾಷೆ ಕಲಬೆರೆಕೆ ಆಗಿಲ್ಲ ಎಂದು ಯಕ್ಷ ಸಾಹಿತಿ ಪ್ರಸಾದ್ ಕುಮಾರ್ ಮೊಗೆಬೆಟ್ಟು ಹೇಳಿದ್ದಾರೆ.
ಕೋಟ ಡಾ.ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಪ್ರತಿಷ್ಠಾನ, ಕೋಟತಟ್ಟು ಗ್ರಾಮ ಪಂಚಾಯತ್, ಉಡುಪಿ ಡಾ.ಶಿವರಾಮ ಕಾರಂತ ಟ್ರಸ್ಟ್ ವತಿಯಿಂದ ರವಿವಾರ ಕೋಟ ಕಾರಂತರ ಥೀಂ ಪಾರ್ಕ್ನಲ್ಲಿ ಡಾ.ಶಿವರಾಮ ಕಾರಂತರ ಪುಣ್ಯತಿಥಿ ಅಂಗವಾಗಿ ರವಿವಾರ ಆಯೋಜಿಸಲಾದ ‘ಹಾಂಪರಿ’ ಸಾಹಿತ್ಯಿಕ- ಸಾಂಸ್ಕೃತಿಕ ಸಮ್ಮೇಳನಾಧ್ಯಕ್ಷತೆ ಸ್ಥಾನದಿಂದ ಅವರು ಮಾತನಾಡುತಿದ್ದರು.
ಭಕ್ತಿ ಪಂಥದ ಚಳವಳಿಯಲ್ಲಿ ದಾಸ ಸಾಹಿತ್ಯದಂತೆ ಯಕ್ಷ ಸಾಹಿತ್ಯ ಕೂಡ ಗುರುತಿಸಿಕೊಂಡಿತ್ತು. ಆ ಕಾಲದಲ್ಲಿ ದಾಸ ಸಾಹಿತ್ಯದಷ್ಟೆ ಪ್ರಬಲವಾಗಿ ಯಕ್ಷ ಸಾಹಿತ್ಯ ಕೂಡ ವಿಸ್ತರಿಸಿಕೊಂಡಿತು. ದಕ್ಷಿಣ ಮತ್ತು ಪಶ್ಚಿಮದಲ್ಲಿ ಯಕ್ಷಗಾನ ಪ್ರಸಂಗ ಸಾಹಿತ್ಯವು ಜನ ಮಾನಸದ ಮೇಲೆ ವಿಶೇಷವಾದ ಧಾರ್ಮಿಕ, ಕಲಾತ್ಮಕ ವಾದ ಪ್ರಭಾವ ಬೀರುವುದಕ್ಕೆ ಸಾಧ್ಯವಾಗಿತ್ತು ಎಂದರು.
ಕರಾವಳಿ ಕರ್ನಾಟಕದ ಯಕ್ಷಗಾನ ಕಲೆಯ ಕಂಪನ್ನು ವಿಶ್ವ ವೇದಿಕೆಯಲ್ಲಿ ಪರಿಸರಲು ಶಿವರಾಮ ಕಾರಂತರು ಕಾರಣಕರ್ತರು. ಯಕ್ಷಗಾನ ಎಂಬುದು ಸಾಹಿತ್ಯ ಮತ್ತು ಸಂಸ್ಕೃತಿಯ ಖಜಾನೆಯಾಗಿದೆ. ಯಕ್ಷಗಾನ ಪ್ರಸಂಗದಲ್ಲಿ ಸಾಹಿತ್ಯದ ಮೂಲದ್ರವ್ಯ ತುಂಬಿಕೊಂಡಿದೆ. ಪ್ರಸಂಗ ಇಲ್ಲದಿದ್ದರೆ ಯಕ್ಷಗಾನವು ಪ್ರದರ್ಶನ ಆಗಲು ಸಾಧ್ಯವಿಲ್ಲ ಎಂದು ಅವರು ತಿಳಿಸಿದರು.
ಜನರಿಗೆ ಯಕ್ಷಗಾನದಿಂದ ಪೌರಣಿಕ ಜ್ಞಾನ ದೊರೆಯಲು ಸಾಧ್ಯವಾಗಿದೆ. ಅಲ್ಲದೆ ಅನಕ್ಷರಸ್ಥರನ್ನು ಅಕ್ಷರಸ್ಥರನ್ನಾಗಿ, ಮನರಂಜನೆ ಜೊತೆಗೆ ಮನೋ ವಿಕಾಸ ಮತ್ತು ಶಿಸ್ತು, ಸಂಸ್ಕಾರ, ಬದುಕಿನ ಬದ್ಧತೆ, ಬಹುವೌಲ್ಯ, ಸಾಹಿತ್ಯಿಕ, ಸಾಸಂ್ಕೃತಿಕ ಸಂಪನ್ನತೆಯನ್ನು ಯಕ್ಷಗಾನ ಕಲೆ ನೀಡಿದೆ ಎಂದು ಅವರು ಹೇಳಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ವಂಡ್ಸೆ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಹಾಗೂ ಸಾಹಿತಿ ರಾಜೀವ್ ಮಾತನಾಡಿ, ಸಾಹಿತಿ ಗಳು ಎಂದಿಗೂ ಅಂತರ್ಮುಖಿ ಭಾವ ಜೀವಿಗಳಾಗಿರುತ್ತಾರೆ. ಹಾಗೆ ಶಿವ ರಾಮ ಕಾರಂತರು ಕೂಡ ಹೊರನೋಟಕ್ಕೆ ಬಿಗುಮಾನದಂತೆ ಕಂಡರೂ ಅವರ ಒಳಗೆ ಸಹಾನುಭೂತಿ, ಸಾಮಾಜಿಕ ಕಳಕಳಿ ಇರುವುದು ತಿಳಿಯುತ್ತದೆ. ಬದುಕಲು ಸ್ವಾತಂತ್ರವೇ ಮುಖ್ಯ ಹೊರತು ಸಿದ್ಧಾಂತ ಗಳಲ್ಲ ಎಂಬುದನ್ನು ಕಾರಂತರು ಪ್ರತಿಪಾದಿಸಿದ್ದರು. ಕಾರಂತರ ಸಾಹಿತ್ಯ ಶೋಧನ ಪ್ರಧಾನ ಸಾಹಿತ್ಯ ವಾಗಿದೆ ಎಂದು ತಿಳಿಸಿದರು.
ಸಾಂಸ್ಕೃತಿಕ ಅನಾವರಣವನ್ನು ಉಡುಪಿ ಕೃಷಿ ಇಲಾಖೆ ಉಪಕೃಷಿ ನಿರ್ದೇಶಕ ಚಂದ್ರಶೇಖರ್ ನಾಯಕ್ ನೆರವೇರಿಸಿದರು. ಕೋಟ ಶ್ರೀಕ್ಷೇತ್ರ ಅಮೃತೇಶ್ವರಿಯ ಧರ್ಮದರ್ಶಿ ಆನಂದ ಸಿ.ಕುಂದರ್ ಕಾರಂತರ ನುಡಿ ಲೋಕಾರ್ಪಣೆಗೊಳಿಸಿ ದರು. ಕಸಾಪ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಮಾತನಾಡಿದರು.
ಅಧ್ಯಕ್ಷತೆಯನ್ನು ಕೋಟತಟ್ಟು ಗ್ರಾಪಂ ಆಡಳಿತಾಧಿಕಾರಿ ಡಾ.ಅರುಣ್ ಕುಮಾರ್ ಶೆಟ್ಟಿ ವಹಿಸಿದ್ದರು. ಟ್ರಸ್ಟಿ ಸುಬ್ರಾಯ ಆಚಾರ್ಯ, ಇಬ್ರಾಹಿಂ ಸಾಹೇಬ್ ಕೋಟ ಉಪಸ್ಥಿತರಿದ್ದರು.
ಕಾರಂತರ ಥೀಂ ಪಾರ್ಕ್ ವಿಶೇಷ ಕರ್ತವ್ಯಾಧಿಕಾರಿ ಪೂರ್ಣಿಮಾ ಸ್ವಾಗತಿಸಿದರು. ಪ್ರತಿಷ್ಠಾನದ ಕಾರ್ಯದರ್ಶಿ ನರೇಂದ್ರ ಕುಮಾರ್ ಕೋಟ ಪ್ರಾಸ್ತಾವಿಕವಾಗಿ ಮಾತನಾಡಿದರು. ಹಂಗಾರಕಟ್ಟೆ ಸಾಸ್ತಾನ ರೋಟರಿ ಕ್ಲಬ್ ಅಧ್ಯಕ್ಷ ವೆಂಕಟೇಶ್ ಭಟ್ ವಂದಿಸಿದರು. ಸುಶ್ಮಿತಾ ಸಾಸ್ತಾನ ಕಾರ್ಯಕ್ರಮ ನಿರೂಪಿಸಿದರು.
ಬಳಿಕ ಕುವೆಂಪು ವಿರಚಿತ ರಕ್ತರಾತ್ರಿ ನಾಟಕದ ಭಾಗಾಂಶ ಪ್ರದರ್ಶನ, ಕವಿಗೋಷ್ಟಿ, ಭರತನಾಟ್ಯ, ಪ್ರಬಂಧ ಮಂಡನೆ, ವಿಚಾರಗೋಷ್ಟಿ, ಉಪನ್ಯಾಸ, ಬಹುವಿಧ ಅಭಿವ್ಯಕ್ತಿ, ಏಕವ್ಯಕ್ತಿ ಸ್ವರಾಂಜಲಿ, ಸಮಕ್ಷಮ ನಡೆಯಿತು.








