ಬಾಬರಿ ಪ್ರಕರಣ: ತೀರ್ಪುನ್ನು ಉನ್ನತ ಕೋರ್ಟ್ ನಲ್ಲಿ ಪ್ರಶ್ನಿಸಲು ಕೋರಿ ರಾಷ್ಟ್ರಪತಿಗೆ ವೆಲ್ಫೇರ್ ಪಾರ್ಟಿ ಮನವಿ
ಕಲಬುರಗಿ, ಡಿ. 6: ವಿವಾದಾತ್ಮಕ ಬಾಬರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಸಿಬಿಐ ವಿಶೇಷ ನ್ಯಾಯಾಲಯ ನೀಡಿರುವ ತೀರ್ಪುನ್ನು ಉನ್ನತ ನ್ಯಾಯಾಲಯದಲ್ಲಿ ಪ್ರಶ್ನಿಸಲು ಸಿಬಿಐಗೆ ನಿರ್ದೇಶನ ನೀಡುವಂತೆ ಕೋರಿ ಕಲಬುರಗಿ ಡಿಸಿ ಮುಖಾಂತರ ಭಾರತದ ರಾಷ್ಟ್ರಪತಿಗೆ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಮನವಿ ಸಲ್ಲಿಸಿತು.
ಬಾಬರಿ ಮಸೀದಿ ಕೆಡವಿದ ದಿನದ(ಕಪ್ಪು ದಿನ) ವಾರ್ಷಿಕೋತ್ಸವದಂದು ವೆಲ್ಫೇರ್ ಪಾರ್ಟಿ ತೀವ್ರ ದುಃಖ ವ್ಯಕ್ತಪಡಿಸಿದ್ದು, ಸಿಬಿಐ ದೇಶದ ಮುಸ್ಲಿಂ ನಾಗರಿಕರಿಗೆ ನ್ಯಾಯ ಕೊಡಲು ವಿಫಲವಾಗಿದೆ ಎಂದು ಆರೋಪಿಸಿದೆ.
ಬಾಬರಿ ಮಸೀದಿ ವಿಚಾರದಲ್ಲಿ ಸಿಬಿಐ ಪಂಜರದ ಗಿಳಿಯಂತೆ ವರ್ತಿಸಿದೆ ಮತ್ತು ಮುಕ್ತ ಮತ್ತು ನ್ಯಾಯಯುತ ತನಿಖೆ ನಡೆಸುವಲ್ಲಿ ವಿಫಲವಾಗಿದೆ. ಅಲ್ಲದೆ, ದೇಶದ ಮುಸ್ಲಿಂ ನಾಗರಿಕರಿಗೆ ನ್ಯಾಯ ಕೊಡಲು ವಿಫಲವಾಗಿದೆ ಎಂದು ಆರೋಪಿಸಿದೆ.
ಈ ಸಂದರ್ಭದಲ್ಲಿ ವೆಲ್ಫೇರ್ ಪಾರ್ಟಿ ಕಲಬುರಗಿ ಜಿಲ್ಲಾಧ್ಯಕ್ಷ ಸಲೀಂ ಅಹ್ಮದ್ ಚಿತಾಪುರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುಬೀನ್ ಅಹ್ಮದ್, ರಾಜ್ಯ ಕಾರ್ಯಕಾರಿಣಿ ಸದಸ್ಯ ಸೈಯದ್ ಅಬ್ದುಲ್ ಬಾರಿ, ಮುನೀರ್ ಹಶ್ಮಿ ಉಪಸ್ಥಿತರಿದ್ದರು.