ರೈತರ ಪ್ರತಿಭಟನೆ ಕುರಿತು ಸಂಸದ ಸನ್ನಿ ಡಿಯೋಲ್ ಪ್ರತಿಕ್ರಿಯಿಸಿದ್ದು ಹೀಗೆ…
ಚಂಡೀಗಡ: ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ರೈತರ ಹಿತಾಸಕ್ತಿಗಳನ್ನು ಮನಸ್ಸಿನಲ್ಲಿಟ್ಟುಕೊಂಡಿದೆ ಎಂದು ರವಿವಾರ ನಟ-ರಾಜಕಾರಣಿ ಸನ್ನಿ ಡಿಯೋಲ್ ಹೇಳಿದ್ದಾರೆ. ಕೇಂದ್ರದ ಹೊಸ ಕೃಷಿ ಕಾನೂನುಗಳ ವಿರುದ್ಧ ಭಾರೀ ಪ್ರತಿಭಟನೆಗಳ ಕುರಿತು ಕೇಳಿದ ಪ್ರಶ್ನೆಗೆ ಅವರು ಬಿಜೆಪಿ ಪಕ್ಷವನ್ನು ಸಮರ್ಥಿಸಿಕೊಂಡಿದ್ದಾರೆ.
2019ರ ಲೋಕಸಭಾ ಚುನಾವಣೆಯಲ್ಲಿ ತನ್ನ ಪರ ಪ್ರಚಾರ ನಡೆಸಿದ್ದ, ಇದೀಗ ರೈತರ ಪ್ರತಿಭಟನೆಯಲ್ಲಿ ಕೈಜೋಡಿಸಿರುವ ನಟ ಹಾಗೂ ಸಾಮಾಜಿಕ ಹೋರಾಟಗಾರ ದೀಪ್ ಸಿಧು ಅವರಿಂದ ಅಂತರದ ಕಾಯ್ದುಕೊಂಡಿರುವ ಡಿಯೋಲ್, "ಈವಿಚಾರವು ನಮ್ಮ ರೈತರು ಹಾಗೂ ಸರಕಾರಕ್ಕೆ ಸಂಬಂಧಿಸಿದ್ದು ಎಂದು ನಾನು ಇಡೀ ವಿಶ್ವಕ್ಕೆ ವಿನಂತಿಸುತ್ತೇನೆ. ಅವುಗಳ ನಡುವೆ ನೀವು ಬರಬೇಡಿ. ಸರಕಾರ-ರೈತರು ಚರ್ಚೆಯ ಬಳಿಕ ಒಂದು ನಿರ್ಧಾರಕ್ಕೆ ಬರಲಿದ್ದಾರೆ. ಅನೇಕ ಜನರು ಪರಿಸ್ಥಿತಿಯ ಲಾಭ ಪಡೆಯಲು ಬಯಸುತ್ತಾರೆ ಹಾಗೂ ಸಮಸ್ಯೆಗಳನ್ನು ಸೃಷ್ಟಿಸುತ್ತಿದ್ದಾರೆ. ಅವರು ತಮ್ಮದೇ ಆದ ಕಾರ್ಯಸೂಚಿಯನ್ನು ಹೊಂದಿರಬಹುದು'' ಎಂದು ಟ್ವಿಟರ್ ನಲ್ಲಿ ನೀಡಿರುವ ಹೇಳಿಕೆಯೊಂದರಲ್ಲಿ ಡಿಯೋಲ್ ತಿಳಿಸಿದ್ದಾರೆ.
ಸನ್ನಿ ಡಿಯೋಲ್ 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷದಿಂದ ಪಂಜಾಬ್ ನ ಗುರುದಾಸ್ ಪುರ ಕ್ಷೇತ್ರದಿಂದ ಆಯ್ಕೆಯಾಗಿದ್ದರು. ಕೊರೋನ ವೈರಸ್ ಪಾಸಿಟಿವ್ ವರದಿ ಬಂದ ಬಳಿಕ 64ರ ವಯಸ್ಸಿನ ಡಿಯೋಲ್ ಪ್ರಸ್ತುತ ಹಿಮಾಚಲ ಪ್ರದೇಶದ ಮನಾಲಿಯಲ್ಲಿ ಐಸೋಲೇಶನ್ ನಲ್ಲಿದ್ದಾರೆ.