'ಹೊಸ ಕೃಷಿ ಕಾಯ್ದೆ ರದ್ದತಿಯನ್ನು ಪ್ರತಿಷ್ಠೆಯ ವಿಷಯವಾಗಿಸಬೇಡಿ'
ಪ್ರಧಾನಿಗೆ ಅಧೀರ್ ರಂಜನ್ ಚೌಧರಿ ಸಲಹೆ
ಹೊಸದಿಲ್ಲಿ : ಹೊಸದಾಗಿ ಜಾರಿಗೆ ತಂದಿರುವ ಮೂರು ಕೃಷಿ ಕಾನೂನುಗಳನ್ನು ತಕ್ಷಣ ಕೈಬಿಡುವಂತೆ ಲೋಕಸಭೆಯಲ್ಲಿ ಕಾಂಗ್ರೆಸ್ ಪಕ್ಷದ ನಾಯಕರಾಗಿರುವ ಅಧೀರ್ ರಂಜನ್ ಚೌಧರಿ ಆಗ್ರಹಿಸಿದ್ದಾರೆ.
ಈ ಸಂಬಂಧ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿರುವ ಅವರು, "ಇದನ್ನು ಪ್ರತಿಷ್ಠೆಯ ವಿಷಯವಾಗಿಸಬೇಡಿ" ಎಂದು ಸಲಹೆ ಮಾಡಿದ್ದಾರೆ.
ಈ ಕಾಯ್ದೆಗಳು ರೈತ ವಿರೋಧಿ ಮತ್ತು ಕಾರ್ಪೊರೇಟ್ ಸ್ನೇಹಿಯಾಗಿದ್ದು, ರೈತರ ಗಳಿಕೆಗೆ ಇದರಿಂದ ತೀವ್ರ ಧಕ್ಕೆಯಾಗಲಿದೆ ಎಂದು ಚೌಧರಿ ವಿಶ್ಲೇಷಿಸಿದ್ದಾರೆ.
"ಇದನ್ನು ಪ್ರತಿಷ್ಠೆಯ ವಿಷಯವಾಗಿ ಪರಿಗಣಿಸಬೇಡಿ ಎಂದು ಮನವಿ ಮಾಡಿಕೊಳ್ಳುತ್ತಿದ್ದೇನೆ. ಜನರ ಬಯಕೆ ಮತ್ತು ಆಕಾಂಕ್ಷೆಗಳಿಗೆ ಸರ್ಕಾರ ಮಣಿಯಬೇಕು ಹಾಗೂ ಕೃಷಿ ಕಾನೂನು ರದ್ದು ಮಾಡಬೇಕು. ಏಕೆಂದರೆ ಲಕ್ಷಾಂತರ ರೈತರ ಜೀವನಾಧಾರ ಅಪಾಯದಲ್ಲಿದೆ" ಎಂದು ವಿವರಿಸಿದ್ದಾರೆ.
ಈ ಮಧ್ಯೆ ಕೃಷಿ ಕಾನೂನು ರದ್ದುಪಡಿಸುವ ಸಲುವಾಗಿ ಲೋಕಸಭೆಯ ಅಧಿವೇಶನವನ್ನು ತಕ್ಷಣ ಕರೆಯಬೇಕು ಎಂದು ಆಗ್ರಹಿಸಿ ಪಂಜಾಬ್ನ ಕಾಂಗ್ರೆಸ್ ಸಂಸದರು ಜಂತರ್ ಮಂತರ್ನಲ್ಲಿ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ.