ಮಂಗಳೂರಿನ ಖಾಸಗಿ ಕಾಲೇಜುಗಳಲ್ಲಿ ಪ್ರವೇಶ ಶುಲ್ಕ ದಂಧೆ: ಸಿಎಫ್ಐ ಆರೋಪ
![ಮಂಗಳೂರಿನ ಖಾಸಗಿ ಕಾಲೇಜುಗಳಲ್ಲಿ ಪ್ರವೇಶ ಶುಲ್ಕ ದಂಧೆ: ಸಿಎಫ್ಐ ಆರೋಪ ಮಂಗಳೂರಿನ ಖಾಸಗಿ ಕಾಲೇಜುಗಳಲ್ಲಿ ಪ್ರವೇಶ ಶುಲ್ಕ ದಂಧೆ: ಸಿಎಫ್ಐ ಆರೋಪ](https://www.varthabharati.in/sites/default/files/images/articles/2020/12/8/270426-1607428257.jpg)
ಮಂಗಳೂರು, ಡಿ.8: ದ.ಕ.ಜಿಲ್ಲೆಯ ಕೆಲವು ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಅದರಲ್ಲೂ ಮೆಡಿಕಲ್ ಮತ್ತು ಇಂಜಿನಿಯರಿಂಗ್ ಕಾಲೇಜುಗಳ ಪ್ರವೇಶ ಶುಲ್ಕದಲ್ಲಿ ಭಾರೀ ದಂಧೆ ನಡೆಯುತ್ತಿದೆ ಎಂದು ಆರೋಪಿಸಿರುವ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ, ಈ ದಂಧೆಯನ್ನು ನಿಲ್ಲಿಸದಿದ್ದರೆ ಕಾನೂನು ಹೋರಾಟ ಮಾಡುವುದಾಗಿ ಎಚ್ಚರಿಸಿದೆ.
ನಗರದ ಪ್ರೆಸ್ಕ್ಲಬ್ನಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಫ್ಐ ರಾಜ್ಯ ಸಮಿತಿ ಸದಸ್ಯ ಇಮ್ರಾನ್ ಪಿಜೆ ಬಹುತೇಕ ಶಿಕ್ಷಣ ಸಂಸ್ಥೆಗಳಲ್ಲಿ ಅಡ್ಮಿಷನ್ ನೆಪದಲ್ಲಿ ಮತ್ತು ಸೀಟು ಹಂಚಿಕೆಯ ವಿಚಾರದಲ್ಲಿ ವಿದ್ಯಾರ್ಥಿಗಳಿಂದ ಹಣ ಸಂಗ್ರಹಿಸುತ್ತಿರುವುದು ಬೆಳಕಿಗೆ ಬಂದಿದೆ. ಈ ದಂಧೆಯ ವಿರುದ್ಧ ರಾಜ್ಯ ಸರಕಾರವು ಲೋಕಾಯುಕ್ತ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.
ಜಿಲ್ಲೆಯ ಪ್ರತಿಷ್ಠಿತ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕೆ.ಇ.ಎ ಅಧೀನದಲ್ಲಿ ನಡೆದ ಪ್ರವೇಶ ಪರೀಕ್ಷೆಗಳಾದ ಸಿಇಟಿ ರ್ಯಾಂಕ್ ಮೂಲಕ ಪ್ರವೇಶಾತಿ ಪಡೆದ ಮತ್ತು ಕಾಮೆಡ್ ಕೆ ಮೂಲಕ ಅರ್ಹತೆ ಪಡೆದ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ವಿವಿ ಪ್ರಕಾರ ಕಾಲೇಜುಗಳು ಕೇವಲ 56,000 ರೂ. ಮಾತ್ರ ಶುಲ್ಕ ಪಡೆಯಬೇಕು. ಆದರೆ ಸಂಸ್ಥೆಗಳು ಕಾಲೇಜು ಫೀಸ್ ಎಂದು 19,750 ಮತ್ತು 4 ವರ್ಷದಲ್ಲಿ ಆಪ್ಟಿಟ್ಯೂಡ್ ಬೇಸಿಕ್ ಕೋಸ್ ನೆಪದಲ್ಲಿ 10,000 ರೂ., ಇಂಡಸ್ಟ್ರಿಯಲ್ ಕನೆಕ್ಟ್ ಟ್ರೈನಿಂಗ್ ಹೆಸರಲ್ಲಿ 13,000 ರೂ,, ಪ್ಲೇಸ್ಮೆಂಟ್ ಮತ್ತು ಟ್ರೈನಿಂಗ್ ಹೆಸರಲ್ಲಿ 10,000 ರೂ. ಹಾಗೂ ಇತರ ಹಲವು ಕಾರಣಗಳನ್ನು ಹೇಳಿ ಸುಮಾರು 55,000 ರೂ. ಹೆಚ್ಚುವರಿ ಶುಲ್ಕ ಪಡೆಯುತ್ತಿರುವುದು ಕಂಡುಬಂದಿದೆ. ಇದು ಶಿಕ್ಷಣದ ಹೆಸರಿನಲ್ಲಿ ನಡೆಯುತ್ತಿರುವ ವ್ಯಾಪಾರೀಕರಣವಾಗಿದೆ ಎಂದು ಅವರು ಆರೋಪಿಸಿದರು.
ಈ ಮಧ್ಯೆ ಜಿಲ್ಲೆಯ ಕೆಲವು ಖಾಸಗಿ ಮೆಡಿಕಲ್ ಕಾಲೇಜುಗಳಲ್ಲೂ ಕೂಡಾ ಈ ದಂಧೆ ನಡೆಯುತ್ತಿದೆ. ಮ್ಯಾನೇಜ್ಮೆಂಟ್ ಕೋಟಾದಲ್ಲಿ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೆ ನೇರವಾಗಿ ಕಾಲೇಜುಗಳು ಸೀಟು ನೀಡುತ್ತಿಲ್ಲ. ಬದಲಾಗಿ ಶೈಕ್ಷಣಿಕ ವರ್ಷದ ಆರಂಭದಲ್ಲೇ ತಮ್ಮ ಎಲ್ಲಾ ಸೀಟುಗಳನ್ನು ಅಡ್ಮಿಶನ್ ಕನ್ಸಲ್ಟೆನ್ಸಿ ವ್ಯಾಪಾರ ನಡೆಸುತ್ತಿರುವ ಏಜೆಂಟುಗಳಿಗೆ ಸೀಟನ್ನು ಮಾರುತ್ತಾರೆ. ವಿದ್ಯಾರ್ಥಿಗಳು ಅಡ್ಮಿಶನ್ ಬೇಕಾದಲ್ಲಿ ಏಜೆಂಟ್ಗಳ ಮೂಲಕ ಹೆಚ್ಚುವರಿ ಶುಲ್ಕವನ್ನು ನೀಡಿ ದಾಖಲಾಗಬೇಕು. ಹಾಗಾಗಿ ಮ್ಯಾನೆಜ್ಮೆಂಟ್ ಕೋಟಾದಲ್ಲಿ ಮೆಡಿಕಲ್ ಸೀಟು ಬೇಕಾದಲ್ಲಿ ಕಾಲೇಜುಗಳು ನೀಡದೆ ಏಜೆಂಟ್ ಮುಖಾಂತರ ಅಡ್ಮಿಶನ್ ಮಾಡಿಸಿಕೊಳ್ಳುವಂತೆ ಮಾಡುತ್ತದೆ. ನೀಟ್ ಪ್ರವೇಶಾತಿ ಬರೆದು ಅರ್ಹತೆಗೊಂಡ ವಿದ್ಯಾರ್ಥಿಗಳಲ್ಲೂ ಕೂಡಾ ಸರಕಾರ ನಿಗದಿ ಪಡಿಸಿದ್ದಕ್ಕಿಂತ ಪ್ರತಿವರ್ಷ 75,000 ರೂ. ಹೆಚ್ಚುವರಿ ಶುಲ್ಕ ವಸೂಲಿ ಮಾಡುತ್ತಿದ್ದಾರೆ ಎಂದು ಇಮ್ರಾನ್ ಆರೋಪಿಸಿದರು.
ದ.ಕ.ಜಿಲ್ಲೆಯಲ್ಲಿ ಶಿಕ್ಷಣದ ಹೆಸರಿನಲ್ಲಿ ಕೋಟ್ಯಾಂತರ ರೂ. ವಂಚನೆ ನಡೆಯುತ್ತಿದೆ. ಸರಕಾರ ಕಣ್ಣಿದ್ದೂ ಕುರುಡರಂತೆ ವರ್ತಿಸುತ್ತಿದೆ. ಹಾಗಾಗಿ ಈ ವಂಚನೆಗಳಿಗೆ ಸರಕಾರವು ಕೂಡ ನೇರ ಹೊಣೆಯಾಗಿದೆ. ಜಿಲ್ಲೆಯಲ್ಲಿ ಇದುವರೆಗೆ ಒಂದೇ ಒಂದು ಸರಕಾರಿ ಮೆಡಿಕಲ್ ಮತ್ತು ಇಂಜಿನಿಯರಿಂಗ್ ಕಾಲೇಜುಗಳಿಲ್ಲ. ಖಾಸಗಿ ಕಾಲೇಜುಗಳ ಈ ದಂಧೆಗೆ ಕಡಿವಾನ ಹಾಕಲು ಸರಕಾರ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿದ ಇಮ್ರಾನ್, ಖಾಸಗಿ ಶಿಕ್ಷಣ ಸಂಸ್ಥೆಗಳ ಅಡ್ಮಿಶನ್ ದಂಧೆಯನ್ನು ಲೋಕಾಯುಕ್ತದ ಮೂಲಕ ತನಿಖೆ ಮಾಡಿಸಬೇಕು ಎಂದು ಒತ್ತಾಯಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ರಾಜ್ಯ ಸಮಿತಿ ಸದಸ್ಯ ಮುಹಮ್ಮದ್ ಸಾದಿಕ್, ಜಿಲ್ಲಾಧ್ಯಕ್ಷ ಹಸನ್ ಸಿರಾಜ್, ಜಿಲ್ಲಾ ಮುಖಂಡರಾದ ಸವಾದ್ ಕಲ್ಲರ್ಪೆ, ತಾಜುದ್ದೀನ್ ಪೂಂಜಾಲಕಟ್ಟೆ ಉಪಸ್ಥಿತರಿದ್ದರು.