ಮೆಕ್ಕೆಜೋಳವನ್ನು ಕನಿಷ್ಠ ಬೆಲೆ ಯೋಜನೆಯಡಿ ಖರೀದಿಸಲು ಸಾಧ್ಯವಿಲ್ಲ ಎಂದ ಸರಕಾರ: ಕಾಂಗ್ರೆಸ್ ಸಭಾತ್ಯಾಗ

ಬೆಂಗಳೂರು, ಡಿ.8: ರಾಜ್ಯದಲ್ಲಿ ಬೆಳೆದಿರುವ 41 ಲಕ್ಷ ಮೆಟ್ರಿಕ್ ಟನ್ ಮೆಕ್ಕೆಜೋಳವನ್ನು ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಖರೀದಿಸಲು ಸಾಧ್ಯವಿಲ್ಲ ಎಂದು ರಾಜ್ಯ ಸರಕಾರ ನೀಡಿದ ಉತ್ತರವನ್ನು ಪ್ರತಿಭಟಿಸಿ ಕಾಂಗ್ರೆಸ್ ಸದಸ್ಯರು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಸಭಾತ್ಯಾಗ ಮಾಡಿದರು.
ಮಂಗಳವಾರ ವಿಧಾನಸಭೆಯಲ್ಲಿ ನಿಯಮ 69ರಡಿಯಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆ ಕುರಿತು ನಡೆದ ಚರ್ಚೆಗೆ ಸಂಬಂಧಿಸಿದಂತೆ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ಉತ್ತರ ನೀಡಿದರು.
ಪಡಿತರ ವ್ಯವಸ್ಥೆಯಲ್ಲಿ ವಿತರಿಸಲು ಸಾಧ್ಯವಿದ್ದಲ್ಲಿ ಮೆಕ್ಕೆಜೋಳವನ್ನು ಖರೀದಿಸಿ ಹಂಚಿಕೆ ಮಾಡಬಹುದು ಎಂದು ಕೇಂದ್ರ ಸರಕಾರ ತಿಳಿಸಿದೆ. ಆದರೆ, ನಮ್ಮ ರಾಜ್ಯದಲ್ಲಿ ಮೆಕ್ಕೆಜೋಳವನ್ನು ಪಶುಗಳ ಆಹಾರಕ್ಕೆ ಹೊರತುಪಡಿಸಿ, ಮಾನವ ಬಳಕೆಗೆ ಮೆಕ್ಕೆಜೋಳವನ್ನು ಉಪಯೋಗಿಸುವುದಿಲ್ಲ. ಆದುದರಿಂದ, ಮೆಕ್ಕೆಜೋಳವನ್ನು ಖರೀದಿಸಲು ಸಾಧ್ಯವಿಲ್ಲ ಎಂದು ಮಾಧುಸ್ವಾಮಿ ಹೇಳಿದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕಾಂಗ್ರೆಸ್ ಹಿರಿಯ ಸದಸ್ಯ ಎಚ್.ಕೆ.ಪಾಟೀಲ್, ಮೆಕ್ಕೆಜೋಳವನ್ನು ಮಾನವ ಬಳಕೆಗೆ ಉಪಯೋಗಿಸುವುದಿಲ್ಲ ಎಂದು ಸರಕಾರ ಹೇಳುತ್ತಿದೆ. ಆದರೆ, ಮೆಕ್ಕೆಜೋಳದಿಂದ ಗ್ಲೂಕೋಸ್ ಅನ್ನು ಸಿದ್ಧಪಡಿಸುತ್ತಾರೆ. ಕೈಗಾರಿಕೆಗಳ ಉದ್ದೇಶಕ್ಕೂ ಇದರ ಬಳಕೆಯಾಗುತ್ತದೆ. ಸರಕಾರ ಈ ರೀತಿ ಅಸಹಾಯಕವಾದ ಉತ್ತರ ನೀಡಿದರೆ ರೈತರ ಪರಿಸ್ಥಿತಿ ಏನಾಗಬೇಕು ಎಂದು ಪ್ರಶ್ನಿಸಿದರು.
ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡಿ, ರೈತರು ನಷ್ಟಕ್ಕೆ ಒಳಗಾಗಬಾರದು ಎಂಬ ಕಾರಣಕ್ಕೆ ಸ್ವಾಮಿನಾಥನ್ ಸಮಿತಿಯು ತನ್ನ ವರದಿಯಲ್ಲಿ ಶಿಫಾರಸುಗಳನ್ನು ಮಾಡಿದ್ದು, ಪ್ರಧಾನಿ ನರೇಂದ್ರ ಮೋದಿ ಆ ವರದಿಯನ್ನು ಒಪ್ಪಿಕೊಂಡಿರುವುದಾಗಿ ಹಲವಾರು ಸಂದರ್ಭಗಳಲ್ಲಿ ಹೇಳಿದ್ದಾರೆ. ರೈತರ ಆದಾಯ ದ್ವಿಗುಣಗೊಳಿಸುವ ಭರವಸೆಯನ್ನು ನೀಡಿದ್ದಾರೆ. ಆದರೆ, ಈಗ ರೈತರನ್ನು ಸಂಕಷ್ಟಕ್ಕೆ ಸಿಲುಕಲು ಬಿಡುವುದು ಸರಿಯಲ್ಲ ಎಂದರು.
ಕೊರೋನ, ಜಿಎಸ್ಟಿ ಪರಿಹಾರ, ತೆರಿಗೆ ಸಂಗ್ರಹದಲ್ಲಿ ನಮಗೆ ಸ್ವಲ್ಪ ಹಿನ್ನಡೆಯಾಗಿರುವುದನ್ನು ಒಪ್ಪಿಕೊಳ್ಳುತ್ತೇವೆ. ಆದರೆ, ಇದು ಒಂದು ವರ್ಷಕ್ಕೆ ಸೀಮಿತವಾದ ಸಮಸ್ಯೆ. ಹಾಗಂತ, ಈಗ ರೈತರಿಗೆ ಅನ್ಯಾಯ ಮಾಡಲು ಸಾಧ್ಯವಿಲ್ಲ. ಮೆಕ್ಕೆಜೋಳವನ್ನು ಖರೀದಿ ಮಾಡಲು ಸಾಧ್ಯವೇ ಇಲ್ಲ ಎಂದು ಸರಕಾರ ಹೇಳಿದರೆ ಅವರು ಎಲ್ಲಿಗೆ ಹೋಗಬೇಕು. ಕೇಂದ್ರ ಹಾಗೂ ರಾಜ್ಯ ಸರಕಾರ ಆವರ್ತ ನಿಧಿಯನ್ನು ರಚಿಸಿ, ಮೆಕ್ಕೆಜೋಳವನ್ನು ಖರೀದಿ ಮಾಡಬೇಕು ಎಂದು ಸಿದ್ದರಾಮಯ್ಯ ಹೇಳಿದರು.
ಕಾಫಿ ಹಾಗೂ ಮೆಣಸು ಬೆಳೆಗಾರರು ಕಷ್ಟದಲ್ಲಿದ್ದಾರೆ. ಕೇಂದ್ರ ಸಚಿವ ಪಿಯೂಶ್ ಗೋಯಲ್ ನೀಡಿರುವ ಹೇಳಿಕೆ ಪ್ರಕಾರ ಹೊರದೇಶದಿಂದ ನಮ್ಮ ದೇಶಕ್ಕೆ 2016-17ರಲ್ಲಿ 25 ಸಾವಿರ ಟನ್, 2017-18ರಲ್ಲಿ 29,650 ಟನ್, 2018-19ರಲ್ಲಿ 24,950 ಟನ್ ಮೆಣಸು ಆಮದು ಮಾಡಿಕೊಳ್ಳಲಾಗಿದೆ. ನಮ್ಮ ದೇಶದಲ್ಲಿ ಬಳಕೆಗೆ ಬೇಕಿರುವ ಮೆಣಸಿನ ಪ್ರಮಾಣ 55 ಸಾವಿರ ಟನ್. ಆದರೆ, ನಾವು ಬೆಳೆಯುತ್ತಿರುವುದು 71 ಸಾವಿರ ಟನ್. ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ನಾವು ಮೆಣಸು ಬೆಳೆಯುತ್ತಿರುವಾಗ ಹೊರದೇಶದಿಂದ ಆಮದು ಮಾಡಿಕೊಳ್ಳುವ ಅಗತ್ಯವಾದರೂ ಏನು? ಎಂದು ಅವರು ಪ್ರಶ್ನಿಸಿದರು.
ಕೇಂದ್ರ ಸರಕಾರದ ಮೇಲೆ ಒತ್ತಡ ಹೇರಿ ಮೆಣಸು ಆಮದು ಮಾಡಿಕೊಳ್ಳುವುದನ್ನು ನಿಲ್ಲಿಸಬೇಕು. ಚೀನಾ ರೇಷ್ಮೆ ಆಮದು ಮಾಡಿಕೊಳ್ಳಲು ಅವಕಾಶ ಕೊಟ್ಟಿದ್ದರಿಂದ, ಪರಿಸ್ಥಿತಿ ಏನಾಗಿದೆ ಅನ್ನೋದು ನಮ್ಮ ಮುಂದಿದೆ. ಸರಕಾರ ಅಸಾಯಕತೆ ವ್ಯಕ್ತಪಡಿಸುವುದು ಬೇಡ. ಬಜೆಟ್ನಲ್ಲಿ 52 ಸಾವಿರ ಕೋಟಿ ರೂ.ಸಾಲ ಪಡೆಯುವುದಾಗಿ ಹೇಳಿದ್ದೀರಾ. ಹೆಚ್ಚುವರಿ 30 ಸಾವಿರ ಕೋಟಿ ರೂ.ಸಾಲ ಪಡೆಯುತ್ತಿದ್ದಾರೆ. ಇನ್ನು 5 ಸಾವಿರ ಕೋಟಿ ರೂ.ಪಡೆದು ರೈತರ ನೆರವಿಗೆ ಧಾವಿಸಿ ಎಂದು ಆಗ್ರಹಿಸಿದರು. ಸರಕಾರದ ಉತ್ತರ ಪ್ರತಿಭಟಿಸಿ ಕಾಂಗ್ರೆಸ್ ಸದಸ್ಯರು ಸಭಾತ್ಯಾಗ ಮಾಡಿದರು.
ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಜೆಡಿಎಸ್ ಸದಸ್ಯ ಕೆ.ಎಂ.ಶಿವಲಿಂಗೇಗೌಡ, ಸರಕಾರ ಮೆಕ್ಕೆಜೋಳಕ್ಕೆ 1850 ರೂ.ಬೆಂಬಲ ಬೆಲೆ ಘೋಷಣೆ ಮಾಡದೆ ಇದ್ದಿದ್ದರೆ ರೈತರು ಇಷ್ಟೊಂದು ಪ್ರಮಾಣದಲ್ಲಿ ಮೆಕ್ಕೆಜೋಳವನ್ನು ಬೆಳೆಯುತ್ತಿರಲಿಲ್ಲ. ಈ ಖರೀದಿ ಮಾಡಲ್ಲ ಎಂದರೆ ಅವರು ಏನು ಮಾಡಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಮಾಧುಸ್ವಾಮಿ, ಮೆಕ್ಕೆಜೋಳ ಖರೀದಿ ಮಾಡುತ್ತೇವೆ ಎಂದು ನಾವು ಯಾರ ಜೊತೆಯೂ ಒಪ್ಪಂದ ಮಾಡಿಕೊಂಡಿಲ್ಲ ಎಂದರು. ಈ ಸಂದರ್ಭದಲ್ಲಿ ಜೆಡಿಎಸ್ ಸದಸ್ಯರು ಹಾಗೂ ಬಿಜೆಪಿ ಸದಸ್ಯರ ನಡುವೆ ವಾಗ್ವಾದ ನಡೆಯಿತು.







