ರೈತರ ಪ್ರತಿಭಟನೆ: ಭೀಮ್ ಆರ್ಮಿ ಅಧ್ಯಕ್ಷ ಚಂದ್ರಶೇಖರ್ ಆಝಾದ್ಗೆ ಗೃಹಬಂಧನ

ಲಕ್ನೊ, ಡಿ.8: ದಿಲ್ಲಿ ಗಡಿಭಾಗದಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಯನ್ನು ಬೆಂಬಲಿಸಲು ಮತ್ತು ಭಾರತ್ಬಂದ್ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದ ತನ್ನನ್ನು ಆದಿತ್ಯನಾಥ್ ಸೂಚನೆಯಂತೆ ಉತ್ತರಪ್ರದೇಶ ಪೊಲೀಸರು ತಡೆದು ಗೃಹಬಂಧನದಲ್ಲಿ ಇರಿಸಿದ್ದಾರೆ ಎಂದು ಭೀಮ್ ಅರ್ಮಿ ಅಧ್ಯಕ್ಷ ಚಂದ್ರಶೇಖರ್ ಆಝಾದ್ ಟ್ವೀಟ್ ಮಾಡಿದ್ದಾರೆ.
ಇವತ್ತು ಭಾರತ ಮತ್ತೊಮ್ಮೆ ತುರ್ತುಪರಿಸ್ಥಿತಿಯ ಯುಗಕ್ಕೆ ಮರಳಿದೆ. ನಮ್ಮ ಅನ್ನದಾತರಾದ ರೈತರಿಗೆ ನಮ್ಮ ಅಗತ್ಯವಿದೆ. ಆದರೆ ಆದಿತ್ಯನಾಥ್ ಸರಕಾರ ಇದಕ್ಕೆ ಅಡ್ಡಿಪಡಿಸಿ ನನ್ನನ್ನು ಮಂಗಳವಾರ ಬೆಳಗ್ಗಿನಿಂದಲೇ ಗೃಹಬಂಧನದಲ್ಲಿರಿಸಿದೆ ಎಂದವರು ಹೇಳಿದ್ದಾರೆ.
ಕಳೆದ ವಾರ ದಿಲ್ಲಿಯ ಗಡಿಯಲ್ಲಿ ನಡೆಯುತ್ತಿದ್ದ ರೈತರ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಚಂದ್ರಶೇಖರ್ ಆಝಾದ್, ರೈತರ ವಿರುದ್ಧ ಜಲಫಿರಂಗಿ, ಅಶ್ರುವಾಯು ಪ್ರಯೋಗಿಸುವ ಮೂಲಕ ಕೇಂದ್ರ ಸರಕಾರ ರೈತರನ್ನು ಭಯೋತ್ಪಾದಕರಂತೆ ನಡೆಸಿಕೊಂಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.
Next Story





