ರೈತರ ಪ್ರತಿಭಟನೆ : ಬುಧವಾರ ಪ್ರತಿಪಕ್ಷದಿಂದ ರಾಷ್ಟ್ರಪತಿ ಭೇಟಿ
ಹೊಸದಿಲ್ಲಿ, ಡಿ. 8: ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರನ್ನು ಭೇಟಿಯಾಗುವುದಕ್ಕಿಂತ ಮುನ್ನ ವಿವಾದಾತ್ಮಕ ಕೃಷಿ ಕಾಯ್ದೆ ಬಗ್ಗೆ ವಿವಿಧ ರಾಜಕೀಯ ಪಕ್ಷಗಳ ನಾಯಕರು ಚರ್ಚೆ ನಡೆಸಲಿದ್ದಾರೆ ಹಾಗೂ ಒಮ್ಮತದ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ಎನ್ಸಿಪಿ ಅಧ್ಯಕ್ಷ ಶರದ್ ಪವಾರ್ ಮಂಗಳವಾರ ಹೇಳಿದ್ದಾರೆ.
ನೂತನ ಕೃಷಿ ಕಾಯ್ದೆ ಬಗ್ಗೆ ತಮ್ಮ ಅಸಮಾಧಾನ ವ್ಯಕ್ತಪಡಿಸಲು ಪ್ರತಿಪಕ್ಷಗಳು ಬುಧವಾರ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರನ್ನು ಭೇಟಿಯಾಗಲಿವೆ. ಮಂಗಳವಾರ ಕರೆ ನೀಡಲಾಗಿದ್ದ ‘ಭಾರತ್ ಬಂದ್’ಗೆ ಬೆಂಬಲ ನೀಡಿದ್ದ ರಾಜಕೀಯ ಪಕ್ಷಗಳಲ್ಲಿ ಶರದ್ ಪವಾರ್ ಅವರ ಎನ್ಸಿಪಿ ಕೂಡ ಸೇರಿತ್ತು. ಯುಪಿಎ ಸರಕಾರದಲ್ಲಿ ಕೃಷಿ ಸಚಿವರಾಗಿದ್ದ ಶರದ್ ಪವಾರ್ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತರುವಂತೆ ರಾಜ್ಯ ಸರಕಾರಗಳಿಗೆ ಸೂಚಿಸಿದ್ದರು ಹಾಗೂ ಮೂರು ಕೃಷಿ ಕಾಯ್ದೆಗಳನ್ನು ಜಾರಿಗೊಳಿಸದೇ ಇದ್ದರೆ ಕೇಂದ್ರ ಸರಕಾರ ಹಣಕಾಸು ನೆರವು ನೀಡದು ಎಂದು ರಾಜ್ಯ ಸರಕಾರಗಳಿಗೆ ಎಚ್ಚರಿಕೆ ನೀಡಿದ್ದರು ಎಂದು ಬಿಜೆಪಿ ಸೋಮವಾರ ಹೇಳಿತ್ತು. ಕೃಷಿ ಸಚಿವರಾಗಿದ್ದ ಅಧಿಕಾರಾವಧಿಯಲ್ಲಿ ಅವರು ತನ್ನ ವಾದವನ್ನು ಸಮರ್ಥಿಸಿಕೊಂಡಿದ್ದರು ಎಂದು ಶರದ್ ಪವಾರ್ ಬರೆದ ಪತ್ರವನ್ನು ಉಲ್ಲೇಖಿಸಿ ಬಿಜೆಪಿ ತಿಳಿಸಿತ್ತು.