ಹದಗೆಟ್ಟ ತೊಕ್ಕೊಟ್ಟು- ಕುತ್ತಾರು ರಸ್ತೆಯಲ್ಲಿ ವಾಹನ ಸವಾರರ ಪರದಾಟ
ಗುಂಡಿ ಬಿದ್ದ ರಸ್ತೆಯಲ್ಲಿ ಸಂಚಾರ ದುಸ್ತರ
ಉಳ್ಳಾಲ: ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳು, ಮೆಡಿಕಲ್ ಕಾಲೇಜ್ ಗಳು ಹಾಗೂ ವಿವಿಧ ಆಸ್ಪತ್ರೆಗಳಿಗೆ ತೆರಳುವ ತೊಕ್ಕೊಟ್ಟು ಹಾಗೂ ಕುತ್ತಾರು ನಡುವಿನ ರಸ್ತೆ ಮಳೆಗಾಲದ ಬಳಿಕ ಸಂಪೂರ್ಣ ಹದಗೆಟ್ಟಿದ್ದು, ರಸ್ತೆಯಲ್ಲಿ ಸಂಚರಿಸಲು ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ರಾಷ್ಟ್ರೀಯ ಹೆದ್ದಾರಿಗೆ ತಾಗಿಕೊಂಡಿರುವ ತೊಕ್ಕೊಟ್ಟು ಜಂಕ್ಷನ್ ನಲ್ಲೇ ರಸ್ತೆ ಅಲ್ಲಲ್ಲಿ ಗುಂಡಿ ಬಿದ್ದಿದ್ದು, ಸಂಚಾರ ದುಸ್ತರವಾಗಿ ವಾಹನ ಸವಾರರು ಸರ್ಕಸ್ ಮಾಡಬೇಕಾಗಿದೆ. ಚೊಂಬುಗುಡ್ಡೆ ಸಮೀಪದ ರಸ್ತೆಯಂತೂ ತೀರಾ ಹದಗೆಟ್ಟಿದ್ದು, ಡಾಂಬರು ಕಿತ್ತುಹೋಗಿ ವಾಹನ ಸವಾರರು ತೀವ್ರ ತೊಂದರೆ ಅನುಭವಿಸುವಂತಾಗಿದೆ. ಇಲ್ಲಿ ಪಾದಾಚಾರಿಗಳಿಗೆ ರಸ್ತೆ ಬದಿಯಲ್ಲಿ ನಡೆಯಲೂ ಜಾಗವಿಲ್ಲದಾಗಿದ್ದು, ರಸ್ತೆಯಲ್ಲೇ ನಡೆಯಬೇಕಾದ ಸ್ಥಿತಿ ಉದ್ಭವಿಸಿದೆ. ಶೀಘ್ರವೇ ರಸ್ತೆ ದುರಸ್ತಿ ಮಾಡಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಇಲ್ಲಿ ಗುಂಡಿ ತುಂಬಿದ ರಸ್ತೆಗಳೇ ಇರುವುದರಿಂದ ವಾಹನ ದಟ್ಟನೆಯೂ ಉಂಟಾಗುತ್ತಿದ್ದು, ಧೂಳಿನ ಕಾಟವೂ ರಸ್ತೆ ಬದಿಯ ವ್ಯಾಪಾರಸ್ಥರನ್ನು ಹೈರಾಣಾಗಿಸಿದೆ. ವಾಹನ ಸವಾರರು ಎದ್ದು ಬಿದ್ದು ಹೋಗಬೇಕಾದ ಪರಿಸ್ಥಿತಿ ಉಂಟಾಗಿ ಜನರು ನಗರಸಭೆಗೆ ಹಿಡಿಶಾಪ ಹಾಕಿಕೊಂಡು ಸಂಚರಿಸುವಂತಾಗಿದೆ. ಇತ್ತೀಚಿಗೆ ರಸ್ತೆ ರಿಪೇರಿ ಮಾಡಿದ್ದರೂ ಕೂಡಾ ಕೆಲ ದಿನಗಳಲ್ಲೆ ರಸ್ತೆ ಡಾಂಬರು ಕಿತ್ತುಹೋಗಿ ಮೊದಲಿನಂತಾಗಿದೆ.
ಅಲ್ಲದೇ, ಪಂಡಿತ್ ಹೌಸ್, ಬಬ್ಬುಕಟ್ಟೆ, ಕುತ್ತಾರ್ ರಸ್ತೆಯಲ್ಲಿ ಕೂಡಾ ಅಲ್ಲಲ್ಲಿ ಗುಂಡಿ ಬಿದ್ದಿದ್ದು, ವಾಹನ ಸವಾರರು ತೀವ್ರ ತೊಂದರೆ ಅನುಭವಿಸುವಂತಾಗಿದೆ. ಮಳೆ ಬಂದರೆ ಸಮಸ್ಯೆ ಮತ್ತಷ್ಟು ಬಿಗಡಾಯಿಸುತ್ತದೆ’ ಎಂದು ಸ್ಥಳೀಯರು ದೂರಿದ್ದಾರೆ.
ಟ್ರಾಫಿಕ್ ಜಾಮ್: ಶಿಕ್ಷಣ ಸಂಸ್ಥೆಗಳು, ಮೆಡಿಕಲ್ ಕಾಲೇಜ್ ಗಳು ಹಾಗೂ ವಿವಿಧ ಆಸ್ಪತ್ರೆಗಳಿಗೆ ತೆರಳಲು ಇದೇ ರಸ್ತೆಯನ್ನು ಅವಲಂಬಿಸಬೇಕಾಗಿದ್ದರಿಂದ ಈ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಸರ್ವೇ ಸಾಮಾನ್ಯ ಎಂಬಂತಾಗಿದೆ. ಅದರಲ್ಲೂ ಬೆಳಗ್ಗೆ ಹಾಗೂ ಸಂಜೆ ವೇಳೆಗೆ ಈ ರಸ್ತೆಯಲ್ಲಿ ವಾಹನಗಳು ತುಂಬಿ ವಾಹನ ದಟ್ಟಣೆ ಉಂಟಾಗುತ್ತದೆ. ಪ್ರಯಾಣಿಕರ ಬಸ್ ನಿಲ್ಲಿಸಲೂ ಸರಿಯಾದ ಜಾಗ ಇಲ್ಲದಿರುವುದರಿಂದ ರಸ್ತೆಯಲ್ಲೇ ಬಸ್ ನಿಲುಗಡೆ ಮಾಡುತ್ತಿದ್ದು, ಇದರಿಂದ ಟ್ರಾಫಿಕ್ ಸಮಸ್ಯೆ ಹೆಚ್ಚಾಗಿದೆ.
ಇಲ್ಲಿ ರಸ್ತೆ ಇಕ್ಕಟ್ಟಾಗಿರುವುದರಿಂದ ಪ್ರಯಾಣಿಕರ ಬಸ್ ನಿಲ್ಲಿಸಿದಾಗ ರಸ್ತೆಯುದ್ದಕ್ಕೂ ವಾಹನಗಳು ಸಾಲುಗಟ್ಟಿ ನಿಂತುಕೊಂಡಿರುತ್ತವೆ. ರಸ್ತೆಯನ್ನು ಅಗಲೀಕರಣ ಮಾಡುವ ಬಗ್ಗೆ ಭರವಸೆ ನೀಡಿದ್ದರೂ ಇನ್ನೂ ಅಗಲೀಕರಣ ಕಾಮಗಾರಿ ಆರಂಭವಾಗಿಲ್ಲ ಎಂದು ನಿತ್ಯ ಪ್ರಯಾಣಿಸುವ ಕುತ್ತಾರು ನಿವಾಸಿಯೊಬ್ಬರು ದೂರಿದ್ದಾರೆ.
''ಹಲವು ತಿಂಗಳುಗಳ ಹಿಂದೆಯೇ ಇಲ್ಲಿನ ರಸ್ತೆ ಹದಗೆಟ್ಟಿದ್ದರೂ ಇನ್ನೂ ರಸ್ತೆ ದುರಸ್ತಿಯಾಗಿಲ್ಲ. ಒಮ್ಮೆ ರಿಪೇರಿ ಮಾಡಿದ್ದರೂ ಕೆಲ ದಿನಗಳಲ್ಲೆ ಡಾಂಬರು ಕಿತ್ತುಹೋಗಿ ಮೊದಲಿನಂತಾಗಿದೆ. ರಸ್ತೆ ಅಗಲೀಕರಣ ಮಾಡುತ್ತಾರೆಂಬ ಮಾಹಿತಿ ಇದೆ. ಆದರೂ ಇನ್ನೂ ಕಾಮಗಾರಿ ಆರಂಭವಾಗಿಲ್ಲ. ಜನವರಿಯಲ್ಲಿ ಕಾಮಗಾರಿ ಶುರು ಮಾಡಬಹುದು'' ಎಂದು ಸ್ಥಳೀಯ ನಿವಾಸಿಯೊಬ್ಬರು ಮಾಹಿತಿ ನೀಡಿದ್ದಾರೆ.