ರೈತರ ಪ್ರತಿಭಟನೆಯ ಹಿಂದೆ ಚೀನಾ, ಪಾಕಿಸ್ತಾನದ ಕೈವಾಡವಿದೆ: ಕೇಂದ್ರ ಸಚಿವ ಆರೋಪ
ಹೊಸದಿಲ್ಲಿ: ಮೂರು ಕೃಷಿ ಕಾನೂನುಗಳನ್ನು ರದ್ದುಪಡಿಸಲು ಆಗ್ರಹಿಸಿ ಈಗ ನಡೆಯುತ್ತಿರುವ ರೈತರ ಪ್ರತಿಭಟನೆಯ ಹಿಂದೆ ಚೀನಾ ಹಾಗೂ ಪಾಕಿಸ್ತಾನದ ಕೈವಾಡವಿದೆ ಎಂದು ಕೇಂದ್ರ ಸಚಿವ ರಾವ್ಸಾಹೇಬ್ ದಾನ್ವೆ ಬುಧವಾರ ಆರೋಪಿಸಿದ್ದಾರೆ.
ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ) ಹಾಗೂ ರಾಷ್ಟ್ರೀಯ ನಾಗರಿಕರ ನೋಂದಣಿ(ಎನ್ಆರ್ಸಿ)ಕುರಿತು ಈ ಹಿಂದೆ ಮುಸ್ಲಿಮರ ದಾರಿ ತಪ್ಪಿಸಲಾಗಿತ್ತು. ಆದರೆ, ಆ ಪ್ರಯತ್ನ ಯಶಸ್ಸು ಕಾಣಲಿಲ್ಲ. ಇದೀಗ ನೂತನ ಮಸೂದೆಗಳಿಂದ ನಷ್ಟವನ್ನು ಎದುರಿಸಬೇಕಾಗುತ್ತದೆ ಎಂದು ರೈತರನ್ನು ಹೆದರಿಸಲಾಗುತ್ತ್ತಿದೆ ಎಂದು ದಾನ್ವೆ ಹೇಳಿದ್ದಾರೆ.
ಮಹಾರಾಷ್ಟ್ರದ ಜಲ್ನಾ ಜಿಲ್ಲೆಯ ಬಡ್ನಾಪುರ ತಾಲೂಕಿನ ಕೊಲ್ಟೆ ಟಕ್ಲಿ ಯಲ್ಲಿ ಆರೋಗ್ಯ ಕೇಂದ್ರವನ್ನು ಉದ್ಘಾಟಿಸಿದ ಬಳಿಕ ದಾನ್ವೆ ಮಾತನಾಡುತ್ತಿದ್ದರು.
ಆ ರೈತರಿಂದಲೇ ಪ್ರತಿಭಟನೆ ನಡೆಯುತ್ತಿಲ್ಲ. ಇದರ ಹಿಂದೆ ಚೀನಾ ಹಾಗೂ ಪಾಕಿಸ್ತಾನದ ಕೈವಾಡವಿದೆ. ನಮ್ಮ ದೇಶದ ಮುಸ್ಲಿಮರನ್ನು ಮೊದಲಿಗೆ ಪ್ರಚೋದಿಸಲಾಗಿತ್ತು. ಎನ್ಆರ್ಸಿ ಬರುತ್ತಿದೆ, ಸಿಎಎ ಬರುತ್ತಿದೆ. ಮುಸ್ಲಿಮರು ಮುಂದಿನ ಆರು ತಿಂಗಳಲ್ಲಿ ದೇಶವನ್ನು ಬಿಟ್ಟು ಹೋಗಬೇಕಾಗುತ್ತದೆ ಎಂದು ಭೀತಿ ಹುಟ್ಟಿಸಲಾಯಿತು. ಮುಸ್ಲಿಮರು ದೇಶವನ್ನು ಬಿಟ್ಟುಹೋಗಿದ್ದಾರೆಯೇ?ರೈತರ ಹೋರಾಟದ ಹಿಂದೆ ಎರಡು ನೆರೆಯ ರಾಷ್ಟ್ರಗಳ ಕೈವಾಡವಿದೆ ಎಂದು ಪುನರುಚ್ಚರಿಸಿದರು.