ವಿಧಾನಸಭೆ ಅಧಿವೇಶನ: ಕಲಾಪದತ್ತ ಸುಳಿಯದ ಕಾಂಗ್ರೆಸ್ ಸದಸ್ಯರು

File photo
ಬೆಂಗಳೂರು, ಡಿ. 10: ರಾಜ್ಯ ಸರಕಾರ ತರಾತುರಿಯಲ್ಲಿ ‘ಗೋಹತ್ಯೆ ನಿಷೇಧ ಕಾಯ್ದೆ’ಯನ್ನು ವಿಧಾನಸಭೆಯಲ್ಲಿ ಮಂಡಿಸಿದ ಕ್ರಮವನ್ನು ಖಂಡಿಸಿ ಕಲಾಪವನ್ನು ಬಹಿಷ್ಕರಿಸಿದ ವಿರೋಧ ಪಕ್ಷ ಕಾಂಗ್ರೆಸ್ ಸದಸ್ಯರು ವಿಧಾನಸಭೆ ಕಲಾಪದಿಂದ ದೂರ ಉಳಿದರು.
ಗುರುವಾರ ಬೆಳಗ್ಗೆ ವಿಧಾನಸಭೆ ಕಲಾಪ ಆರಂಭಗೊಳ್ಳುತ್ತಿದ್ದಂತೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು, ‘ವಿಪಕ್ಷಗಳು ಸದನದ ಕಲಾಪವನ್ನು ಬಹಿಷ್ಕರಿಸುವುದು ಸರಿಯಲ್ಲ. ಸೈದ್ಧಾಂತಿಕ ವಿರೋಧ ಯಾವಾಗಲೂ ಇದ್ದದ್ದೇ. ಅದನ್ನು ಜನರ ಮುಂದೆ ಕೊಂಡೊಯ್ಯುವ ಪ್ರಯತ್ನ ಮಾಡಲಿ. ವಿಪಕ್ಷಗಳ ಸದಸ್ಯರು ಅಧಿವೇಶನ ಕಲಾಪದಲ್ಲಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.
ಕಲಾಪದಲ್ಲಿ ಎಲ್ಲ ವಿಚಾರಗಳಿಗೆ ಚರ್ಚೆಗೆ ಎಲ್ಲರಿಗೂ ಅವಕಾಶವಿದೆ. ಆದರೆ, ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ವಿರೋಧ ಪಕ್ಷಗಳಿಲ್ಲದೆ ಕಲಾಪ ನಡೆಸುವುದು ಸೂಕ್ತವಲ್ಲ. ವಿರೋಧ ಪಕ್ಷದವರು ಕಲಾಪದಲ್ಲಿ ಭಾಗವಹಿಸಬೇಕೆಂದು ಮನವಿ ಮಾಡಿದರು. ಪ್ರತಿಪಕ್ಷದವರ ಮನವೊಲಿಸುವ ಪ್ರಯತ್ನ ಮಾಡುತ್ತೇನೆ ಎಂದು ಸ್ಪೀಕರ್ ಅವರು ಸದನವನ್ನು 10 ನಿಮಿಷ ಮುಂದೂಡಿದರು.
ಸ್ಪೀಕರ್ ತಮ್ಮ ಕಚೇರಿಗೆ ಬರುವಂತೆ ಕಾಂಗ್ರೆಸ್ ಸದಸ್ಯರನ್ನು ಆಹ್ವಾನಿಸಿದರು. ಆದರೆ, ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಡೆಯುತ್ತಿರುವ ಹಿನ್ನೆಲೆ ಯಾವುದೇ ಸದಸ್ಯರು ಬರಲಿಲ್ಲ. ಆ ಬಳಿಕ ಸದನ ಸಮಾವೇಶಗೊಂಡಾಗ ಶಾಸಕಾಂಗ ಪಕ್ಷದ ಸಭೆ ಇರುವುದರಿಂದ ಕಾಂಗ್ರೆಸ್ ಸದಸ್ಯರು ಬರದ ಕಾರಣ ಸದನವನ್ನು ಮುಂದುವರೆಸೋಣ. ಅವರು ಸದನಕ್ಕೆ ಬರುವ ಸಂಪೂರ್ಣ ವಿಶ್ವಾಸವಿದೆ ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
ಇದೇ ವೇಳೆ ಮಾತನಾಡಿದ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ, ವಿಧಾನಸಭೆಯಲ್ಲಿ ಅಂಗೀಕಾರಗೊಂಡ ವಿಧೇಯಕಗಳು ಮೇಲ್ಮನೆಯಲ್ಲಿ ಅಂಗೀಕಾರವಾಗದೆ ಬಾಕಿ ಇವೆ. ರಾಜ್ಯಪಾಲರು ಇದನ್ನು ಗಮನಿಸುತ್ತಿದ್ದು, ಉಭಯ ಸದನಗಳಲ್ಲಿ ಮಸೂದೆ ಅಂಗೀಕಾರ ಆಗದ ಸ್ಥಿತಿ ಸರಿಯಲ್ಲ ಎಂದು ಆಕ್ಷೇಪಿಸುತ್ತಿದ್ದಾರೆ.
ಕಲಾಪ ಸಲಹಾ ಸಮಿತಿ ಸಭೆಯಲ್ಲೂ ಮಹತ್ವದ ಮಸೂದೆಗೆ ಮಂಡಿಸಲಾಗುವುದು ಎಂದು ತಿಳಿಸಿದ್ದರೂ ಕಾಂಗ್ರೆಸ್ ಸದಸ್ಯರು ಸದನಕ್ಕೆ ಹಾಜರಾಗದಿರುವುದು ಶೋಭೆಯಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯ ಭಾಷಣ ಮಾಡುವ ಕಾಂಗ್ರೆಸ್ ಈ ಹಿಂದೆ ಅಂಗೀಕಾರಗೊಂಡಿದ್ದ ಗೋಹತ್ಯೆ ನಿಷೇಧ ಮಸೂದೆಯನ್ನು ಅಂದಿನ ರಾಜ್ಯಪಾಲರು ತಡೆಹಿಡಿದದ್ದು ಏಕೆ ಎಂದು ಪ್ರಶ್ನಿಸಿದರು.







