ಯುಪಿಎ ಮುಖ್ಯಸ್ಥರಾಗಲಿದ್ದಾರೆ ಶರದ್ ಪವಾರ್ ಎಂಬ ಮಾಧ್ಯಮ ವರದಿಗೆ ಎನ್ಸಿಪಿ ಪ್ರತಿಕ್ರಿಯಿಸಿದ್ದು ಹೀಗೆ...
ಮುಂಬೈ: ಶರದ್ ಪವಾರ್ ಅವರು ಯುಪಿಎ ಮುಖ್ಯಸ್ಥ ಹುದ್ದೆ ವಹಿಸಿಕೊಳ್ಳಲಿದ್ದಾರೆ ಎಂಬ ಮಾಧ್ಯಮ ವರದಿಯಲ್ಲಿ ಹುರುಳಿಲ್ಲ ಎಂದು ರಾಷ್ಟ್ರೀಯ ಕಾಂಗ್ರೆಸ್ ಪಕ್ಷ(ಎನ್ಸಿಪಿ)ಗುರುವಾರ ಸ್ಪಷ್ಟಪಡಿಸಿದೆ.
ಶರದ್ ಪವಾರ್ ಅವರು ಯುಪಿಎ ಮುಖ್ಯಸ್ಥ ಸ್ಥಾನವಹಿಸಿಕೊಳ್ಳಲಿದ್ದಾರೆ ಎಂಬ ಹುರುಳಿಲ್ಲದ ವರದಿಯು ಬಂದಿದೆ. ಇಂತಹ ಪ್ರಸ್ತಾವದ ಬಗ್ಗೆ ಯುಪಿಎ ಪಾಲುದಾರ ಪಕ್ಷಗಳಲ್ಲಿ ಚರ್ಚೆಯೇ ನಡೆದಿಲ್ಲ. ಈಗ ನಡೆಯುತ್ತಿರುವ ರೈತರ ಪ್ರತಿಭಟನೆಯನ್ನು ಬೇರತ್ತ ಸೆಳೆಯಲು ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಇಂತಹ ಸಂಚು ಮಾಡುತ್ತಿವೆ ಎಂದು ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ಸ್ಪಷ್ಟಪಡಿಸಲು ಬಯಸುತ್ತದೆ ಎಂದು ಎನ್ಸಿಪಿ ಮುಖ್ಯ ವಕ್ತಾರ ಮಹೇಶ್ ತಾಪ್ಸೆ ಹೇಳಿದ್ದಾರೆ.
ಈಗ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಯುಪಿಎ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸೋನಿಯಾ ಗಾಂಧಿ ಅವರಿಗೆ ಅನಾರೋಗ್ಯ ಸಮಸ್ಯೆ ಕಾಡುತ್ತಿರುವ ಕಾರಣ ಅವರು ಯುಪಿಎ ಮುಖ್ಯಸ್ಥೆ ಸ್ಥಾನವನ್ನು ತ್ಯಜಿಸುವ ಸಾಧ್ಯತೆಯಿದೆ. ಅವರ ಸ್ಥಾನವನ್ನು ಶರದ್ ಪವಾರ್ ತುಂಬುವ ನಿರೀಕ್ಷೆಯಿದೆ ಎಂದು ವರದಿಯಾಗಿತ್ತು.
ರಾಜಕಾರಣದಲ್ಲಿ ಏನೂ ಕೂಡ ನಡೆಯಬಹುದು. ಡಿಸೆಂಬರ್ 12 ರಂದು 80ನೇ ವರ್ಷಕ್ಕೆ ಕಾಲಿಡಲಿರುವ ಪವಾರ್ ದೊಡ್ಡ ಹುದ್ದೆಯನ್ನು ನಿಭಾಯಿಸಲು ಸಮರ್ಥರಾಗಿದ್ದಾರೆ ಎಂದು ಮಹಾರಾಷ್ಟ್ರದಲ್ಲಿ ಎನ್ಸಿಪಿಯ ಮೈತ್ರಿಪಕ್ಷವಾಗಿರುವ ಶಿವಸೇನೆ ವರದಿಯ ಕುರಿತ ಪ್ರಶ್ನೆಗೆ ಉತ್ತರಿಸಿದೆ.