ಬಹು ನಿರೀಕ್ಷಿತ ಮೈಸೂರು- ಮಂಗಳೂರು ನಡುವಿನ ವಿಮಾನ ಹಾರಾಟಕ್ಕೆ ಚಾಲನೆ
ಮೈಸೂರು,ಡಿ.11: ಬಹುದಿನಗಳಿಂದ ನಿರೀಕ್ಷಿಸುತ್ತಿದ್ದ ಸಾಂಸ್ಕೃತಿಕ ನಗರಿ ಮೈಸೂರು- ಕಡಲನಗರಿ ಮಂಗಳೂರು ನಡುವಿನ ವಿಮಾನ ಹಾರಾಟಕ್ಕೆ ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ಚಾಲನೆ ನೀಡಲಾಯಿತು.
ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಬಾವುಟ ತೋರಿಸುವ ಮೂಲಕ ಚಾಲನೆ ನೀಡಿ ಶುಭ ಹಾರೈಸಿದರು. ಅಲಯನ್ಸ್ ಏರ್ ಸಂಸ್ಥೆಯ ವಿಮಾನ ಸೇವೆಗೆ ಮುಂದೆ ಬಂದಿದ್ದು ಬುಧವಾರ, ಶುಕ್ರವಾರ, ಶನಿವಾರ ಮತ್ತು ರವಿವಾರಗಳಂದು ವಿಮಾನ ಸೇವೆ ಒದಗಿಸಲಿದೆ. ಈ ದಿನಗಳಲ್ಲಿ 11.20ಕ್ಕೆ ಮೈಸೂರಿನಿಂದ ಹೊರಡುವ ವಿಮಾನವು ಮಧ್ಯಾಹ್ನ 12.30ಕ್ಕೆ ಮಂಗಳೂರು ತಲುಪಲಿದೆ. ಹಾಗೆಯೇ ಮಧ್ಯಾಹ್ನ 12.55ಕ್ಕೆ ಅಲ್ಲಿಂದ ಹೊರಟು ಮಧ್ಯಾಹ್ನ 1.55ಕ್ಕೆ ಮೈಸೂರು ತಲುಪಲಿದೆ.
ಮೈಸೂರು-ಮಂಗಳೂರು ನಗರಗಳ ನಡುವೆ ವಿಮಾನ ಹಾರಾಟ ಸೇವೆ ಬೇಡಿಕೆ ಹಲವು ತಿಂಗಳು ಹಿಂದಿನಿಂದ ಇತ್ತಾದರೂ ಈ ನಡುವೆ ಕೋವಿಡ್ ಹಿನ್ನೆಲೆಯಲ್ಲಿ ವಿಮಾನ ಹಾರಾಟ ಸಾಕಾರಗೊಳಿಸಲು ಸಾಧ್ಯವಿರಲಿಲ್ಲ. ಇದೀಗ ಕೊರೋನ ಸೋಂಕಿನ ಪ್ರಮಾಣ ಗಣನೀಯವಾಗಿ ಇಳಿಕೆಯಾಗಿರುವುದರಿಂದ ಏರ್ ಅಲಯನ್ಸ್ ಸೇವೆ ಒದಗಿಸಲು ಮುಂದೆ ಬಂದಿದೆ ಎಂದು ವಿಮಾನ ನಿಲ್ದಾಣದ ನಿರ್ದೇಶಕ ಆರ್. ಮಂಜುನಾಥ್ ತಿಳಿಸಿದರು.
ಈ ಸಂದರ್ಭ ಶಾಸಕ ಜಿ.ಟಿ.ದೇವೇಗೌಡ, ಕೆ.ಐ.ಎಸ್.ಎಫ್ ಅಧ್ಯಕ್ಷ ಸುಧಾಕರ್ ಶೆಟ್ಟಿ, ಹೋಟೆಲ್ ಮಾಲಕರ ಸಂಘದ ಅಧ್ಯಕ್ಷ ನಾರಾಯಣಗೌಡ ಸೇರಿದಂತೆ ಹಲವರು ಉಪಸ್ಥಿತರಿದ್ದರು.