ಆಯುರ್ವೇದ ವೈದ್ಯರಿಗೆ ಶಸ್ತ್ರಚಿಕಿತ್ಸೆ ತರಬೇತಿಗೆ ಅವಕಾಶ: ಕೇಂದ್ರದ ಉಪಕ್ರಮ ವಿರೋಧಿಸಿ ದೇಶಾದ್ಯಂತ ವೈದ್ಯರ ಪ್ರತಿಭಟನೆ
ಹೊಸದಿಲ್ಲಿ, ಡಿ.11: ಆಯುರ್ವೇದ ಸ್ನಾತಕೋತ್ತರ ವೈದ್ಯರಿಗೆ ಶಸ್ತ್ರಚಿಕಿತ್ಸೆ ವಿಧಾನಗಳಲ್ಲಿ ತರಬೇತಿ ಪಡೆಯಲು ಅವಕಾಶ ಮಾಡಿಕೊಡುವ ಕೇಂದ್ರ ಸರಕಾರದ ನಿರ್ಧಾರವನ್ನು ವಿರೋಧಿಸಿ ಐಎಂಎ ಶುಕ್ರವಾರ ಕರೆ ನೀಡಿದ್ದ ಮುಷ್ಕರದಲ್ಲಿ ದೇಶದಾದ್ಯಂತ ಸಾವಿರಾರು ವೈದ್ಯರು ಪಾಲ್ಗೊಂಡರು.
ಶುಕ್ರವಾರ ಬೆಳಿಗ್ಗೆ 6ರಿಂದ ಸಂಜೆ 6ರವರೆಗೆ ನಡೆದ ಪ್ರತಿಭಟನೆಯಲ್ಲಿ ಕೋವಿಡ್ ರಹಿತ ಸೇವೆಗಳು ಹಾಗೂ ಅನಿವಾರ್ಯವಲ್ಲದ ಚಟುವಟಿಕೆಗಳನ್ನು ಸ್ಥಗಿತಗೊಳಿಸಲಾಗಿತ್ತು. ದಿಲ್ಲಿಯ ಅಖಿಲ ಭಾರತ ವೈದ್ಯವಿಜ್ಞಾನ ಸಂಸ್ಥೆ(ಎಐಐಎಂಎಸ್), ಸರಕಾರಿ ಆಸ್ಪತ್ರೆಗಳು ಹಾಗೂ ದಿಲ್ಲಿ ನಗರಪಾಲಿಕೆಯ ಅಧೀನದ ಹಿಂದು ರಾವ್ ಆಸ್ಪತ್ರೆಯ ವೈದ್ಯರು ಕೈಗೆ ಕಪ್ಪು ಪಟ್ಟಿ ಧರಿಸಿಕೊಂಡು ಕರ್ತವ್ಯಕ್ಕೆ ಹಾಜರಾಗಿದ್ದರು ಎಂದು ವರದಿ ತಿಳಿಸಿದೆ. ಪ್ರತಿಭಟನೆಗೆ ಬೆಂಬಲ ಸೂಚಿಸಿ ಹೇಳಿಕೆ ಬಿಡುಗಡೆಗೊಳಿಸಿರುವ ಎಐಐಎಂಎಸ್ನ ನಿವಾಸಿ ವೈದ್ಯರ ಸಂಘ, ಸರಕಾರ ಹೊರಡಿಸಿರುವ ಅಧಿಸೂಚನೆಯನ್ನು ಹಿಂಪಡೆಯುವಂತೆ ಆಗ್ರಹಿಸಿದೆ. ಸರಕಾರದ ಕ್ರಮವು ಈಗಾಗಲೇ ಅತಿರೇಕಕ್ಕೆ ತಲುಪಿರುವ ಮೋಸದ ವೈದ್ಯಕೀಯ ಪದ್ಧತಿಗೆ ಇನ್ನಷ್ಟು ಪ್ರಚೋದನೆ ನೀಡುವುದರ ಜೊತೆಗೆ ಸಾರ್ವಜನಿಕರ ಸುರಕ್ಷತೆಯನ್ನು ಹಾಳು ಮಾಡುತ್ತದೆ ಎಂದು ಹೇಳಿಕೆ ತಿಳಿಸಿದೆ.
ಶುಕ್ರವಾರದ ಪ್ರತಿಭಟನೆಯಲ್ಲಿ 30,000ಕ್ಕೂ ಹೆಚ್ಚಿನ ವೈದ್ಯರು ಪಾಲ್ಗೊಂಡಿದ್ದರು ಎಂದು ಐಎಂಎ ಗುಜರಾತ್ ವಿಭಾಗದ ಕಾರ್ಯದರ್ಶಿ ಡಾ ಕಮಲೇಶ್ ಸೈನಿ ಹೇಳಿದ್ದಾರೆ. ಉತ್ತರಪ್ರದೇಶದಲ್ಲಿ 21,500ಕ್ಕೂ ಹೆಚ್ಚು ವೈದ್ಯರು ಹಾಗೂ ಮಹಾರಾಷ್ಟ್ರದಲ್ಲಿ 1 ಲಕ್ಷಕ್ಕೂ ಅಧಿಕ ವೈದ್ಯರು ಮುಷ್ಕರದಲ್ಲಿ ಪಾಲ್ಗೊಂಡಿದ್ದರು ಎಂದು ವರದಿ ತಿಳಿಸಿದೆ.
ಆಯುರ್ವೇದ ಚಿಕಿತ್ಸಾ ಪದ್ದತಿಯ ಶ್ರೀಮಂತ ಪರಂಪರೆಯ ಬಗ್ಗೆ ನಮಗೆ ಹೆಮ್ಮೆಯಿದೆ. ಆದರೆ ಆಧುನಿಕ ವೈದ್ಯ ಪದ್ಧತಿಯು ನಿಯಂತ್ರಿತ ಮತ್ತು ಸಂಶೋಧನಾ ಕೇಂದ್ರಿತವಾಗಿದೆ. ಎರಡನ್ನೂ ಮಿಶ್ರಗೊಳಿಸಬಾರದು ಎಂದು ಐಎಂಎ ರಾಷ್ಟ್ರೀಯ ಅಧ್ಯಕ್ಷ ಡಾ ಆರ್. ಶರ್ಮ ಹೇಳಿದ್ದಾರೆ.