ಉಡುಪಿ: ಡಿ.13ರಂದು ಕೊರೋನ ವಾರಿಯರ್ಸ್ಗೆ ಸನ್ಮಾನ
ಉಡುಪಿ, ಡಿ.12: ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಉಡುಪಿ, ಮಾನವ ಹಕ್ಕುಗಳ ಭಾರತೀಯ ಮಹಾಮೈತ್ರಿ ಉಡುಪಿ ವಿಭಾಗ, ಅರ್ಚನ ಟ್ರಸ್ಟ್ ಮಣಿಪಾಲ ಹಾಗೂ ಭಾರ್ಗವಿ ಆರ್ಟ್ಸ್ ಎಂಡ್ ಡ್ಯಾನ್ಸ್ ಅಕಾಡೆಮಿ ಉಡುಪಿ ಇವರ ಸಹಭಾಗಿತ್ವದಲ್ಲಿ 11 ಮಂದಿ ಕೊರೋನಾ ವಾರಿಯರ್ಗಳಿಗೆ ಸನ್ಮಾನ ಕಾರ್ಯಕ್ರಮ ನಾಳೆ ಡಿ.13ರ ರವಿವಾರ ಸಂಜೆ 4:00 ಗಂಟೆಗೆ ಕನ್ನರ್ಪಾಡಿಯಲ್ಲಿರುವ ಶ್ರೀದೇವಿ ಸಭಾಭವನದಲ್ಲಿ ನಡೆಯಲಿದೆ.
ಅರ್ಚನಾ ಟ್ರಸ್ಟ್ನ ಸಂಸ್ಥಾಪಕ ಜೈವಿಠಲ್ ಅವರು ಈ ವಿಷಯ ತಿಳಿಸಿದರು. ಕೊರೋನ ಸಮಯದಲ್ಲಿ ತಮ್ಮ ಜೀವದ ಹಂಗು ತೊರೆದು ಸಮಾಜಕ್ಕೆ ಸೇವೆ ನೀಡಿದ ಆಶಾ ಕಾರ್ಯಕರ್ತೆಯರು, ವೈದ್ಯರು, ಪೊಲೀಸ್ ಇಲಾಖೆ, ಸಮಾಜ ಸೇವಕರು, ಆ್ಯಂಬುಲೆನ್ಸ್ ಚಾಲಕರು ಹಾಗೂ ಇತರ ರೀತಿಯಲ್ಲಿ ಸೇವೆ ಸಲ್ಲಿಸಿದವರನ್ನು ಗುರುತಿಸಿ ಸನ್ಮಾನಿಸಲಾಗುವುದು ಎಂದವರು ಹೇಳಿದರು.
ಕಾರ್ಯಕ್ರಮದಲ್ಲಿ ಶಾಸಕ ಕೆ.ರಘುಪತಿ ಭಟ್, ತಾಲೂಕು ಆರೋಗ್ಯಾಧಿಕಾರಿ ಡಾ.ನಾಗರತ್ನ, ಮಾನವ ಹಕ್ಕುಗಳ ಭಾರತೀಯ ಮಹಾಮೈತ್ರಿಯ ಸಂಸ್ಥಾಪಕ ಕೊಲ್ಲಾಡಿ ಬಾಲಕೃಷ್ಣ ರೈ, ರೋಟರಿ ಗವರ್ನರ್ ರಾಜಾರಾಂ ಭಟ್, ಶ್ರೀದೇವಿ ಅಡಿಟೋರಿಯಂನ ವ್ಯವಸ್ಥಾಪಕ ರಮೇಶ್ರಾವ್ ಬೀಡು ಭಾಗವಹಿಸುವರು ಎಂದವರು ತಿಳಿಸಿದರು.
ಡಿ.13 ರವಿವಾರ ಬೆಳಗ್ಗೆ 10 ಗಂಟೆಗೆ ಉಡುಪಿ ತಾಲೂಕು ಬ್ರಾಹ್ಮಣ ಮಹಾಸಭಾದ ವಿಪ್ರ ಬಾಂಧವರಿಂದ ಸಾಮೂಹಿಕ ವಿಷ್ಣು ಸಹಸ್ರನಾಮ ಮತ್ತು ಲಕ್ಷ್ಮಿ ಶೋಭಾನೆ ಪಠಣ ಶ್ರೀದೇವಿ ಸಭಾಂಗಣದಲ್ಲಿ ನಡೆಯಲಿದೆ ಎಂದು ಉಡುಪಿ ತಾಲೂಕು ಬ್ರಾಹ್ಮಣ ಮಹಾಸಂಘದ ಅಧ್ಯಕ್ಷ ಮಂಜುನಾಥ ಉಪಾಧ್ಯ, ಪ್ರಧಾನ ಕಾರ್ಯದರ್ಶಿ ಸಂದೀಪ್ ಮಂಜ ಹಾಗೂ ಉಪಾಧ್ಯಕ್ಷ ಶ್ರೀಕಾಂತ ಉಪಾಧ್ಯ ತಿಳಿಸಿದ್ದಾರೆ.