ಸರಕಾರದ ಹೊಸ ಕಾನೂನುಗಳಿಂದ ಅಭಿವ್ಯಕ್ತಿ ಸ್ವಾತಂತ್ರಕ್ಕೆ ಪೆಟ್ಟು: ಡಾ.ಮಹಾಬಲೇಶ್ವರ ರಾವ್
![ಸರಕಾರದ ಹೊಸ ಕಾನೂನುಗಳಿಂದ ಅಭಿವ್ಯಕ್ತಿ ಸ್ವಾತಂತ್ರಕ್ಕೆ ಪೆಟ್ಟು: ಡಾ.ಮಹಾಬಲೇಶ್ವರ ರಾವ್ ಸರಕಾರದ ಹೊಸ ಕಾನೂನುಗಳಿಂದ ಅಭಿವ್ಯಕ್ತಿ ಸ್ವಾತಂತ್ರಕ್ಕೆ ಪೆಟ್ಟು: ಡಾ.ಮಹಾಬಲೇಶ್ವರ ರಾವ್](https://www.varthabharati.in/sites/default/files/images/articles/2020/12/12/270957-1607787860.jpg)
ಉಡುಪಿ, ಡಿ.12: ಇಂದು ಆಳುವ ಸರಕಾರ ಜನರನ್ನು ಬಗ್ಗು ಬಡಿಯುವ ಧೋರಣೆಯೊಂದಿಗೆ ಹೊಸ ಹೊಸ ಕಾಯಿದೆ, ಕಾನೂನುಗಳನ್ನು ಜಾರಿಗೆ ತರುತ್ತಿದೆ. ಇದರಿಂದ ಅಭಿವ್ಯಕ್ತಿ ಸ್ವಾತಂತ್ರ ಹಾಗೂ ಅಭಿಪ್ರಾಯ ಸ್ವಾತಂತ್ರಕ್ಕೆ ಬಹಳ ದೊಡ್ಡ ಪೆಟ್ಟು ಬಿದ್ದಿದೆ ಎಂದು ಉಡುಪಿ ಡಾ.ಟಿ.ಎಂ.ಎ.ಪೈ ಶಿಕ್ಷಣ ಮಹಾ ವಿದ್ಯಾಲಯದ ಸಮನ್ವಯಾಧಿಕಾರಿ, ಶಿಕ್ಷಣ ತಜ್ಞ ಡಾ.ಮಹಾಬಲೇಶ್ವರ ರಾವ್ ಹೇಳಿದ್ದಾರೆ.
ಉಡುಪಿ ಬಡಗ ಬೆಟ್ಟು ಸೊಸೈಟಿಯ ಜಗನ್ನಾಥ ಸಭಾಭವನದಲ್ಲಿ ಶನಿವಾರ ನಡೆದ ಉಡುಪಿ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎನ್.ಎಚ್.ನಾಗೂರ ಬರೆದಿರುವ ಮೂರು ಪುಸ್ತಕಗಳ ಲೋಕಾರ್ಪಣೆ ಸಮಾರಂಭದಲ್ಲಿ ಅವರು ಶೈಕ್ಷಣಿಕ ಲೇಖನಗಳ ಸಂಕಲನ ‘ಶಿಕ್ಷಣ ಸಿರಿ’ ಪುಸ್ತಕವನ್ನು ಬಿಡುಗಡೆಗೊಳಿಸಿ ಮಾತನಾಡುತಿದ್ದರು.
ಶಿಕ್ಷಣ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲೂ ಮಾಹಿತಿಯ ಸಂಸ್ಕರಣೆ, ತಳಸ್ಪರ್ಶಿ ಯಾದ ವಿಶ್ಲೇಷಣೆ, ಕ್ಷೇತ್ರಗಳ ಸಮಸ್ಯೆಗಳ ವಿಶ್ಲೇಷಣೆ ಮಾಡಬೇಕಾಗಿರುವುದು ಅಗತ್ಯವಾಗಿದೆ. ಇದು ಕೇವಲ ಶಿಕ್ಷಣ ಮಾತ್ರವಲ್ಲದೆ ಎಲ್ಲ ಕ್ಷೇತ್ರಗಳಲ್ಲಿಯೂ ಆಗಬೇಕು. ಅದಕ್ಕೆ ನಾವು ಒಳಗಿನ ವಿಮರ್ಶಕರಾಗಬೇಕು ಎಂದರು.
ಆದರೆ ಸರಕಾರಿ ಸೇವೆಯಲ್ಲಿ ಇರುವವರು ಒಳಗಿನ ವಿಮರ್ಶಕರಾಗುವುದು ಕಷ್ಟ. ಇಂದು ಸರಕಾರಿ ಅಧಿಕಾರಿಗಳು ಸರಕಾರವನ್ನು ಟೀಕಿಸುವಂತಿಲ್ಲ. ಟೀಕಿಸಿ ದರೆ ಅದು ಮುಖ್ಯಮಂತ್ರಿ, ಪ್ರಧಾನ ಮಂತ್ರಿ, ನಿರ್ದಿಷ್ಟ ಪಕ್ಷದ ಮೇಲಿನ ಟೀಕೆ ಎಂದು ಆಗುತ್ತದೆ. ಆ ನಂತರ ಆ ವ್ಯಕ್ತಿಗೆ ದೇಶದ್ರೋಹಿ, ಬುದ್ದಿಜೀವಿ, ನಗರ ನಕ್ಸಲ್ ಎಂಬಿತ್ಯಾದಿ ಬಿರುದುಗಳು ದೊರೆಯಬಹುದು ಎಂದು ಅವರು ಟೀಕಿಸಿದರು.
ಸೃಜನಶೀಲತೆ, ಮನೋ ಪಲ್ಲಟ, ನಾಯಕತ್ವ. ಪ್ರೇರಣೆ ಎಂಬ ಗುಣಗಳು ಶಿಕ್ಷಕರು, ವಿದ್ಯಾರ್ಥಿಗಳು, ಪಾಲಕರು ಹಾಗೂ ಸಾರ್ವಜನಿಕರಲ್ಲಿ ಇದ್ದರೆ ಸುಂದರ ನಾಡನ್ನು ಕಟ್ಟಲು ಸಾಧ್ಯವಾಗುತ್ತೆ ಎಂದು ಅವರು ಅಭಿಪ್ರಾಯ ಪಟ್ಟರು.
ಶೈಕ್ಷಣಿಕ ಕವನ ಸಂಕಲನ ‘ಅಕ್ಷರ ಅಂಬಾರಿ’ ಪುಸ್ತಕವನ್ನು ಅಖಿಲ ಭಾರತ ಸಾಹಿತ್ಯ ಪರಿಷತ್ ಉಪಾಧ್ಯಕ್ಷ ಪ್ರೊ.ಸುರೇಂದ್ರನಾಥ ಶೆಟ್ಟಿ, ಪುರಾತನ ಶರಣ ಬಾವೂರ ಬೊಮ್ಮಯ್ಯ ಪುಸ್ತಕವನ್ನು ಬ್ರಹ್ಮಾವರ ಕ್ಷೇತ್ರ ಶಿಕ್ಷಣಾಧಿಕಾರಿ ಓ.ಆರ್. ಪ್ರಕಾಶ್ ಬಿಡುಗಡೆಗೊಳಿಸಿ ಅವಲೋಕನ ಮಾಡಿದರು.
ಕಾರ್ಯಕ್ರಮವನ್ನು ಬಡಗಬೆಟ್ಟು ಸೊಸೈಟಿಯ ಪ್ರಧಾನ ವ್ಯವಸ್ಥಾಪಕ ಜಯಕರ ಶೆಟ್ಟಿ ಇಂದ್ರಾಳಿ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಕಸಾಪ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ವಹಿಸಿದ್ದರು. ಅತಿಥಿಗಳಾಗಿ ಶಿಕ್ಷಣ ಇಲಾಖೆಯ ವಿಶ್ರಾಂತ ಉಪನಿರ್ದೇಶಕ ಶಂಕರ ಖಾರ್ವಿ, ಕಸಾಪ ಕಾರ್ಕಳ ತಾಲೂಕು ಅಧ್ಯಕ್ಷ ಪ್ರಭಾಕರ ಶೆಟ್ಟಿ ಭಾಗವಹಿಸಿದ್ದರು.
ಎನ್.ಎಚ್.ನಾಗೂರ ಪ್ರಾಸ್ತಾವಿಕವಾಗಿ ಮಾತನಾಡಿದರು. ಬ್ರಹ್ಮಾವರ ಶಿಕ್ಷಣ ಸಂಯೋಜಕ ಪ್ರಕಾಶ್ ಬಿ.ಬಿ. ಸ್ವಾಗತಿಸಿದರು. ಮುದ್ರಾಡಿ ನೆಲ್ಲಿಕಟ್ಟೆ ಸರಕಾರಿ ಶಾಲೆಯ ಮುಖ್ಯೋಪಾಧ್ಯಾಯ ರವೀಂದ್ರ ಹೆಗ್ಡೆ ವಂದಿಸಿದರು. ದೈಹಿಕ ಶಿಕ್ಷಕ ಸತೀಶ್ಚಂದ್ರ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.