ಭಾಷೆ ಎಂದೂ ಅಳಿಯದು: ಮುಖ್ಯಮಂತ್ರಿ ಚಂದ್ರು
13 ನೇ ರಾಷ್ಟ್ರೀಯ ಕನ್ನಡ ಸಂಸ್ಕೃತಿ ಸಮ್ಮೇಳನ ಸಮಾರೋಪ
![ಭಾಷೆ ಎಂದೂ ಅಳಿಯದು: ಮುಖ್ಯಮಂತ್ರಿ ಚಂದ್ರು ಭಾಷೆ ಎಂದೂ ಅಳಿಯದು: ಮುಖ್ಯಮಂತ್ರಿ ಚಂದ್ರು](https://www.varthabharati.in/sites/default/files/images/articles/2020/12/13/271108-1607882549.jpg)
ಮಂಗಳೂರು, ಡಿ.13: ಈ ಜಗತ್ತಿನಲ್ಲಿ ಸುಮಾರು 7,000ದವರೆಗೆ ಭಾಷೆಗಳಿವೆ. ಭಾರತದಲ್ಲಿಯೇ 2,500ಭಾಷೆಗಳಿವೆ. ಬದುಕಿನ ಜೊತೆ ಭಾಷೆ ಹುಟ್ಟುತ್ತದೆ ಮತ್ತು ಬೆಳೆಯುತ್ತದೆ. ಶ್ರೇಷ್ಠ ಭಾಷೆ,ಕನಿಷ್ಠ ಭಾಷೆ ಎಂಬ ತಾರತಮ್ಯ ಯಾವತ್ತೂ ಮಾಡಬಾರದು. ಹತ್ತು ಮಂದಿ ಮಾತನಾಡಿದರೂ ಆ ಭಾಷೆಗೆ ವೈಶಿಷ್ಟ್ಯತೆ ಇದೆ. ಭಾಷೆ ಎಂದೂ ಅಳಿಯುವುದಿಲ್ಲ. ಆದರೆ ಅಳಿಸುವಂತಹ ಹುನ್ನಾರ ನಡೆಸಬಹುದಷ್ಟೇ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ಹೇಳಿದರು.
ಹೃದಯವಾಹಿನಿ ಮತ್ತು ಎಸ್.ಕೆ. ಮುನಿಸಿಪಲ್ ಎಂಪ್ಲಾಯೀಸ್ ಯೂನಿಯನ್ನ ಆಶ್ರಯದಲ್ಲಿ ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಶನಿವಾರ ನಡೆದ 13ನೇ ರಾಷ್ಟ್ರೀಯ ಕನ್ನಡ ಸಂಸ್ಕೃತಿ ಸಮ್ಮೇಳನ-2020ರ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಭಾಷೆ ನಿಂತ ನೀರಲ್ಲ. ಸೋದರ ಭಾಷೆಯನ್ನು ಕಡೆಗಣಿಸಬಾರದು ಮತ್ತು ದ್ವೇಷಿಸಬಾರದು.ಸಂಖ್ಯೆ ಕಡಿಮೆಯಾದರೂ ಪ್ರತಿಯೊಂದು ಭಾಷೆಗೂ ತನ್ನದೇ ಆದ ಸತ್ವವಿದೆ,ವಿಶಿಷ್ಟ ಸೊಗಡು ಇದೆ ಎಂದು ಮುಖ್ಯಮಂತ್ರಿ ಚಂದ್ರು ನುಡಿದರು.
ಸಮ್ಮೇಳನಾಧ್ಯಕ್ಷ ಡಾ ಮಹೇಶ್ ಜೋಷಿ, ಶಾಸಕ ಯುಟಿ ಖಾದರ್, ಶಿವರಾಜ್, ದಿಲೀಪ್ ಕುಮಾರ್, ಡಾ ಸತೀಶ್ ಹೊಸಮನಿ ಉಪಸ್ಥಿತರಿದ್ದರು.
ಕನ್ನಡ ಸಂಸ್ಕೃತಿ ಸಮ್ಮೇಳನ ಸಮಿತಿಯ ಅಧ್ಯಕ್ಷ ಕೆಪಿ ಮಂಜುನಾಥ್ ಸಾಗರ್ ಸ್ವಾಗತಿಸಿದರು. ಗೋ. ನಾ ಸ್ವಾಮಿ ವಂದಿಸಿದರು .