ಪ್ರತಿಭಟನಾನಿರತ ರೈತರಿಗೆ ವಿರೋಧ ಪಕ್ಷಗಳು ತಪ್ಪು ಮಾಹಿತಿ ನೀಡುತ್ತಿವೆ: ಪ್ರಧಾನಿ ನರೇಂದ್ರ ಮೋದಿ
ಹೊಸದಿಲ್ಲಿ,ಡಿ.15: ನೂತನ ಕೃಷಿ ಕಾನೂನುಗಳ ವಿರುದ್ಧ ದಿಲ್ಲಿಯ ಗಡಿಗಳಲ್ಲಿ ಪ್ರತಿಭಟನೆಗಳನ್ನು ನಡೆಸುತ್ತಿರುವ ರೈತರನ್ನು ತಪ್ಪುದಾರಿಗೆಳೆಯಲಾಗಿದೆ ಎಂದು ಮಂಗಳವಾರ ಹೇಳಿದ ಪ್ರಧಾನಿ ನರೇಂದ್ರ ಮೋದಿ ಅವರು,ರೈತರ ಕಲ್ಯಾಣಕ್ಕಾಗಿ ನೂತನ ಶಾಸನಗಳನ್ನು ತರಲಾಗಿದೆ ಎಂದು ಒತ್ತಿ ಹೇಳಿದರು.
ವರ್ಷಗಳಿಂದಲೂ ರೈತರು ಮತ್ತು ಪ್ರತಿಪಕ್ಷಗಳು ಆಗ್ರಹಿಸುತ್ತಿದ್ದ ಬೇಡಿಕೆಗಳನ್ನೇ ಈ ಕೃಷಿ ಸುಧಾರಣೆಗಳು ಒಳಗೊಂಡಿವೆ ಎಂದು ಗುಜರಾತಿನ ಕಛ್ನಲ್ಲಿ ಹಲವಾರು ಪ್ರಮುಖ ಯೋಜನೆಗಳಿಗೆ ಶಿಲಾನ್ಯಾಸ ನೆರವೇರಿಸಿದ ಬಳಿಕ ಮಾತನಾಡುತ್ತಿದ್ದ ಮೋದಿ ಹೇಳಿದರು.
ರೈತರನ್ನು ತಪ್ಪುದಾರಿಗೆಳೆಯುತ್ತಿರುವುದಕ್ಕಾಗಿ ಪ್ರತಿಪಕ್ಷಗಳ ವಿರುದ್ಧ ದಾಳಿ ನಡೆಸಿದ ಅವರು,ಪ್ರತಿಪಕ್ಷದಲ್ಲಿರುವವರು ತಾವು ಅಧಿಕಾರದಲ್ಲಿದ್ದಾಗ ಕೃಷಿ ಸುಧಾರಣೆಗಳನ್ನು ತರಲು ವಿಫಲರಾಗಿದ್ದರು ಮತ್ತು ಈಗ ರೈತರನ್ನು ದಾರಿತಪ್ಪಿಸಲು ಪ್ರಯತ್ನಿಸುತ್ತಿದ್ದಾರೆ ಎಂದರು.
ರೈತರಲ್ಲಿ ಗೊಂದಲವನ್ನು ಸೃಷ್ಟಿಸಲು ದಿಲ್ಲಿಯಲ್ಲಿ ಪಿತೂರಿಯೊಂದು ನಡೆಯುತ್ತಿದೆ. ನೂತನ ಕೃಷಿ ಕಾನೂನುಗಳು ಜಾರಿಗೊಂಡ ಬಳಿಕ ರೈತರ ಜಮೀನುಗಳು ಬೇರೆಯವರ ಪಾಲಾಗುತ್ತವೆ ಎಂದು ಅವರಿಗೆ ಹೇಳಲಾಗುತ್ತಿದೆ. ಡೇರಿಯೊಂದು ನಿಮ್ಮಿಂದ ಹಾಲು ಖರೀದಿಸಲು ಒಪ್ಪಂದ ಮಾಡಿಕೊಂಡರೆ ಅದು ನಿಮ್ಮ ಜಾನುವಾರುಗಳನ್ನೂ ಒಯ್ಯುತ್ತದೆಯೇ ಎಂದು ಹೇಳಿದ ಮೋದಿ,ಸರಕಾರವು ರೈತರ ಏಳಿಗೆಗೆ ಬದ್ಧವಾಗಿದೆ.ನೂತನ ಕಾನೂನುಗಳ ಕುರಿತು ಪ್ರತಿಯೊಂದೂ ಕಳವಳವನ್ನು ನಿವಾರಿಸುವುದಾಗಿ ಅವರಲ್ಲಿ ಭರವಸೆ ಮೂಡಿಸುವುದನ್ನು ಕೇಂದ್ರವು ಮುಂದುವರಿಸಲಿದೆ ಎಂದರು.