ಬಿಜೆಪಿಯೇ ನಿಜವಾದ ಟುಕ್ಡೆ-ಟುಕ್ಡೆ ಗ್ಯಾಂಗ್: ಸುಖ್ಬೀರ್ ಸಿಂಗ್ ಬಾದಲ್
ಅಮೃತಸರ: ರೈತರ ಪ್ರತಿಭಟನೆಯಲ್ಲಿ ಮಂಗಳವಾರ ಮಧ್ಯಾಹ್ನ ಭಾಗವಹಿಸಿದ ಅಕಾಲಿ ದಳ ಮುಖ್ಯಸ್ಥ ಸುಖ್ಬೀರ್ ಸಿಂಗ್ ಬಾದಲ್ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿಯ ವಿರುದ್ಧ ವಾಗ್ದಾಳಿ ನಡೆಸಿದರು.
ಬಿಜೆಪಿಯೇ ನಿಜವಾದ ತುಕ್ಡೆ-ತುಕ್ಡೆ ಗ್ಯಾಂಗ್, ಈ ಪಕ್ಷ ಪಂಜಾಬ್ನ್ನು ವಿಭಜಿಸಲು ಯತ್ನಿಸುತ್ತಿದೆ ಎಂದು ಬಾದಲ್ ಆರೋಪಿಸಿದರು.
"ರಾಜಕೀಯ ಲಾಭಕ್ಕಾಗಿ, ದುರುದ್ದೇಶದಿಂದ ದೇಶ ಭಕ್ತಿಯ ಪಂಜಾಬ್ ಅನ್ನು ಕೋಮುಜ್ವಾಲೆಗೆ ತಳ್ಳುವ ಮೂಲಕ ರಾಷ್ಟ್ರೀಯ ಐಕ್ಯತೆಯನ್ನು ನಾಶಪಡಿಸುತ್ತಿದೆ. ಬಿಜೆಪಿ ನಾಚಿಕೆ ಇಲ್ಲದೆ ಮುಸ್ಲಿಮರ ವಿರುದ್ಧ್ದ ಹಿಂದೂಗಳನ್ನು ಪ್ರಚೋದಿಸುತ್ತದೆ ಹಾಗೂ ಈಗ ಹತಾಶರಾಗಿ ಶಾಂತಿಪ್ರಿಯ ಪಂಜಾಬಿ ಹಿಂದೂಗಳನ್ನು ತಮ್ಮ ಸಿಖ್ ಸಹೋದರರ ವಿರುದ್ಧ, ವಿಶೇಷವಾಗಿ ರೈತರ ವಿರುದ್ಧ ಎತ್ತಿಕಟ್ಟುತ್ತಿದೆ'' ಎಂದು ಬಾದಲ್ ಹೇಳಿದ್ದಾರೆ.
ಕೇಂದ್ರ ಸರಕಾರದ ಕೃಷಿ ಕಾನೂನುಗಳನ್ನು ವಿರೋಧಿಸಿ ಅಕಾಲಿ ದಳವು ಬಿಜೆಪಿ ನೇತೃತ್ವದ ಎನ್ಡಿಎಯಿಂದ ಇತ್ತೀಚೆಗೆ ಹೊರ ಬಂದಿತ್ತು.
ಇತ್ತೀಚೆಗೆ ಬಿಹಾರದಲ್ಲಿ ಕೇಂದ್ರದ ಕೃಷಿ ಕಾನೂನುಗಳನ್ನು ಬೆಂಬಲಿಸಿ ಮಾತನಾಡಿದ್ದ ಕೇಂದ್ರ ಕಾನೂನು ಸಚಿವ ರವಿ ಶಂಕರ್ ಪ್ರಸಾದ್ ಅವರು ಟುಕ್ಡೆ-ಟುಕ್ಡೆ ಗ್ಯಾಂಗ್ನವರು ರೈತರ ಪ್ರತಿಭಟನೆಯ ಲಾಭ ಪಡೆಯಲು ಯತ್ನಿಸುತ್ತಿದ್ದಾರೆ ಎಂದು ಹೇಳಿದ್ದರು.