ಉಡುಪಿ, ಮಣಿಪಾಲ: ಎರಡು ಗಂಟೆ ಅವಧಿಯಲ್ಲಿ 4 ಕಡೆಗಳಲ್ಲಿ ಸರ ಸುಲಿಗೆ ಪ್ರಕರಣ
ಉಡುಪಿ, ಡಿ.15: ಉಡುಪಿ ಹಾಗೂ ಮಣಿಪಾಲ ಪೊಲೀಸ್ ಠಾಣೆ ವ್ಯಾಪ್ತಿಯ ನಾಲ್ಕು ಕಡೆಗಳಲ್ಲಿ ಇಂದು ಬೆಳಗ್ಗೆ ಕೇವಲ ಎರಡು ಗಂಟೆಗಳ ಅವಧಿ ಯಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಮಹಿಳೆಯರ ಸರ ಸುಲಿಗೆ ಮಾಡಿರುವ ಘಟನೆಗಳು ವರದಿಯಾಗಿವೆ.
ಮಣಿಪಾಲ ಲಕ್ಷ್ಮೀಂದ್ರ ನಗರದ ಬಾಲಾಜಿ ರೆಸಿಡೆನ್ಸಿ ನಿವಾಸಿ ಸೋಮನಾಥ ಎಂಬವರ ಪತ್ನಿ ಚಂದ್ರಮೌಳಿ ಪದ್ಮಿನಿದೇವಿ ಎಂಬವರು ಬೆಳಗ್ಗೆ 7 ಗಂಟೆಗೆ ಮನೆಯಿಂದ ವಿ.ಪಿ.ನಗರದಲ್ಲಿರುವ ಕಾಮಾಕ್ಷಿ ದೇವಸ್ಥಾನಕ್ಕೆ ನಡೆದುಕೊಂಡು ಹೋಗುತ್ತಿದ್ದರು. ರುದ್ರಪ್ರಿಯ ನಗರದ ಬಳಿ ಹಿಂದಿನಿಂದ ಬೈಕಿನಲ್ಲಿ ಬಂದ 30ರಿಂದ 35 ವರ್ಷದ ಅಪರಿಚಿತ ವ್ಯಕ್ತಿ ಮಹಿಳೆಯ ಕುತ್ತಿಗೆಯಲ್ಲಿದ್ದ 1.25ಲಕ್ಷ ರೂ. ಮೌಲ್ಯದ 30 ಗ್ರಾಂ ಚಿನ್ನದ ಸರವನ್ನು ಎಳೆದು ಪರಾರಿಯಾದನು.
ಅಲ್ಲಿಂದ ಆತ ಬೆಳಗ್ಗೆ 8:30ಕ್ಕೆ ಪೆರಂಪಳ್ಳಿ ಸಂತೋಷ ನಗರ ಬಸ್ ನಿಲ್ದಾಣ ದಿಂದ ಪಂಜುರ್ಲಿ ದೈವಸ್ಥಾನದ ಕಡೆಗೆ ನಡೆದುಕೊಂಡು ಹೋಗು ತ್ತಿದ್ದ ಮೂಡು ಪೆರಂಪಳ್ಳಿಯ ಜಯಂತಿ (55) ಎಂಬವರ ಕುತ್ತಿಗೆಯಲ್ಲಿದ್ದ 50 ಸಾವಿರ ರೂ. ಮೌಲ್ಯದ 10 ಗ್ರಾಂ ಚಿನ್ನದ ಸರವನ್ನು ಸುಲಿಗೆ ಮಾಡಿ ಪರಾರಿಯಾದನು. ಈ ಎರಡು ಪ್ರಕರಣಗಳು ಮಣಿಪಾಲ ಪೊಲೀಸ್ ಠಾಣೆಯಲ್ಲಿ ದಾಖಲಾಗಿವೆ.
ನಂತರ ಸುಲಿಗೆಕೋರ ಉಡುಪಿಗೆ ಆಗಮಿಸಿ, ಕುಂಜಿಬೆಟ್ಟು ಎಂಜಿಎಂ ಮೈದಾನದ ಬಳಿ ಕಡಿಯಾಳಿ ಕಡೆಗೆ ನಡೆದುಕೊಂಡು ಹೋಗುತ್ತಿದ್ದ ಗುಲಾಬಿ ನಾಯ್ಕ್ ಎಂಬವರ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಎಳೆದು, ತುಂಡಾದ 50 ಸಾವಿರ ರೂ. ಮೌಲ್ಯದ 12 ಗ್ರಾಂ ತೂಕದ ಸರವನ್ನು ಮಾಲಿಗೆ ಮಾಡಿದ ಎಂದು ದೂರಲಾಗಿದೆ.
ಬಳಿಕ ಬ್ರಹ್ಮಗಿರಿ ಸೈಂಟ್ ಸಿಸಿಲಿ ಶಾಲೆಯ ಕಂಪೌಂಡ್ ಬಳಿ ಬೆಳಗ್ಗೆ 9ಗಂಟೆಗೆ ನಡೆದುಕೊಂಡು ಹೋಗುತ್ತಿದ್ದ ಕಾಪು ಕೋತಲಕಟ್ಟೆಯ ಜಯ ಬಂಗೇರ ಎಂಬವರ ಪತ್ನಿ ಯಶೋಧ ಬಂಗೇರಾ (38) ಎಂಬವರ ಕುತ್ತಿಗೆಗೆ ಕೈ ಹಾಕಿ ಚಿನ್ನದ ಮಾಂಗಲ್ಯ ಸರವನ್ನು ಎಳೆದನು. ಆಗ ಸರ ತುಂಡಾಗಿ 45 ಸಾವಿರ ರೂ. ಮೌಲ್ಯದ 10 ಗ್ರಾಂ ತೂಕದ ಸರವನ್ನು ಸುಲಿಗೆಕೋರ ತೆಗೆದುಕೊಂಡು ಪರಾರಿ ಯಾದನು ಎಂದು ದೂರಲಾಗಿದೆ. ಈ ಎರಡು ಪ್ರಕರಣಗಳು ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿವೆ.
ಇದೇ ರೀತಿಯ ಪ್ರಕರಣ ಸೆ.19ರಂದು ಉಡುಪಿ ಮತ್ತು ಮಣಿಪಾಲ ಪೊಲೀಸ್ ಠಾಣಾ ವ್ಯಾಪ್ತಿಯ ಮೂರು ಕಡೆಗಳಲ್ಲಿ ಸುಲಿಗೆ ನಡೆದಿತ್ತು. ಈ ಪ್ರಕರಣದಲ್ಲಿ ಹಲವು ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ಇದೀಗ ಮತ್ತೆ ಇಂತಹದ್ದೇ ಪ್ರಕರಣ ನಡೆದಿರುವುದು ನರ ನಿವಾಸಿ ಗಳಲ್ಲಿ ಆತಂಕ ಮೂಡಿಸಿದೆ.
ಮೂರು ತಂಡಗಳ ರಚನೆ
ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿ ತನಿಖೆ ಚುರುಕುಗೊಳಿಸಿರುವ ಪೊಲೀಸರು, ಆರೋಪಿ ಬಂಧನಕ್ಕೆ ಮೂರು ಪೊಲೀಸ್ ತಂಡಗಳನ್ನು ರಚಿಸಿದ್ದಾರೆ.
ಉಡುಪಿ, ಮಣಿಪಾಲ ಹಾಗೂ ಡಿಸಿಐಬಿಯ ಪೊಲೀಸ್ ನಿರೀಕ್ಷಕರುಗಳ ನೇತೃತ್ವದಲ್ಲಿ ಮೂರು ತಂಡಗಳನ್ನು ರಚಿಸಲಾಗಿದೆ. ಈ ನಾಲ್ಕು ಕೃತ್ಯ ಗಳನ್ನು ಒಬ್ಬನೇ ಮಾಡಿರುವುದು ತಿಳಿದುಬಂದಿದೆ. ಆರೋಪಿಯ ಬಂಧನಕ್ಕಾಗಿ ಪೊಲೀಸ್ ತಂಡ ಶೋಧ ಕಾರ್ಯ ನಡೆಸುತ್ತಿದೆ ಎಂದು ಜಿಲ್ಲಾ ಹೆಚ್ಚುವರಿ ಎಸ್ಪಿ ಕುಮಾರಚಂದ್ರ ತಿಳಿಸಿದ್ದಾರೆ.