ರೈತ ಚಳವಳಿಯಲ್ಲಿ ನಕ್ಸಲ್ ಬೆಂಬಲಿತನ ಭಾವಚಿತ್ರ: ಗಡ್ಕರಿ
ಹೊಸದಿಲ್ಲಿ, ಡಿ. 15: ಕೇಂದ್ರ ಸರಕಾರದ ನೂತನ ಕೃಷಿ ಕಾಯ್ದೆ ವಿರುದ್ಧ ರೈತರು ನಡೆಸುತ್ತಿರುವ ಪ್ರತಿಭಟನೆಯ ಸಂದರ್ಭ ನಕ್ಸಲ್ ಚಳವಳಿ ಬೆಂಬಲಿಸಿದ ವ್ಯಕ್ತಿಯ ಭಾವಚಿತ್ರ ಕಂಡು ಬಂದಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
‘‘ನಾನು ಎಲ್ಲ ರೈತರು ಹಾಗೂ ರೈತ ಸಂಘಟನೆಗಳ ಬಗ್ಗೆ ಮಾತನಾಡುತ್ತಿಲ್ಲ. ಆದರೆ, ನಾನು ನಿಮ್ಮಲ್ಲಿ ಕೆಲವು ವಿಷಯಗಳನ್ನು ಪ್ರಶ್ನಿಸಲು ಬಯಸುತ್ತೇನೆ. ಗಡ್ಚಿರೋಳಿ ಜಿಲ್ಲೆಯಲ್ಲಿ ನಕ್ಸಲ್ ಚಳವಳಿ ಬೆಂಬಲಿಸಿದ ಓರ್ವ ವ್ಯಕ್ತಿಯ ಬಗ್ಗೆ ತನಿಖೆ ನಡೆಯುತ್ತಿದೆ. ಆ ವ್ಯಕ್ತಿಗೆ ನ್ಯಾಯಾಲಯ ಜಾಮೀನು ಕೂಡ ನೀಡಿಲ್ಲ. ಆದರೆ, ಆತನ ಭಾವಚಿತ್ರ ರೈತ ಚಳವಳಿಯಲ್ಲಿ ಹೇಗೆ ಕಂಡು ಬಂತು ? ಆತನಿಗೆ ರೈತರು ಹಾಗೂ ಕೃಷಿಯೊಂದಿಗೆ ಇರುವ ಸಂಬಂಧವೇನು?’’ ಎಂದು ಗಡ್ಕರಿ ಪ್ರಶ್ನಿಸಿದ್ದಾರೆ.
ನಮ್ಮ ವರ್ಚಸ್ಸಿಗೆ ಧಕ್ಕೆ ತರಲು ಕೆಲವರು ರೈತ ಚಳವಳಿಯನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ. ‘‘ರಾಷ್ಟ್ರ ವಿರೋಧಿ ಭಾಷಣ ಮಾಡಿದ, ರೈತರೊಂದಿಗೆ ನೇರವಾಗಿ ಅಥವಾ ಪರೋಕ್ಷವಾಗಿ ನಂಟು ಹೊಂದಿರದ ವ್ಯಕ್ತಿಯ ಭಾವಚಿತ್ರ ಚಳವಳಿಯಲ್ಲಿ ಹೇಗೆ ಕಾಣಿಸಿಕೊಂಡಿತು ? ಇದರಲ್ಲಿ ಪ್ರತ್ಯೇಕ ಕಾರ್ಯಸೂಚಿ ಹೊಂದಿರುವ ಜನರಿದ್ದಾರೆ. ಇದು ರೈತರ ಅಥವಾ ರೈತ ಸಂಘಟನೆಗಳ ಕಾರ್ಯ ಸೂಚಿ ಅಲ್ಲ. ರೈತರು ಅದರಿಂದ ದೂರ ಇರಬೇಕು’’ ಎಂದು ಅವರು ಹೇಳಿದ್ದಾರೆ.