1.10 ಲಕ್ಷ ಕೋಟಿ ರೂ. ಉದ್ದಿಮೆ ಆಗಲಿರುವ ತ್ಯಾಜ್ಯ ನಿರ್ವಹಣೆ: ಡಿಸಿಎಂ ಡಾ.ಅಶ್ವತ್ಥ ನಾರಾಯಣ

ಬೆಂಗಳೂರು, ಡಿ.15: ಭಾರತದಲ್ಲಿ ತ್ಯಾಜ್ಯ ನಿರ್ವಹಣಾ ಉದ್ಯಮವು 2025ರ ವೇಳೆಗೆ ಸುಮಾರು 1.10 ಲಕ್ಷ ಕೋಟಿ ರೂಪಾಯಿಗಳಷ್ಟು ಮೊತ್ತದ ವ್ಯಾಪಾರ ಅವಕಾಶಗಳನ್ನು ಸೃಷ್ಟಿಸುವ ಸಾಧ್ಯತೆ ಇದೆ ಎಂದು ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಹೇಳಿದರು.
ಮಂಗಳವಾರ ನಗರದಲ್ಲಿ ಸೋಷಿಯಲ್ ಆಲ್ಫಾ ಮತ್ತು ಎಚ್ ಅಂಡ್ ಎಂ ಫೌಂಡೇಷನ್ ವತಿಯಿಂದ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ‘ತ್ಯಾಜ್ಯ ನಿರ್ವಹಣೆಯಲ್ಲಿ ನಾವೀನ್ಯತಾ ಪರಿಹಾರಗಳಿಗೆ ಸವಾಲು’ ಉಪಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಕಸವನ್ನು ಇಂಧನವನ್ನಾಗಿ ಪರಿವರ್ತಿಸುವ ತಾಂತ್ರಿಕತೆಗಳು, ಇಂಟರ್ನೆಟ್ ಬೆಂಬಲಿತ ಸೇವೆಗಳು, ರೋಬೋಟಿಕ್ಸ್ ಆನ್ವಯಿಕತೆಗಳು, ಜೈವಿಕ ತಂತ್ರಜ್ಞಾನ ಮಧ್ಯಸ್ಥಿಕೆ ನೆರವು ಯೋಜನೆಗಳು, ಸೋಲಾರ್ ಫಲಕಗಳಿರುವ ಕಾಂಪೋಸ್ಟ್ ತಯಾರಿಕಾ ಘಟಕಗಳು, ದತ್ತಾಂಶ ವಿಶ್ಲೇಷಕಗಳು ತ್ಯಾಜ್ಯ ನಿರ್ವಹಣೆಯನ್ನು ಆರ್ಥಿಕ ಕಾರ್ಯಸಾಧುವಾದ ಸುಸ್ಥಿರ ಮಾದರಿಗಳನ್ನಾಗಿ ಮಾಡಬಲ್ಲವು ಎಂದು ಅವರು ಅಭಿಪ್ರಾಯಪಟ್ಟರು.
ತ್ಯಾಜ್ಯ ನಿರ್ವಹಣೆಯಲ್ಲಿ ಸ್ವೀಡನ್ ದೇಶವು ನಮಗೆ ಮಾದರಿಯಾಗಬೇಕು. 2016ರ ಸಂದರ್ಭದಲ್ಲಿ ಅಲ್ಲಿ ಕೂಡ ಇಲ್ಲಿನಂತೆಯೇ ತ್ಯಾಜ್ಯ ವಿಲೇವಾರಿ ಸಮಸ್ಯೆ ಇತ್ತು. ಆದರೆ ತ್ಯಾಜ್ಯವನ್ನು ಇಂಧನವನ್ನಾಗಿ ಪರಿವರ್ತಿಸುವ ತಾಂತ್ರಿಕತೆಯನ್ನು ಅಳವಡಿಸಿಕೊಳ್ಳುವ ಮೂಲಕ ಆ ದೇಶವು ಈಗ ಕಸ ನಿರ್ವಹಣೆಯಿಂದ ಲಾಭ ಗಳಿಸುತ್ತಿದೆ. ಹೀಗಾಗಿ ಆ ದೇಶವು ಈಗ ಕಸವನ್ನು ಬೇರೆ ದೇಶಗಳಿಂದ ಆಮದು ಮಾಡಿಕೊಳ್ಳುತ್ತಿದೆ ಎಂದು ಉಪ ಮುಖ್ಯಮಂತ್ರಿ ವಿವರಿಸಿದರು.
ಹೆಚ್ಚುತ್ತಿರುವ ನಗರೀಕರಣದಿಂದಾಗಿ ತ್ಯಾಜ್ಯ ನಿರ್ವಹಣೆ ಅತ್ಯಂತ ಮಹತ್ವದ್ದಾಗಲಿದೆ. ಇದು ಸುಸ್ಥಿರ ಉದ್ಯೋಗಾವಕಾಶಗಳನ್ನು ಸೃಷ್ಟಿಸಲಿದೆ. ಹೊಸ ಭಾರತ ನಿರ್ಮಾಣದಲ್ಲಿ ಇದು ಹೆಚ್ಚಿನ ಬೆಳವಣಿಗೆಗೆ ಅವಕಾಶವಿರುವ ಉದ್ಯಮವಾಗಲಿದೆ. ಉತ್ತಮ ತ್ಯಾಜ್ಯ ನಿರ್ವಹಣೆಯ ನಮ್ಮ ನಗರಗಳನ್ನು ಸ್ವಚ್ಛಗೊಳಿಸುವ ಜೊತೆಗೆ ಅವುಗಳನ್ನು ವಸತಿಗೆ ಯೋಗ್ಯವಾದ ನೆಲೆಗಳನ್ನಾಗಿ ಹಾಗೂ ಕ್ಷಮತೆಯಿಂದ ಕೂಡಿದ ಸ್ಥಳಗಳನ್ನಾಗಿ ಮಾಡಲಿದೆ ಎಂದು ಅವರು ವಿವರಿಸಿದರು.
ಭಾರತದಲ್ಲಿ ವಾರ್ಷಿಕ 2770 ಲಕ್ಷ ಟನ್ ತ್ಯಾಜ್ಯ ಉತ್ಪತ್ತಿಯಾಗುತ್ತಿದೆ. ಇದರಲ್ಲಿ ಪ್ಲ್ಯಾಸ್ಟಿಕ್ ತ್ಯಾಜ್ಯದ ಪ್ರಮಾಣ 15,000 ಟನ್ಗಳಷ್ಟಿದ್ದು, ಇದರಲ್ಲಿ ಶೇ 40ರಷ್ಟು ಪುನರ್ ಸಂಸ್ಕರಣೆ ಆಗುತ್ತಿಲ್ಲ. ತ್ಯಾಜ್ಯ ನಿರ್ವಹಣೆಯಲ್ಲಿ ನಾವೀನ್ಯತೆಯಿಂದ ಕೂಡಿದ ಪರಿಹಾರಗಳನ್ನು ಅಳವಡಿಸಿಕೊಳ್ಳುವ ಮೂಲಕ ಹೆಚ್ಚಿನ ಲಾಭಗಳನ್ನು ಪಡೆಯಬಹುದಾಗಿದೆ. ಈ ನಿಟ್ಟಿನಲ್ಲಿ ರಾಜ್ಯವು ಕ್ರಮಗಳನ್ನು ಕೈಗೊಂಡಿದೆ. ರಾಜ್ಯ ಸರಕಾರವು ನಗರ ಘನ ತ್ಯಾಜ್ಯ ನಿರ್ವಹಣೆ ಕಾರ್ಯನೀತಿ-2020 ಮತ್ತು ನಗರ ಘನತ್ಯಾಜ್ಯ ನಿರ್ವಹಣಾ ಕಾರ್ಯತಂತ್ರ-2020ಕ್ಕೆ ಅನುಮೋದನೆ ನೀಡಿದೆ ಎಂದು ಅಶ್ವತ್ಥ ನಾರಾಯಣ ತಿಳಿಸಿದರು.
ತ್ಯಾಜ್ಯದಿಂದ ಸಂಪತ್ತು ಸೃಷ್ಟಿಸಬೇಕು. ಈಗ ಚಾಲನೆಗೊಳಿಸಿರುವ ಉಪಕ್ರಮವು ಉದ್ಯಮಿಗಳಿಗೆ ತ್ಯಾಜ್ಯ ನಿರ್ವಹಣೆಯ ಸವಾಲುಗಳಿಗೆ ಪರಿಹಾರ ಕಂಡುಹಿಡಿಯಲು ಅನುವು ಮಾಡಿಕೊಡಲಿದೆ. ತ್ಯಾಜ್ಯ ನಿರ್ವಹಣೆಯಲ್ಲಿ ಅಸಂಘಟಿತ ವಲಯದ ಪಾತ್ರವನ್ನು ಹೆಚ್ಚಿಸಲಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿಪಾದಿಸುವಂತೆ ಬಳಕೆ ಪ್ರಮಾಣ ತಗ್ಗಿಸುವುದು, ಮರುಬಳಕೆ, ಪುನರ್ ಸಂಸ್ಕರಣೆ ಇವು ನಮ್ಮ ಮಂತ್ರಗಳಾಗಬೇಕು ಎಂದು ಅವರು ಹೇಳಿದರು.
ಈ ಉಪಕ್ರಮದ ಮೂಲಕ ತ್ಯಾಜ್ಯ ನಿರ್ವಹಣೆಗೆ ಪರಿಣಾಮಕಾರಿ ಪರಿಹಾರಗಳನ್ನು ಕಂಡುಹಿಡಿಯುವ ಐದು ನವೋದ್ಯಮಗಳನ್ನು ವಿಜೇತರೆಂದು ಆಯ್ಕೆ ಮಾಡಲಾಗುವುದು. ನಂತರ ಈ ನವೋದ್ಯಮಗಳಿಗೆ ತಮ್ಮ ತ್ಯಾಜ್ಯ ನಿರ್ವಹಣಾ ತಾಂತ್ರಿಕತೆಯನ್ನು ಪ್ರಾಯೋಗಿಕವಾಗಿ ಕಾರ್ಯರೂಪಕ್ಕೆ ತರಲು ಸೋಷಿಯಲ್ ಆಲ್ಫಾ ಮತ್ತು ಎಚ್ ಮತ್ತು ಎಂ ಫೌಂಡೇಷನ್ ನೆರವು ನೀಡಲಿವೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಸೋಷಿಯಲ್ ಆಲ್ಫಾ ಕಾರ್ಯಕ್ರಮ ನಿರ್ದೇಶಕಿ ಮಧುಶ್ರೀ ನಾರಾಯಣ್, ಭಾರತ ಸರಕಾರದ ಪ್ರಧಾನ ವೈಜ್ಞಾನಿಕ ಸಲಹೆಗಾರ ವಿಜಯ್ ರಾಘವನ್, ಕರ್ನಾಟಕ ನಾವೀನ್ಯತಾ ಮತ್ತು ತಂತ್ರಜ್ಞಾನ ಸಂಸ್ಥೆಯ (ಕಿಟ್ಸ್) ನಿರ್ದೇಶಕಿ ಮೀನಾ ನಾಗರಾಜ್, ಬಿಬಿಎಂಪಿ ಹೆಚ್ಚುವರಿ ಆಯುಕ್ತ(ಘನ ತ್ಯಾಜ್ಯ ವಿಲೇವಾರಿ) ರಣದೀಪ್ ಡಿ., ಬಿಬಿಎಂಪಿ ಆಡಳಿತಾಧಿಕಾರಿ ಗೌರವ್ ಗುಪ್ತಾ, ಕರ್ನಾಟಕ ನವೋದ್ಯಮಗಳ ದೂರದರ್ಶಿತ್ವ ತಂಡದ ಮುಖ್ಯಸ್ಥ ಪ್ರಶಾಂತ್ ಪ್ರಕಾಶ್ ಉಪಸ್ಥಿತರಿದ್ದರು.







