ಅಮಿತ್ ಶಾ ಸಮ್ಮುಖದಲ್ಲಿ ಟಿಎಂಸಿಯ ಪ್ರಭಾವಿ ನಾಯಕ ಬಿಜೆಪಿ ಸೇರ್ಪಡೆ ಸಾಧ್ಯತೆ
ಕೋಲ್ಕತಾ: ಕಳೆದ ತಿಂಗಳು ಪಶ್ಚಿಮಬಂಗಾಳದ ಸಂಪುಟ ಸಚಿವ ಸ್ಥಾನ ಹಾಗೂ ಇತರ ಹುದ್ದೆಗಳಿಗೆ ರಾಜೀನಾಮೆ ನೀಡಿರುವ ತೃಣಮೂಲ ಕಾಂಗ್ರೆಸ್ ನ ಪ್ರಭಾವಿ ನಾಯಕ ಸುವೇಂದು ಅಧಿಕಾರಿ ಡಿಸೆಂಬರ್ 19 ರಂದು ರಾಜ್ಯಕ್ಕೆ ಗೃಹ ಸಚಿವ ಅಮಿತ್ ಶಾ ಭೇಟಿ ನೀಡಿದ ಸಂದರ್ಭ ಬಿಜೆಪಿಗೆ ಸೇರಲು ಸಜ್ಜಾಗಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.
ಪಶ್ಚಿಮಬಂಗಾಳದ ಭೇಟಿಯ ವೇಳೆ ಶಾ ಮೂರು ಜಿಲ್ಲೆಗಳಲ್ಲಿ ಪ್ರಚಾರ ರ್ಯಾಲಿಗಳಲ್ಲಿ ಭಾಗವಹಿಸಲಿದ್ದು, ಇದರಲ್ಲಿ ಈಸ್ಟ್
ಮಿಡ್ನಾಪುರ ಕೂಡ ಸೇರಿದೆ. ಇಲ್ಲಿ ಅಧಿಕಾರಿಯ ತಂದೆ ಹಾಗೂ ಇಬ್ಬರು ಸಹೋದರರು ಎರಡು ಲೋಕಸಭಾ ಕ್ಷೇತ್ರಗಳು ಹಾಗೂ ಒಂದು ಅಸೆಂಬ್ಲಿ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ಅಧಿಕಾರಿ ನಂದಿಗ್ರಾಮ ಅಸೆಂಬ್ಲಿ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ.
ಅಧಿಕಾರಿ ಈಸ್ಟ್ ಮಿಡ್ನಾಪುರ ರ್ಯಾಲಿಯ ವೇಳೆ ಬಿಜೆಪಿಯನ್ನು ಸೇರಲಿದ್ದಾರೆ ಎಂಬ ನಿರೀಕ್ಷೆ ಇದೆ. ಅಧಿಕಾರಿ ಈ ಹಿಂದೆ ಎರಡು ಎರಡು ಬಾರಿ ಪಕ್ಷ ಸೇರ್ಪಡೆಯ ದಿನಾಂಕ ನೀಡಿ ಹಿಂದೆ ಸರಿದಿದ್ದರು. ಅವರು ಪಕ್ಷದ ನಾಯಕತ್ವಕ್ಕೆ ಬದ್ಧರಾಗಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.
ಅಧಿಕಾರಿ ಗುರುವಾರದಂದು ಹೊಸದಿಲ್ಲಿಗೆ ತೆರಳಿ ಬಿಜೆಪಿ ನಾಯಕರೊಂದಿಗೆ ಮಾತನಾಡುವ ಯೋಜನೆ ಹಾಕಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮಂಗಳವಾರ ಬಿಜೆಪಿ ನಾಯಕ ಕೈಲಾಶ್ ವಿಜಯ ವರ್ಗೀಯ ಅವರು ಅಧಿಕಾರಿಗೆ ಕರೆ ಮಾಡಿ ಹುಟ್ಟುಹಬ್ಬದ ಶುಭಾಶಯ ಕೋರಿದ್ದರು. ಆ ಬಳಿಕ ಅವರು ಬಿಜೆಪಿ ಸೇರುವ ಕುರಿತು ವದಂತಿ ಹಬ್ಬಿತ್ತು. ಅಧಿಕಾರಿ ಡಿಸೆಂಬರ್ 17 ಅಥವಾ 18 ರಂದು ಟಿಎಂಸಿ ಪ್ರಾಥಮಿಕ ಸದಸ್ವತ್ವಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂದು ಅಧಿಕಾರಿಯ ಆಪ್ತರು ಹೇಳಿದ್ದಾರೆ.