ಕೋವಿಡ್ ಪೂರ್ವ ದಿನಗಳಿಗೆ ಭಾರತ ಮರಳಲು ಇನ್ನೆಷ್ಟು ಕಾಲ ಬೇಕು ಗೊತ್ತೇ ?
ಹೊಸದಿಲ್ಲಿ : ಕೊರೋನ ವೈರಸ್ ಹರಡುವಿಕೆ ಸರಪಣಿಯನ್ನು ತುಂಡರಿಸುವ ನಿಟ್ಟಿನಲ್ಲಿ ದೊಡ್ಡ ಜನಸಂಖ್ಯೆಗೆ ಲಸಿಕೆ ನೀಡಲು ಇನ್ನೂ ಕನಿಷ್ಠ ಆರು ತಿಂಗಳು ಬೇಕಾಗಬಹುದು ಹಾಗೂ ಕೋವಿಡ್ ಪೂರ್ವ ದಿನಗಳಿಗೆ ಭಾರತ ಮರಳಲು ಮತ್ತೆ ಆರು ತಿಂಗಳು ಅಗತ್ಯ ಎಂದು ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಎಐಐಎಂಎಸ್) ಮುಖ್ಯಸ್ಥ ಪ್ರೊ. ರಣದೀಪ್ ಗುಲೇರಿಯಾ ಹೇಳಿದ್ದಾರೆ.
"ಮುಂದಿನ ಆರು ತಿಂಗಳಲ್ಲಿ ಸಾಕಷ್ಟು ಮಂದಿ ಸೋಂಕಿನಿಂದ ಗುಣಮುಖರಾದವರು ಮತ್ತು ಲಸಿಕೆ ಪಡೆದು ಪ್ರತಿರೋಧ ಶಕ್ತಿ ಪಡೆದು ಕೊಂಡವರು ಇರುತ್ತಾರೆ" ಎಂದು ಎನ್ಡಿಟಿವಿ ಜತೆ ಮಾತನಾಡಿದ ಅವರು ಹೇಳಿದರು. ಇವೆರಡೂ ಒಟ್ಟಾಗಿ ವೈರಸ್ ಹರಡುವಿಕೆ ಸರಪಣಿಯನ್ನು ತುಂಡರಿಸಲು ಸಾಧ್ಯವಾಗಲಿದೆ" ಎಂದು ಅವರು ತಿಳಿಸಿದರು.
ಅಂತೆಯೇ ಅತ್ಯಧಿಕ ಅಪಾಯ ಸಾಧ್ಯತೆ ಇರುವವರಿಗೆ ಲಸಿಕೆ ನೀಡಿದಾಗ ಸಹಜವಾಗಿಯೇ ಸೋಂಕಿತರ ಮರಣ ದರ ಕಡಿಮೆಯಾಗಲಿದೆ ಎಂದು ಅವರು ಸ್ಪಷ್ಟಪಡಿಸಿದರು.
"ಸೋಂಕು ತಗುಲುವ ಅಧಿಕ ಸಾಧ್ಯತೆ ಇರುವ ಮುನ್ಪಡೆ ಕಾರ್ಯಕರ್ತರಿಗೆ ಮತ್ತು ಆರೋಗ್ಯಸೇವಾ ಕಾರ್ಯಕರ್ತರಿಗೆ, 50 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಮತ್ತು ಸಹ ಅಸ್ವಸ್ಥತೆ ಇರುವವರಿಗೆ ಲಸಿಕೆ ನೀಡಲಿದ್ದೇವೆ. ಇದಕ್ಕೆ ಕನಿಷ್ಠ ಆರು ತಿಂಗಳು ಬೇಕು"
ಎಷ್ಟು ಪ್ರಮಾಣದಲ್ಲಿ ಲಸಿಕೆ ಲಭ್ಯವಾಗುತ್ತದೆ ಹಾಗೂ ಜನಸಾಮಾನ್ಯರಿಗೆ ಎಷ್ಟು ಬೇಗ ನೀಡುತ್ತೇವೆ ಎನ್ನುವುದು ಪ್ರಮುಖವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
"30 ಕೋಟಿ ಜನಕ್ಕೆ ಎರಡು ಬಾರಿಯಂತೆ ಡೋಸ್ ಅಗತ್ಯವಿದೆ. ಅಷ್ಟು ಸಂಖ್ಯೆಯ ಸಿರಿಂಜ್ ಮತ್ತು ಸೂಜಿ ಬೇಕು. ಇದನ್ನು ಆರು ತಿಂಗಳ ಅವಧಿಯಲ್ಲಿ ಮಾಡಬಹುದು" ಕಳೆದ ಡಿಸೆಂಬರ್ನಿಂದೀಚೆಗೆ ದೇಶದಲ್ಲಿ 99.3 ಲಕ್ಷ ಮಂದಿಗೆ ಸೋಂಕು ತಗುಲಿದ್ದು, 1.44 ಲಕ್ಷ ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ.