ಮಂಗಳೂರು: ಮಹಿಳಾ ವಕೀಲರ ಕೊಠಡಿಯ ಉದ್ಘಾಟನೆ
![ಮಂಗಳೂರು: ಮಹಿಳಾ ವಕೀಲರ ಕೊಠಡಿಯ ಉದ್ಘಾಟನೆ ಮಂಗಳೂರು: ಮಹಿಳಾ ವಕೀಲರ ಕೊಠಡಿಯ ಉದ್ಘಾಟನೆ](https://www.varthabharati.in/sites/default/files/images/articles/2020/12/17/271569-1608215898.jpg)
ಮಂಗಳೂರು, ಡಿ. 17: ನಗರದ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಮಂಗಳೂರು ವಕೀಲರ ಸಂಘದ ಕಚೇರಿ ಬಳಿ (ಹಳೆ ನ್ಯಾಯಾಲಯ ಕಟ್ಟಡ) ಮಹಿಳಾ ವಕೀಲರ ಕೊಠಡಿಯನ್ನು ಇಂದು ಶಾಸಕ ವೇದವ್ಯಾಸ ಕಾಮತ್ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ನನೆಗುದಿಗೆ ಬಿದ್ದಿರುವ ಮಂಗಳೂರು ವಕೀಲರ ಭವನ ನಿರ್ಮಾಣ ಕಾಮಗಾರಿಯನ್ನು ಶೀಘ್ರದಲ್ಲಿಯೇ ಕೈಗೆತ್ತಿ ಕೊಂಡು ಆದಷ್ಟು ಬೇಗನೆ ಪೂರ್ತಿಗೊಳಿಸಲು ಪ್ರುತ್ನಿಸುವುದಾಗಿ ಭರವಸೆ ನೀಡಿದರು.
ನ್ಯಾಯಾಲಯದ ಆವರಣದಲ್ಲಿ ಇರುವ 40 ಸೆಂಟ್ಸ್ ಜಾಗದಲ್ಲಿ ವಕೀಲರ ಭವನ ನಿರ್ಮಾಣ ಮಾಡುವ ಬಗ್ಗೆ 2017- 18 ರಲ್ಲಿ 8 ಕೋಟಿ ರೂ. ಮಂಜೂರಾಗಿದ್ದು, ಈಗ ಅದು ಯಾವ ಹಂತದಲ್ಲಿದೆ ಎಂಬುದನ್ನು ಪರಿಶೀಲಿಸುವುದಾಗಿ ಹೇಳಿದರು.
ಮಂಗಳೂರಿಲ್ಲಿ ಸುಮಾರು 2600 ಮಂದಿ ವಕೀಲರಿದ್ದು, ಇಲ್ಲಿ ವಕೀಲರ ಭವನ ಅಗತ್ಯ. ಭವನದ ನೀಲ ನಕಾಶೆಯನು್ನ ನೀಡಿದ್ದಲ್ಲಿ, ಅದನ್ನು ಸರಕಾರದ ಮುಂದಿಟ್ಟು ಕಾಮಗಾರಿಯನ್ನು ಆರಂಭಿಸಲು ಮಂಜೂರಾತಿ ದೊರಕಿಸಲಾಗುವುದು. ನ್ಯಾಯಾಲಯದ ಹಳೆಯ ಕಟ್ಟಡದಿಂದ ಹೊಸ ಕಟ್ಟಡಕ್ಕೆ ಹೋಗಲು ರ್ಯಾಂಪ್ ನಿರ್ಮಾಣ ಮಾಡುವ ಪ್ರಸ್ತಾವಕ್ಕೆ ನ್ಯಾಯಾಂಗ ಇಲಾಖೆಯಿಂದ ಅನುಮತಿ ದೊರಕಿಸಿ ಕೊಟ್ಟರೆ, ಅದನ್ನು ಸರಕಾರದ ಮುಂದಿಟ್ಟು ಕಾಮಗಾರಿ ಬಗ್ಗೆ ಸರಕಾರದ ಜತೆ ಮಾತನಾಡುವುದಾಗಿ ಶಾಸ ವೇದವ್ಯಾಸ ಕಾಮತ್ ಹೇಳಿದರು.
ವಕೀಲರ ಬೇಡಿಕೆಯಂತೆ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ವಕೀಲರಿಗೆ ವಿವಿಧ ಸೌಲಭ್ಯಗಳನ್ನು ಕಲ್ಪಿಸಲು ತನ್ನ ನಿಧಿಯಿಂದ 10 ಲಕ್ಷ ರೂ. ವಿಶೇಷ ಅನುದಾನವನ್ನು ಒದಗಿಸಿದ್ದೇನೆ. ಈ ಪೈಕಿ ಮಹಿಳಾ ವಕೀಲರ ಕೊಠಡಿಗೆ ಪೀಠೋಪಕರಣ, ರೆಸ್ಟ್ ರೂಂ ವ್ಯವಸ್ಥೆ, ಶೌಚಾಲಯ, ಮನೊರಂಜನೆಗೆ ಕ್ಯಾರಂ ಬೋರ್ಡ್ ಇತ್ಯಾದಿ ಸವಲತ್ತುಗಳನ್ನು ಕಲ್ಪಿಸಲು 5 ಲಕ್ಷ ರೂ. ಗಳನ್ನು ಈಗಾಗಲೇ ಖರ್ಚು ಮಾಡಲಾಗಿದೆ. ಇನ್ನುಳಿದ 5 ಲಕ್ಷ ರೂ. ಗಳನ್ನು ವಕೀಲರ ಸಂಘದ ಗ್ರಂಥಾಲಯ ಅಭಿವೃದ್ಧಿಗೆ ವಿನಿಯೋಗಿಸಲಾಗುವುದು ಎಂದು ಶಾಸಕ ಕಾಮತ್ ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಮುರಳೀಧರ ಪೈ ಮಾತನಾಡಿ, ವಕೀಲರ ಭವನವು ಆದಷ್ಟು ಶೀಘ್ರದಲ್ಲಿ ನಿರ್ಮಾಣವಾಗಲಿ; ಇದಕ್ಕೆ ನ್ಯಾಯಾಲಯದ ವತಿಯಿಂದ ಆಗ ಬೇಕಾಗಿರುವ ಎಲ್ಲಾ ಕೆಲಸಗಳನ್ನು ಮಾಡಿಸಿ ಕೊಡಲಾಗುವುದು ಎಂದರು.
ಮಂಗಳೂರು ಮಹಾನಗರ ಪಾಲಿಕೆಯ ಸ್ಥಾಯೀ ಸಮಿತಿ ಅಧ್ಯಕ್ಷ ಜಗದೀಶ್ ಶೆಟ್ಟಿ ಉಪಸ್ಥಿತರಿದ್ದರು. ವಕೀಲರ ಸಂಘದ ಅಧ್ಯಕ್ಷ ಎನ್. ನರಸಿಂಹ ಹೆಗ್ಡೆ ಸ್ವಾಗತಿಸಿ ಕಾರ್ಯದರ್ಶಿ ಎಚ್.ವಿ. ರಾಘವೇಂದ್ರ ವಂದಿಸಿದರು. ವಿಕ್ರಮ್ ಪಡುವೆಟ್ನಾಯ ಕಾರ್ಯಕ್ರಮ ನಿರ್ವಹಿಸಿದರು.
![](https://www.varthabharati.in/sites/default/files/images/galllery/2020/12/17/3.jpg)