ಕವಿ-ಕಾವ್ಯ ಸಮ್ಮೇಳನಾಧ್ಯಕ್ಷೆಯಾಗಿ ಹಿರಿಯ ಸಾಹಿತಿ ಡಾ.ವಸುಂಧರಾ ಭೂಪತಿ ಆಯ್ಕೆ

ಬಳ್ಳಾರಿ, ಡಿ.17: ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಕೇಂದ್ರ ಸಮಿತಿ 2021ರಲ್ಲಿ ಹಮ್ಮಿಕೊಳ್ಳಲಿರುವ ಅಖಿಲ ಕರ್ನಾಟಕ ತೃತೀಯ ಕವಿ-ಕಾವ್ಯ ಸಮ್ಮೇಳನಕ್ಕೆ ಸರ್ವಾಧ್ಯಕ್ಷರಾಗಿ ನಾಡಿನ ಹಿರಿಯ ಸಾಹಿತಿ ಡಾ.ವಸುಂಧರಾ ಭೂಪತಿ ಆಯ್ಕೆಯಾಗಿದ್ದಾರೆಂದು ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಕೊಟ್ರೇಶ್ ಎಸ್.ಉಪ್ಪಾರ್ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮ್ಮೇಳನ ಅಧ್ಯಕ್ಷತೆಗೆ ನಾಡಿನ ಹಿರಿಯ ಸಾಹಿತಿಗಳಾದ ಡಾ.ವಿನಯಾ ಒಕ್ಕುಂದ, ಡಾ.ಮಲ್ಲಿಕಾ ಘಂಟಿ ಹಾಗೂ ವಸುಂಧರಾ ಭೂಪತಿ ಹೆಸರುಗಳು ಪ್ರಸ್ತಾಪವಾಗಿತ್ತು. ಅಂತಿಮವಾಗಿ ವಸುಂಧರಾ ಭೂಪತಿ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ. ಸಮ್ಮೇಳನವನ್ನು 2021ರಲ್ಲಿ ಹಂಪಿಯಲ್ಲಿ ಹಮ್ಮಿಕೊಳ್ಳಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.
ರಾಜ್ಯ ಕಾರ್ಯದರ್ಶಿ ಪಿ.ದಿವಾಕರ ನಾರಾಯಣ ಮಾತನಾಡಿ, ನಮ್ಮ ಸಾಹಿತ್ಯ ವೇದಿಕೆಯು ಈಗಾಗಲೇ 2019, 2020ರಲ್ಲಿ ಕವಿ-ಕಾವ್ಯ ಪ್ರಥಮ ಹಾಗೂ ದ್ವಿತೀಯ ಸಮ್ಮೇಳನ ನಡೆಸಿದೆ. ಈಗ ವಸುಂಧರಾ ಭೂಪತಿ ಸರ್ವಾಧ್ಯಕ್ಷತೆಯಲ್ಲಿ ಮೂರನೇ ಕವಿ-ಕಾವ್ಯ ಸಮ್ಮೇಳನ ನಡೆಯುತ್ತಿರುವುದು ಸಂತಸ ತಂದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಈ ವೇಳೆ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ರಾಜ್ಯ ಸಂಘಟನಾ ಕಾರ್ಯದರ್ಶಿ ವಾಸು ಸಮುದ್ರವಳ್ಳಿ, ಬಳ್ಳಾರಿ ಜಿಲ್ಲಾಧ್ಯಕ್ಷ ಸತ್ಯಮೂರ್ತಿ, ಜಿಲ್ಲಾ ಉಪಾಧ್ಯಕ್ಷೆ ಡಾ. ಅಕ್ಕಮಹಾದೇವಿ, ತುಮಕೂರು ಜಿಲ್ಲಾಧ್ಯಕ್ಷ ಪ್ರಮೋದ್ ಜಿ.ಸಿ, ಕೊಪ್ಪಳ ಜಿಲ್ಲಾಧ್ಯಕ್ಷೆ ಅನಸೂಯ ಜಹಗೀರದಾರ, ಶಿವಮೊಗ್ಗ ಜಿಲ್ಲಾಧ್ಯಕ್ಷೆ ಕುಮುದ ಬಿ.ಸುಶೀಲಪ್ಪ, ಬಳ್ಳಾರಿ ಜಿಲ್ಲಾ ಕಾರ್ಯದರ್ಶಿ ಎನ್.ನಾಗರಾಜ್, ಹೊಸಪೇಟೆ ತಾಲೂಕು ಅಧ್ಯಕ್ಷ ಪಿ.ರಾಮಚಂದ್ರ ಮತ್ತಿತರರಿದ್ದರು.







