ಆನ್ಲೈನ್ ಕ್ಲಾಸ್ ಎಂದು ರೂಮಿಗೆ ಹೋದ ವಿದ್ಯಾರ್ಥಿನಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆ
ಕೊಳ್ಳೇಗಾಲ, ಡಿ.17: ವಿದ್ಯಾರ್ಥಿನಿಯೊರ್ವಳು ತಮ್ಮ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆನ್ನಲಾದ ಘಟನೆ ಕೊಳ್ಳೇಗಾಲ ಪಟ್ಟಣದ ಬಸವೇಶ್ವರ ನಗರ ಬಡಾವಣೆಯಲ್ಲಿ ಜರಗಿದೆ.
ಪಟ್ಟಣದ ಬಸವೇಶ್ವರ ನಗರ ಬಡಾವಣೆಯ 14ನೇ ಕ್ರಾಸ್ ನಲ್ಲಿ ವಾಸವಿರುವ ರೈಸ್ ಮಿಲ್ ಮಾಲಕ ನಂಜುಂಡಸ್ವಾಮಿ ಎಂಬವರ ಪುತ್ರಿ ಕೃತಿಕಾ (18) ಎಂಬಾಕೆಯೆ ಮೃತ ವಿದ್ಯಾರ್ಥಿನಿ.
ವಿಷಯ ತಿಳಿದ ಕೂಡಲೆ ಸ್ಥಳಕ್ಕೆ ಕೊಳ್ಳೇಗಾಲ ವೃತ್ತ ನಿರೀಕ್ಷಕ ಆರ್.ಶ್ರೀಕಾಂತ್, ಪಟ್ಟಣ ಠಾಣೆ ಪಿ.ಎಸ್.ಐ ತಾಜುದ್ದೀನ್ ಸಿಬ್ಬಂದಿಗಳೊಡನೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
''ಮೈಸೂರಿನ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿರುವ ಕೃತಿಕಾ ಕೋವಿಡ್ ಹಿನ್ನೆಲೆಯಲ್ಲಿ ಇತ್ತೀಚೆಗೆ ಕೊಳ್ಳೇಗಾಲದಲ್ಲಿರುವ ನಮ್ಮ ಮನೆಯಲ್ಲೆ ಇದ್ದಳು. ಮನೆಯಲ್ಲೆ ಆನ್ ಲೈನ್ ಕ್ಲಾಸ್ ಪಡೆಯುತ್ತಿದ್ದಳು. ಆದರೆ ಮಧ್ಯಾಹ್ನ 2 ಗಂಟೆಯ ಸಮಯದಲ್ಲಿ ಆನ್ ಲೈನ್ ಕ್ಲಾಸ್ ಇದೆ ಎಂದು ರೂಮಿಗೆ ಹೋಗಿ ಬಾಗಿಲು ಹಾಕಿ ಕೊಂಡವಳು ಸಾಯಂಕಾಲ 4.30 ವರೆಗೂ ಹೊರ ಬಾರದ ಹಿನ್ನೆಲೆ ರೂಮಿನ ಬಾಗಿಲು ತೆರೆದು ನೋಡಿದಾಗ ಪ್ಯಾನ್ಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ'' ಎಂದು ವಿದ್ಯಾರ್ಥಿನಿಯ ತಂದೆ ನಂಜುಂಡಸ್ವಾಮಿ ವಿವರಿಸಿದರು.
ಕೂಡಲೆ ಪೊಲೀಸರು ಮೃತದೇಹವನ್ನು ಕೆಳಗಿಳಿಸಿ ಕೊಳ್ಳೇಗಾಲ ಉಪ ವಿಭಾಗ ಆಸ್ವತ್ರೆಗೆ ಸಾಗಿಸಿದ್ದಾರೆ. ಈ ಸಂಬಂಧ ಮೃತಳ ತಂದೆ ನೀಡಿರುವ ದೂರಿನ ಮೇರೆಗೆ ಕೊಳ್ಳೇಗಾಲ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.